2013 ರಾಜ್ಯೋತ್ಸವ ಪ್ರಶಸ್ತಿ ವಿರುದ್ಧ ಹೈಕೋರ್ಟ್ ಗೆ ಅರ್ಜಿ
ಬೆಂಗಳೂರಿನ ನಿವಾಸಿಯಾಗಿರುವ ಲೇಖಕ ಬಿ.ವಿ.ಸತ್ಯನಾರಾಯಣ ಹೈಕೋರ್ಟ್ ಮೊರೆ ಹೋಗಿದ್ದು, 2013ರ ರಾಜ್ಯೋತ್ಸವ ಪ್ರಶಸ್ತಿಯನ್ನಯ ಅರ್ಹರಿಗೆ ನೀಡಿಲ್ಲ ಎಂದು ದೂರು ನೀಡಿದ್ದಾರೆ. ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರು, ಪ್ರಶಸ್ತಿ ವಿಜೇತರ ವಿವರ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ಹೈಕೋರ್ಟ್ ಗೆ ಸಲ್ಲಿರುವ ದೂರಿನಲ್ಲಿ ಸತ್ಯನಾರಾಯಣ ಅವರು, ಡಾ.ಯು.ಆರ್.ಅನಂತಮೂರ್ತಿ ಅವರು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು ಎಂದು ಸರ್ಕಾರ ಪ್ರಕಟಿಸಿತ್ತು. ಆದರೆ, ಅವರು ಪ್ರಶಸ್ತಿ ಆಯ್ಕೆಗಾಗಿ ನಡೆದ ಸಭೆಯಲ್ಲಿ ಭಾಗವಹಿಸಿಲ್ಲ. ಸರ್ಕಾರ ಅವರಿಲ್ಲದೇ ಪ್ರಶಸ್ತಿ ಪಟ್ಟಿಯನ್ನು ಅಂತಿಮಗೊಳಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. (ಅನಂತಮೂರ್ತಿ ನೇತೃತ್ವದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ)
ಅರ್ಜಿಯಲ್ಲಿ ಸತ್ಯನಾರಾಯಣ ಅವರು, ನಾನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದೇನೆ. ಪ್ರಶಸ್ತಿಗೆ ನನ್ನ ಹೆಸರನ್ನು ಆಯ್ಕೆ ಮಾಡಬಹುದು ಎಂದು ಅನಂತಮೂರ್ತಿ ಅವರಿಗೆ ಮನವಿ ಮಾಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೆ. ಆದರೆ, ಅ.26ರಂದು ಅನಂತಮೂರ್ತಿ ಅವರು, ನನಗೆ ಅನಾರೋಗ್ಯದ ಕಾರಣ ಆಯ್ಕೆ ಸಮತಿ ಸಭೆಗೆ ಹಾಜರಾಗುತ್ತಿಲ್ಲ ಎಂದು ಹೇಳಿದ್ದರು. (58ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಕಲಿಗಳು ಇವರೇ!)
ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಗಾಗಿ ನಡೆದ ಮೊದಲ ಸಭೆಯಲ್ಲಿ ಆಯ್ಕೆ ಸಮತಿಯ ಅಧ್ಯಕ್ಷರಾದ ಅನಂತಮೂರ್ತಿ ಭಾಗವಹಿಸಿರಲಿಲ್ಲ. ಸಮಿತಿಯ ಎರಡನೇ ಸಭೆಯಲ್ಲಿಯೂ ಅವರು ಭಾಗವಹಿಸಲು ಚೇತರಿಸಿಕೊಂಡಿರಲಿಲ್ಲ. ಆದರೂ, ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಆಯ್ಕೆ ಸಮಿತಿಯ ಅಧ್ಯಕ್ಷರ ಗೈರು ಹಾಜರಿಯಲ್ಲಿ ಪ್ರಶಸ್ತಿ ಪಟ್ಟಿ ಸಿದ್ಧಗೊಂಡಿದ್ದು ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.