ಶ್ರೀಗುರು ಭಾಗವತದ ಕನ್ನಡ ಅವತರಣಿಕೆ, ವಿಶೇಷ ಡೈರಿ ಲೋಕಾರ್ಪಣೆ
ಬೆಂಗಳೂರು, ಅಕ್ಟೋಬರ್ 22: ಮಾನವರ ಜೀವನದಲ್ಲಿ ಸದ್ಗುರುಗಳ ಮಹತ್ವ ಹಾಗೂ ಪಾತ್ರ, ಗುರು-ಶಿಷ್ಯರ ನಡುವಿನ ಸಂಬಂಧ, ಗುರುತತ್ವ ಇತ್ಯಾದಿ ಮಹತ್ವಪೂರ್ಣ ವಿಷಯಗಳನ್ನೊಳಗೊಂಡ ಸಂಗ್ರಹ ಶ್ರೀ ಗುರು ಭಾಗವತದ ಐದು ಸಂಪುಟಗಳ ಕನ್ನಡ ಅವತರಣಿಕೆಯನ್ನು ಭಾನುವಾರ ಶ್ರೀ ಶಿರಡಿ ಸಾಯಿ ಮಂಗಲಂ ಟ್ರಸ್ಟ್ (ಹೊಸೂರು) ವತಿಯಿಂದ ಬಿಡುಗಡೆ ಮಾಡಲಾಯಿತು. ಖ್ಯಾತ ಚಿಂತಕ ಚಂದ್ರ ಭಾನು ಸತ್ಪಥಿಯವರು ಇದನ್ನು ರಚಿಸಿದ್ದಾರೆ.
ಶ್ರೀ ಶಿರಡಿ ಸಾಯಿ ಮಂಗಲಂ ಟ್ರಸ್ಟ್ ಹಾಗೂ ಪ್ರಸನ್ನ ಮಿಯಾಪುರಂ ಮತ್ತು ಅವರ ಪತ್ನಿ ರಶ್ಮಿ ಮಿಯಾಪುರಂ ಅವರ ವಿಶೇಷ ಕಾಳಜಿಯಿಂದ ಇದೇ ಮೊದಲ ಬಾರಿಗೆ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಲಾಗಿದೆ.
ಕರ್ಣಾಟಕ ಭಾಗವತ : ತಾಳೆಗರಿಯಿಂದ ಬಿಳಿಹಾಳೆಗೆ
ಈ ಕೃತಿಯನ್ನು ಸರಳವಾದ ಕನ್ನಡಕ್ಕೆ ಅನುವಾದಿಸುವ ಸವಾಲಿನ ಕಾರ್ಯವನ್ನು ಭಾಷಾಂತರಕಾರ್ತಿ ಸುಮನಾ ಬಾಲು ಹಾಗೂ ತಂಡದವರು ನೆರವೇರಿಸಿದ್ದಾರೆ. ಸುಮನಾ ಬಾಲು ರವರು ಎರಡು ಸಂಪುಟಗಳನ್ನು ಅವರು ಅನುವಾದಿಸಿದ್ದರೆ, ಇನ್ನುಳಿದ ಮೂರು ಸಂಪುಟಗಳನ್ನು ವಿನಯ ಶಾಸ್ತ್ರಿ ಮತ್ತು ಅವರ ಪತ್ನಿ ಪಲ್ಲವಿ ಹಾಗೂ ಸಿ.ಆರ್.ಕೃಷ್ಣಸ್ವಾಮಿಯವರು ಅನುವಾದಿಸಿದ್ದಾರೆ. 2018ರ ಏಪ್ರಿಲ್ನಲ್ಲಿ ಭಾಷಾಂತರ ಕಾರ್ಯ ಆರಂಭವಾಗಿದ್ದು, 2019ರ ಏಪ್ರಿಲ್ನಲ್ಲಿ ಪೂರ್ಣಗೊಂಡಿದೆ.
ಡಾ.ಸತ್ಪಥಿಯವರು ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಮಾಜಿ ಮಹಾನಿರ್ದೇಶಕರು ಮತ್ತು ಶ್ರೀ ಸಾಯಿಬಾಬಾ ಅವರ ಭಕ್ತರು. ತಮ್ಮ ಸೇವಾವಧಿಯಲ್ಲಿ ತಮ್ಮ ಪ್ರಶಂಸನೀಯ ಸೇವೆಗಾಗಿ ಮತ್ತು ಬಾಬಾರವರ ಮೇಲಿನ ಪ್ರೌಢ ಬರಹಗಳಿಗಾಗಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಜತೆಗೆ ಉತ್ತಮ ಜೀವನ ಹಾಗೂ ಆಧ್ಯಾತ್ಮಿಕ ಮುಕ್ತಿಗೆ ಗುರುವಿನ ಮಾರ್ಗದರ್ಶನದ ಅಗತ್ಯತೆಯ ಬಗೆಗೂ ಅವರು ಕೃತಿಗಳನ್ನು ರಚಿಸಿದ್ದಾರೆ.
ಶ್ರೀ ಗುರು ಭಾಗವತದ ಏಳು ಸಂಪುಟಗಳನ್ನು ಅವರು ರಚಿಸಿದ್ದು, ಮೂಲತಃ ಒಡಿಯಾ ಭಾಷೆಯಲ್ಲಿರುವ ಈ ಕೃತಿ ಬಳಿಕ ಇಂಗ್ಲಿಷ್, ಹಿಂದಿ, ಅಸ್ಸಾಮಿ, ಮರಾಠಿ, ಬಂಗಾಳಿ ಮತ್ತು ತೆಲುಗು ಭಾಷೆಗೆ ತರ್ಜುಮೆಗೊಂಡಿದೆ. ಐದು ಸಂಪುಟಗಳ ಜತೆಗೆ, ಶ್ರೀ ಗುರು ಭಾಗವತದ ವಿಶೇಷ ಉಲ್ಲೇಖಗಳನ್ನು ಒಳಗೊಂಡ ವಿಶೇಷ ಡೈರಿಯನ್ನು ಕೂಡಾ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
Recommended Video
ಖ್ಯಾತ ಕನ್ನಡ ಬರಹಗಾರ ಬಾಬು ಕೃಷ್ಣಮೂರ್ತಿ, ವರದರಾಜನ್ ಅಯ್ಯಂಗಾರ್ ಮತ್ತು ಅನಂತರಾಮು ಪುಸ್ತಕ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು. ಕನ್ನಡಿಗರಿಗೆ ಪ್ರಯೋಜನವಾಗುವ ರೀತಿಯಲ್ಲಿ ಈ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ ಬಗ್ಗೆ ಲೇಖಕರು ಸಂತಸ ವ್ಯಕ್ತಪಡಿಸಿದರು.
ಪುಸ್ತಕಕ್ಕೆ ಮುನ್ನುಡಿಯನ್ನು ಖ್ಯಾತ ನಿಘಂಟುಗಾರ, ಶತಾಯುಷಿ 106 ವರ್ಷ ವಯಸ್ಸಿನ ಪ್ರೊ.ಜಿ.ವೆಂಕಟಸುಬ್ಯಯ್ಯ ಬರೆದಿದ್ದಾರೆ. ಇಂಥ ಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗಿಲ್ಲ ಎಂದು ಹೇಳಿದ ಅವರು, ಪುಸ್ತಕದ ಅಂಶಗಳು ತೀರಾ ಸರಳವಾಗಿವೆ ಎಂದು ಶ್ಲಾಘಿಸಿದರು. ಡಾ.ಸತ್ಪತಿ ತಮ್ಮ ಭಾಷಣದಲ್ಲಿ, ಸರಳ, ಪ್ರೀತಿಯ ಹಾಗೂ ಅನುಕಂಪದ ಬದುಕು ಸಾಗಿಸುವಲ್ಲಿ ಗುರುಗಳು ತೋರಿಸಿದ ಪಥವನ್ನು ಅನುಸರಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು.
ವಿವಿಧ ಶಿರಡಿ ಸಾಯಿ ಮಂದಿರಗಳ ಭಕ್ತರು ಮತ್ತು ಟ್ರಸ್ಟಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವಿಶ್ವದ ಖ್ಯಾತ ನೃತ್ಯಗಾರ್ತಿ ಶ್ರೀಮತಿ ರಾಜೇಶ್ವರಿ ಸಾಯಿನಾಥ್ ಮತ್ತು ಶ್ರೀಮತಿ ವೈಷ್ಣವಿ ಯಜ್ಞೇಶ್ ಅವರ ನೇತೃತ್ವದ ತಂಡ ಶ್ರೀ ಗುರು ಭಾಗವತ ಕುರಿತಾದ ಆಕರ್ಷಕ ನೃತ್ಯ ಪ್ರದರ್ಶನ ನೀಡಿತು. ಗುರುಗಳ ಜೀವನದ ಬಗ್ಗೆ ಸಾಯಿಭಕ್ತರು ಪ್ರಹಸನ ಪ್ರಸ್ತುತಪಡಿಸಿದರು.