ಕನ್ನಡ ರಾಜ್ಯೋತ್ಸವದ ಪೋಸ್ಟರ್ ವಿವಾದ; ಸೌಮ್ಯಾ ರೆಡ್ಡಿ ಸ್ಪಷ್ಟನೆ
ಬೆಂಗಳೂರು, ನವೆಂಬರ್ 24: ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಹಾಕಿದ್ದ ಪೋಸ್ಟರ್ ವಿವಾದಕ್ಕೆ ಕಾರಣವಾಗಿದೆ. ಈ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಯನಗರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಸಹ ಪಾಲ್ಗೊಂಡಿದ್ದರು. ವಿವಾದದ ಬಗ್ಗೆ ಶಾಸಕಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಜಯನಗರ 8ನೇ ಬ್ಲಾಕ್ನ ಓಂ ಕನ್ನಡ ಮರಿಯಮ್ಮನ ಕರುನಾಡ ಸಂಘ (ನೋಂ) ನವೆಂಬರ್ 22ರಂದು ಕನ್ನಡ ರಾಜ್ಯೋತ್ಸವ ಆಚರಿಸಿದೆ. ಇದಕ್ಕಾಗಿ ಹಾಕಲಾಗಿದ್ದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಜೆಪಿಯ ಹಲವು ನಾಯಕರು ಪೋಸ್ಟರ್ ಶೇರ್ ಮಾಡಿದ್ದು, ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೈರಲ್ ಆಯಿತು ಕನ್ನಡ ರಾಜ್ಯೋತ್ಸವದ ಪೋಸ್ಟರ್!
ಪೋಸ್ಟರ್ನಲ್ಲಿ ಬರೆದಿರುವ ಬರಹ ವಿವಾದ ಹುಟ್ಟು ಹಾಕಿದೆ. 'ಸಿರಿಗನ್ನಡಂ ಗೆಲ್ಗೆ, ಜೈ ಯೇಸು' ಮತ್ತು 'ಸಿರಿಗನ್ನಡಂ ಬಾಳ್ಗೆ ಜೈ ಕ್ರಿಸ್ತ' ಎಂಬ ಬರಹಗಳು ಪೋಸ್ಟರ್ನಲ್ಲಿವೆ. 'ಬಾರಿಸು ಕನ್ನಡ ಡಿಂದಿಮವ ಓ ಕರ್ನಾಟಕ ಹೃದಯ ಯೇಸು' ಎಂಬ ಬರಹಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಾವೇರಿ; ಫೆ. 26 ರಿಂದ 86ನೇ ಕನ್ನಡ ಸಾಹಿತ್ಯ ಸಮ್ಮೇಳನ
ಪೋಸ್ಟರ್ ಬಗ್ಗೆ ಶಾಸಕಿ ಸೌಮ್ಯಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. "ರಾಷ್ಟ್ರಕವಿ ಕುವೆಂಪು ಅವರ ಗೀತೆಯನ್ನು ತಿರುಚಿರುವುದರ ಕುರಿತ ವಿವಾದದಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ಎಳೆದು ತರುತ್ತಿರುವುದು ನನ್ನ ಗಮನಕ್ಕೆ ಬಂದಿದೆ" ಎಂದು ಹೇಳಿದ್ದಾರೆ.
ವಾಟಾಳ್ ನಾಗರಾಜ್ ಒಬ್ಬರೇ ಕನ್ನಡ ಅಭಿಮಾನಿ ಅಲ್ಲ
ನನ್ನ ಗಮನಕ್ಕೆ ಬಂದಿದೆ
ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು, 'ಜಯನಗರದ ಓಂ ಕನ್ನಡ ಮಾರಿಯಮ್ಮನ ಕರುನಾಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಗೀತೆಯನ್ನು ತಿರುಚಿರುವುದರ ಕುರಿತ ವಿವಾದದಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ಎಳೆದು ತರುತ್ತಿರುವುದು ನನ್ನ ಗಮನಕ್ಕೆ ಬಂದಿದೆ' ಎಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.
ತಪ್ಪನ್ನು ತಿದ್ದುಪಡಿ ಮಾಡಿ
'ರಾಷ್ಟ್ರಕವಿ ಕುವೆಂಪು ಅವರ ಮೇಲೆ ಅಪಾರ ಗೌರವವಿರುವ ನನಗೆ ಕನ್ನಡ ರಾಜ್ಯೋತ್ಸವ ಆಚರಣೆಯ ಈ ಆಮಂತ್ರಣ ಪತ್ರಿಕೆ ತಲುಪಿದ ಕೂಡಲೇ ದಿನಾಂಕ 18-11-20 ರಂದು ಮೇಲ್ಕಂಡ ಸಂಘಟನೆಯ ಅಧ್ಯಕ್ಷರಿಗೆ ಪತ್ರ ಬರೆದು ಆಹ್ವಾನ ಪತ್ರಿಕೆಯಲ್ಲಿ ಉಂಟಾಗಿರುವ ಅಕ್ಷರ ತಪ್ಪನ್ನು "ತಿದ್ದುಪಡಿ ಮಾಡುವ ಜೊತೆಗೆ ಕಾರ್ಯಕ್ರಮದ ದಿನಾಂಕವನ್ನು 22-11-20 ಬದಲಾಗಿ 23-11-20ಕ್ಕೆ ಮುಂದೂಡುವಂತೆ" ತಿಳಿಸಿದ್ದೆ' ಎಂದು ಸೌಮ್ಯಾ ರೆಡ್ಡಿ ಹೇಳಿದ್ದಾರೆ.
ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ
'ಜಯನಗರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕನ್ನಡ ಸಂಘಟನೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಶಾಸಕಿಯಾದ ನಾನು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತ ಬಂದಿದ್ದೇನೆ. ಕಳೆದ ತಿಂಗಳು ಸಹ ಶಾಸಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆಯುಧ ಪೂಜೆ ಆಚರಣೆಯ ಸಂದರ್ಭದಲ್ಲಿ, ಕಚೇರಿಯಲ್ಲಿ ಮುಂಚಿತವಾಗಿ ಇದ್ದ ಭಾವಚಿತ್ರವನ್ನೇ ಸಂವಿಧಾನದ ಪ್ರತಿಯೊಂದಿಗೆ ಪೂಜೆಗೆ ನಮ್ಮ ಸಿಬ್ಬಂದಿ ಬಳಸಿದ್ದರು. ಆಗಲು ಕೂಡ ಇದೇ ರೀತಿ ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಅನಗತ್ಯ ವಿವಾದ ಎಬ್ಬಿಸಿದ್ದರು' ಎಂದು ಹೇಳಿದ್ದಾರೆ.
ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ
'ಕ್ಷೇತ್ರದಲ್ಲಿ ಅವಿರತವಾಗಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಕೆಲವರು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡುವ ಸಲುವಾಗಿ ಈ ರೀತಿಯ ವ್ಯರ್ಥ ಪ್ರಯತ್ನಗಳನ್ನು ಪದೇ ಪದೇ ಮಾಡುತ್ತಿದ್ದಾರೆ. ಕನ್ನಡ ನಾಡು ನುಡಿಯ ಕುರಿತು ನನಗಿರುವ ಅಭಿಮಾನ ಮತ್ತು ಬದ್ಧತೆ ಎಂದೆಂದಿಗೂ ಪ್ರಶ್ನಾತೀತ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿಯ ರಕ್ಷಣೆಗೆ ನಾನು ಸದಾ ಸಿದ್ಧಳಿದ್ದೇನೆ' ಎಂದು ತಿಳಿಸಿದ್ದಾರೆ.