ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ; ಉಮೇಶ್ ಕತ್ತಿ ಹೇಳಿಕೆಗೆ ಕಸಾಪ ಕಿಡಿ
ಬೆಂಗಳೂರು ಜೂ. 28; ಅಖಂಡ ಕರ್ನಾಟಕ ರಾಜ್ಯವನ್ನು ಬೇರ್ಪಡಿಸುವ ಮಾತನಾಡಿದ ಅರಣ್ಯ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ನಡೆಯನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿ, ಸ್ವಾರ್ಥ ಹಾಗೂ ಸ್ವಹಿತಾಸಕ್ತಿ ಕಾರಣಗಳಿಂದ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಿಸುವ ಬಗ್ಗೆ ಸಚಿವ ಉಮೇಶ ಕತ್ತಿ ಹೇಳುತ್ತಾ ಬಂದಿದ್ದಾರೆ. ಇಂತಹ ಪ್ರಚೋದನಕಾರಿ ಹೇಳಿಕೆಯಿಂದ ಕನ್ನಡಿಗರಲ್ಲಿ ಗೊಂದಲ ಉಂಟಾಗುತ್ತದೆ ಎಂಬದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪದೇ ಪದೆ ರಾಜ್ಯ ಇಬ್ಬಾಗದ ಹೇಳಿಕೆ ನಾಡಿನಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಲು ಕಾರಣವಾಗುತ್ತಿದೆ. ಸರಕಾರ ಅವರಿಗೆ ಮುಖ್ಯ ಖಾತೆಯಾದ ಅರಣ್ಯ ಇಲಾಖೆಯನ್ನು ನೀಡಿದೆ. ಅದರಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರ ಬದಲು ಕನ್ನಡಿಗರಲ್ಲಿ ಪ್ರತ್ಯೇಕ ರಾಜ್ಯದ ಕಿಚ್ಚು ಹಚ್ಚುತ್ತಿರುವ ಇವರ ಹೇಳಿಕೆಗಳು ಖಂಡನೀಯ ಎಂದಿದ್ದಾರೆ.
ನಾಡಿನ ಏಕೀಕರಣಕ್ಕಾಗಿ ಮಹನೀಯರ ಶ್ರಮ ಅಪಾರ
ಕನ್ನಡ ನಾಡಿನ ಏಕೀಕರಣ ಸಂದರ್ಭದಲ್ಲಿ ಕನ್ನಡ ನೆಲಕ್ಕಾಗಿ ಅನೇಕ ಮಹನೀಯರು ಹೋರಾಟದಲ್ಲಿ ಪಾಲ್ಗೊಂಡು ನಾಡು ಒಂದಾಗಲು ಶ್ರಮಿಸಿದ್ದಾರೆ. ಅವರ ಹೋರಾಟ, ತ್ಯಾಗ, ಶ್ರಮದ ಫಲವಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಯಿತು. ಹೀಗೆ ಒಂದಾಗಿರುವ ಕನ್ನಡ ನೆಲ ಒಡೆಯುವ ಮಾತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ನಾಡೋಜ ಡಾ. ಮಹೇಶ್ ಜೋಶಿ ಹೇಳಿದ್ದಾರೆ.
ಮರಾಠಿಗರ ವಿರುದ್ಧ ಧ್ವನಿ ಎತ್ತಿ
ಕನ್ನಡಿಗರೇ ಹೆಚ್ಚಾಗಿರುವ ಇನ್ನೂ ಹಲವು ಪ್ರದೇಶಗಳು ನೆರೆಯ ರಾಜ್ಯಗಳಲ್ಲಿ ಉಳಿದುಕೊಂಡಿವೆ. ಕತ್ತಿಯವರ ಸ್ವಕ್ಷೇತ್ರ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿಗರ ಅಟ್ಟಹಾಸವನ್ನು ಮಟ್ಟ ಹಾಕುವ, ಅದರ ವಿರುದ್ಧ ಧ್ವನಿ ಎತ್ತುವ ಬದಲು ಪ್ರತ್ಯೇಕತೆಯ ಸ್ವರ ಎತ್ತುತ್ತಿದ್ದಾರೆ. 'ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು' ಎಂಬ ಸದಾಶಯದ ನುಡಿಯ ವಿರುದ್ಧ ವಿಭಜನೆಯ ಕತ್ತಿ ಅವರು ನುಡಿ ಸರಿಯಲ್ಲ ಎಂದರು.
ಉಮೇಶ್ ಕತ್ತಿ ಇತಿಹಾಸ ತಿಳಿದುಕೊಳ್ಳಲಿ:
1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆದಿತ್ತು. ಅಂದು ನಡೆದ ಮೊದಲ ಸಭೆಯಲ್ಲಿ ಸರ್.ಸಿದ್ದಪ್ಪ ಕಂಬಳಿಯವರು ಉಪಸ್ಥಿತಿ ಇತ್ತು. ಆಗ ಹುಯಿಲಗೋಳ ನಾರಾಯಣರಾಯರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆ ಮೊದಲ ಬಾರಿಗೆ ಮೊಳಗಿತ್ತು.
ಮದ್ರಾಸ್ ವಿಧಾನ ಸಭೆಯಲ್ಲಿ ಎ. ರಂಗನಾಥ ಮೊದಲಿಯಾರ್, ಜೆ. ಎ. ಸಲ್ಡಾನ್, ಎ. ಬಿ. ಶೆಟ್ಟಿ, ಡಾ. ನಾಗನಗೌಡ ಮುಂತಾದ ಸದಸ್ಯರು ಕರ್ನಾಟಕ ಏಕೀಕರಣವನ್ನು ಬೆಂಬಲಿಸಿದರೂ ಸರ್ಕಾರ ಅದನ್ನು ತಿರಸ್ಕರಿಸಿತು. ಮುಂಬೈ ವಿಧಾನಸಭೆಯಲ್ಲಿ 1919ರಲ್ಲಿ ವಿ. ಎನ್. ಜೋಗ್ ಕರ್ನಾಟಕ ಪ್ರಾಂತ ರಚನೆಗೆ ಕೋರಿ ಠರಾವು ಮಂಡಿಸಿದ್ದರು. ನಂತರ ಅದೂ ತಿರಸ್ಕೃತವಾಯಿತು. 1926ರಲ್ಲಿ ಸರ್ ಸಿದ್ದಪ್ಪ ಕಂಬಳಿ ಪುನಃ ಕರ್ನಾಟಕ ಪ್ರಾಂತ ರಚನೆಗೆ ಠರಾವು ಮಂಡಿಸಿದರಾದರೂ, ಕನ್ನಡಿಗರ ಬೆಂಬಲವಿಲ್ಲ ಎಂಬ ಕಾರಣಕ್ಕೆ ಸರ್ಕಾರ ಠರಾವನ್ನು ತಿರಸ್ಕರಿಸಿತು. ನಿರಂತರ ಹೋರಾಟ ಫಲವಾಗಿ ಕರ್ನಾಟಕ ರಾಜ್ಯ ಉದಯಿಸಿತು. ಈ ಇತಿಹಾಸವನ್ನು ಸಚಿವ ಉಮೇಶ ಕತ್ತಿಯವರು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಮಹೇಶ್ ಜೋಶಿ ಗುಡುಗಿದ್ದಾರೆ.
ಸಿಎಂ ಎಚ್ಚರಿಕೆ ನೀಡಲಿ
ಅಪಸ್ವರದ ರಾಗದಿಂದಲೇ ತಮ್ಮ ಅಸ್ತಿತ್ವ ತೋರಿಸಿಕೊಳ್ಳುತ್ತಿರುವ ಉಮೇಶ್ ಕತ್ತಿಯವರು ಕನ್ನಡಿಗರ ಹಾಗೂ ಅಖಂಡ ಕರ್ನಾಟಕದ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಹೇಳಿಕೆಯನ್ನು ಸಮಸ್ತ ಕನ್ನಡ ಜನತೆ ಬೆಂಬಲಿಸಬಾರದು. ಮಾತಿನಲ್ಲಿ ಹಿಡಿತ ಇಟ್ಟುಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.