ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಹೊಣೆ ನೂತನ ಸಿಎಂ ಮೇಲಿದೆ; ಕರವೇ
ಬೆಂಗಳೂರು, ಜುಲೈ 28: ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿಯವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಭಿನಂದನೆ ಸಲ್ಲಿಸಿದ್ದು, ರಾಜ್ಯದ ಹಲವು ಸಮಸ್ಯೆಗಳ ನಿವಾರಣೆಯ ನಿರೀಕ್ಷೆಯಿರುವುದಾಗಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ.
"ವಿದ್ಯಾರ್ಥಿ ದೆಸೆಯಲ್ಲೇ ಜನಪರ, ರೈತಪರ ಹೋರಾಟದ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಬಸವರಾಜ ಬೊಮ್ಮಾಯಿಯವರು ಜನರ ನಡುವಿನಿಂದಲೇ ಬಂದ ಜನಪರ ರಾಜಕಾರಣಿ. ಧಾರವಾಡದಿಂದ ನರಗುಂದದವರೆಗೆ ನಡೆದ ಪಾದಯಾತ್ರೆಯ ನೇತೃತ್ವ ವಹಿಸಿ ರೈತರ ಪರ ಚಳವಳಿ ಕಟ್ಟಿದವರಲ್ಲಿ ಬೊಮ್ಮಾಯಿ ಪ್ರಮುಖರು. ಇಂಥ ಒಬ್ಬ ಚಳವಳಿಗಾರ ನಾಡಿನ ಮುಖ್ಯಮಂತ್ರಿ ಹುದ್ದೆಗೆ ಏರಿರುವುದು ಅತ್ಯಂತ ಸಂತೋಷದ ವಿಷಯ" ಎಂದು ಹೇಳಿದರು.
ಉಚಿತ ಲಸಿಕೆ ಕೊಡಿ ಇಲ್ಲವೇ ಅಧಿಕಾರ ಬಿಡಿ: ಐತಿಹಾಸಿಕ ಪ್ರತಿಭಟನೆಗೆ ಕರವೇ ಸನ್ನದ್ಧ
"ಬಸವರಾಜ ಬೊಮ್ಮಾಯಿಯವರ ತಂದೆ ಎಸ್.ಆರ್. ಬೊಮ್ಮಾಯಿಯವರು ಕರ್ನಾಟಕ ರಾಜಕಾರಣದಲ್ಲಿ ಎಂದೂ ಮರೆಯಲಾಗದ ವ್ಯಕ್ತಿತ್ವದವರು. ಜನತಾ ಪರಿವಾರವನ್ನು ಕಟ್ಟಿ ಬೆಳೆಸುವುದರಲ್ಲಿ ಅವರ ಪಾತ್ರ ದೊಡ್ಡದು. ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹುದ್ದೆಯನ್ನು ನಿರ್ವಹಿಸುವರೆಂಬ ನಿರೀಕ್ಷೆ ನಮ್ಮದು. ದೇಶದ ಜಿಎಸ್ಟಿ ಕೌನ್ಸಿಲ್ ಸಭೆಗಳಲ್ಲಿ ಬಸವರಾಜ ಬೊಮ್ಮಾಯಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರು. ಹೀಗಾಗಿ ಜಿಎಸ್ ಟಿ ಹಂಚಿಕೆ, ಬಾಕಿ ಪಾವತಿಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳ ಕುರಿತು ಅವರಿಗೆ ಸ್ಪಷ್ಟ ಮಾಹಿತಿ ಇದೆ. ತಮ್ಮ ಪಕ್ಷದ ಕೇಂದ್ರ ನಾಯಕತ್ವಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು, ಕರ್ನಾಟಕಕ್ಕೆ ಬರಬೇಕಾದ ಜಿಎಸ್ ಟಿ ಬಾಕಿ ಮತ್ತು ಇತರ ಯೋಜನೆಗಳಿಗೆ ಅನುದಾನ ತಂದು ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಹೊಣೆಗಾರಿಕೆಯೂ ನೂತನ ಮುಖ್ಯಮಂತ್ರಿಗಳಿದೆ" ಎಂದರು.
Recommended Video
"ಬೊಮ್ಮಾಯಿಯವರು ಉತ್ತರ ಕರ್ನಾಟಕ ಭಾಗವನ್ನು ಪ್ರತಿನಿಧಿಸುತ್ತಾರೆ. ಹೀಗಾಗಿ ಉತ್ತರ ಕರ್ನಾಟಕದ ಜಿಲ್ಲೆಗಳ ಸಮಸ್ಯೆಗಳ ಕುರಿತು ಅವರಿಗೆ ಅರಿವಿದೆ. ಡಾ.ಡಿ.ಎಂ. ನಂಜುಂಡಪ್ಪ ವರದಿಯ ಸಮರ್ಪಕ ಅನುಷ್ಠಾನ ಸೇರಿದಂತೆ, ಆ ಭಾಗದ ಎಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವರೆಂಬ ಆಶಯ ಕರ್ನಾಟಕ ರಕ್ಷಣಾ ವೇದಿಕೆಯದು" ಎಂದು ತಿಳಿಸಿದರು.