ಬೆಂಗಳೂರಿನ ಐಟಿ ಕಂಪನಿಯಲ್ಲಿ ಮೊಳಗಿದ ಕನ್ನಡ ಕಹಳೆ
ಬೆಂಗಳೂರು, ಡಿಸೆಂಬರ್ 1 : ಬೆಂಗಳೂರಿನ ಲಾಲ್ಬಾಗ್ ರಸ್ತೆಯಲ್ಲಿರುವ ಯುವರ್ ಪ್ರಾಕ್ಟೀಸ್ ಆನ್ ಲೈನ್ ಐಟಿ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಒನ್ಇಂಡಿಯಾ ಕನ್ನಡ ಪೋರ್ಟಲ್ ಸಂಪಾದಕರಾದ ಎಸ್.ಕೆ. ಶಾಮ ಸುಂದರ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಂಪನಿಯ ನಿರ್ದೇಶಕರಾದ ಶಾಂತರಾಜು ಹಾಗೂ ಕ್ಲಿಫರ್ಡ್ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಐಟಿ ಕಂಪನಿಯ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಮ್ ಅವರು, "ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳ ಜೊತೆಗೆ ಭಾಷೆಯ ಸ್ವರೂಪ ಕೂಡ ಬದಲಾಗುತ್ತ ಹೋಗುತ್ತದೆ. ಈ ಸಂದರ್ಭದಲ್ಲಿ ಈ-ಕಾಮರ್ಸ್ ಒಳಗೊಂಡು ಇಂಟರ್ನೆಟ್ನ ಎಲ್ಲ ಆಯಾಮಗಳಲ್ಲಿ ಕನ್ನಡ ಭಾಷೆ ಆವರಿಸುವ ಅಗತ್ಯವಿದೆ" ಎಂದರು. [ಸಿಂಗಪುರದಲ್ಲಿ 'ಕನ್ನಡ ಡಿಂಡಿಮ' - ದೀಪೋತ್ಸವ 2015]
ಈ ಸಂದರ್ಭದಲ್ಲಿ ಹಾಡು, ನೃತ್ಯ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕನ್ನಡದಲ್ಲಿ Dubsmash ಮಾಡುವ ಸ್ಪರ್ಧೆ ಏರ್ಪಡಿಸಿದ್ದು ಗಮನ ಸೆಳೆಯಿತು. ಕನ್ನಡೇತರರು ಸಹ ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷ. Dubsmash ಸ್ಪರ್ಧೆಯಲ್ಲಿ ಭಾಗವಹಿಸಿದ ವಿಡಿಯೋ ತುಣುಕುಗಳು ಇಲ್ಲಿವೆ. [ಮೆಟ್ರಿಕ್ ಸ್ಟ್ರೀಮ್ ಐಟಿ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ]
ದೀಪ ಬೆಳಗಿ ರಾಜ್ಯೋತ್ಸವ ಉದ್ಘಾಟನೆ
ಕನ್ನಡ ರಾಜ್ಯೋತ್ಸವ ಉದ್ಘಾಟಿಸುತ್ತಿರುವ ಕಂಪನಿಯ ನಿರ್ದೇಶಕ ಶಾಂತರಾಜು ಮತ್ತು ಕ್ಲಿಫರ್ಡ್.
ಕನ್ನಡದಲ್ಲೇ ಈ-ಕಾಮರ್ಸ್ ಆಗಬೇಕೆಂದ ಶಾಮ್
ಈ-ಕಾಮರ್ಸ್ ಒಳಗೊಂಡು ಇಂಟರ್ನೆಟ್ನ ಎಲ್ಲ ಆಯಾಮಗಳಲ್ಲಿ ಕನ್ನಡ ಭಾಷೆ ಆವರಿಸುವ ಅಗತ್ಯವಿದೆ ಎಂದು ಒನ್ಇಂಡಿಯಾ ಕನ್ನಡ ಪೋರ್ಟಲ್ ಸಂಪಾದಕ ಶಾಮ ಸುಂದರ ಹೇಳಿದರು.
ಬಾರಿಸು ಕನ್ನಡ ಡಿಂಡಿಮವ
ಟೆಕ್ಕಿಗಳು ಕನ್ನಡದ ಭಕ್ತಿ ಸಂಗೀತ, ಸಿನೆಮಾ ಹಾಡುಗಳನ್ನು ಹಾಡುತ್ತಿದ್ದರೆ ಕೇಳಲು ಏನೋ ರೋಮಾಂಚನ.
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಯುವರ್ ಪ್ರಾಕ್ಟೀಸ್ ಆನ್ ಲೈನ್ ಕಂಪನಿಯ ಯುವ ಬ್ರಿಗೇಡ್ ನಿಂದ ಕನ್ನಡ ಹಾಡಿಗೆ ಭರ್ಜರಿ ನರ್ತನ.
ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿರುವ ಕಂಪನಿಯ ಸಿಬ್ಬಂದಿ. ಒಟ್ಟಿನಲ್ಲಿ ಇಡೀ ವಾತಾವರಣವೇ ಕನ್ನಡಮಯವಾಗಿತ್ತು.
ಹಚ್ಚೇವು ಕನ್ನಡದ ದೀಪ
ಕಂಪನಿಯ ಮಹಿಳಾಮಣಿಗಳಿಂದ ಕನ್ನಡ ಭಕ್ತಿ ಹಾಡಿಗೆ ತಾಳಬದ್ಧ ನರ್ತನ. ಪ್ರತಿಯೊಂದು ಹಾಡಿಗೂ ಕಂಪನಿಯ ಕನ್ನಡಿಗರು, ಕನ್ನಡೇತರರು ಹುಚ್ಚೆದ್ದು ಕುಣಿದರು.
|
ಐಟಿ ಕಲರವಕ್ಕೆ ಜಗ್ಗೇಶ್ ಮೆಚ್ಚುಗೆ
ಈ ದಿನಕ್ಕಾಗಿ ನನ್ನ ಮನ ಕಾಯುತ್ತಿತ್ತು.. ಇನ್ನುಮುಂದೆ ಕನ್ನಡಕ್ಕೆ ಭಯವಿಲ್ಲಾ... ಸಿರಿಗನ್ನಡಂಗೆಲ್ಗೆ..ಬಾಳ್ಗೆ - ನವರಸ ನಾಯಕ ನಟ ಜಗ್ಗೇಶ್.