ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಲು ಕರವೇ ಮನವಿ
ಬೆಂಗಳೂರು, ಡಿಸೆಂಬರ್ 19: ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಉಪಮುಖ್ಯಮಂತ್ರಿಯವರ ಬಳಿ ಮನವಿ ಮಾಡಿದ್ದಾರೆ.
ಕನ್ನಡ ವಿಶ್ವವಿದ್ಯಾಲಯಕ್ಕೆ ಅಭಿವೃದ್ಧಿ ಅಂದಾಜುಗಳ ಅಂದಾಜು ವೆಚ್ಚ ಆರು ಕೋಟಿ ರುಪಾಯಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗು ತಾತ್ಕಾಲಿಕ ಸಿಬ್ಬಂದಿ ಮತ್ತು ಖಾಯಂ ಸಿಬ್ಬಂದಿಗಳಿಗೆ ಕೂಡಲೇ ಬಾಕಿ ವೇತನಗಳನ್ನು ನೀಡಬೇಕು ಎಂದು ಒತ್ತಾಯಿಸಲಾಯಿತು.
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಗಳನ್ನು ನೀಡಬೇಕು, ಸ್ಥಗಿತಗೊಂಡಿರುವ ಎಲ್ಲ ಕೋರ್ಸ್ಗಳನ್ನು ಪುನರಾರಂಭಿಸಬೇಕು, ಪ್ರವೇಶಾತಿ ಪ್ರಾರಂಭಗೊಳ್ಳಬೇಕು ಮತ್ತು ವಸತಿ ನಿಲಯಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಲಾಯಿತು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಬೇಕು, ದೂರಶಿಕ್ಷಣ ಕೋರ್ಸ್ಗಳನ್ನು ಪುನರಾರಂಬಿಸಬೇಕು ಎಂದು ಒತ್ತಾಯಿಸಲಾಯಿತು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆಡಳಿತ ಯಂತ್ರ ಚುರುಕುಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ವಿಶ್ವವಿದ್ಯಾಲಯವನ್ನು ಬೆಳೆಸುವುದು ಎಂದರೆ ಕೇವಲ ಕಟ್ಟಡಗಳನ್ನು ಕಟ್ಟುವುದಲ್ಲ, ಜ್ಞಾನವನ್ನು ಬೆಳೆಸುವುದು.
ಜ್ಞಾನವನ್ನು ಬೆಳೆಸುವೆಡೆಗೆ ವಿಶ್ವವಿದ್ಯಾಲಯ ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಮನವಿಯನ್ನು ಸ್ವೀಕರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ್, ಕೋವಿಡ್ ಕಾರಣದಿಂದ ಪ್ರಸಾರಾಂಗದ ಚಟುವಟಿಕೆಗಳು ಸ್ಥಗಿತಗೊಂಡು, ಆದಾಯವಿಲ್ಲದಂತಾಗಿದೆ.
ಹೀಗಾಗಿ ಅನುದಾನ ನೀಡಿಕೆಯಲ್ಲಿ ವಿಳಂಬವಾಗಿದೆ. ಆದರೆ ಆಗಿರುವ ಸಮಸ್ಯೆಗಳನ್ನು ಗಮನಿಸಿ, ಅನುದಾನ ಬಿಡುಗಡೆ ಮಾಡಲು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರೊಂದಿಗೆ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಅಶ್ವಿನಿಗೌಡ, ಪ್ರಧಾನ ಕಾರ್ಯದರ್ಶಿ ಸಹನಾ ಶೇಖರ್, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್, ಕರವೇ ಸಾಮಾಜಿಕ ಜಾಲತಾಣ ಘಟಕದ ಪ್ರಧಾನ ಸಂಚಾಲಕ ದಿನೇಶ್ ಕುಮಾರ್ ಎಸ್.ಸಿ. ಉಪಸ್ಥಿತರಿದ್ದರು.