ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ವಿಧಿವಶ

By Mahesh
|
Google Oneindia Kannada News

ಬೆಂಗಳೂರು, ಡಿ.23: ಹಿರಿಯ ಕವಿ, ಲೇಖಕ, ಸಂಶೋಧನಕಾರ, ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಅವರು ಸೋಮವಾರ ಮಧ್ನಾಹ್ನ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಕೆಲ ಕಾಲದಿಂದ ಬಳಲುತ್ತಿದ್ದ ಶಿವರುದ್ರಪ್ಪ ಅವರು ಬನಶಂಕರಿ ಎರಡನೇ ಹಂತದಲ್ಲಿರುವ ಸ್ವಗೃಹದಲ್ಲಿ ಮಧ್ಯಾಹ್ನ 12.16ರ ಸುಮಾರಿಗೆ ಅಸುನೀಗಿದ್ದಾರೆ.

ಜನಮೆಚ್ಚಿದ ಕವಿ ಶಿವರುದ್ರಪ್ಪ ಅವರು ಪತ್ನಿಯರಾದ ರುದ್ರಾಣಿ, ಪದ್ಮ ಹಾಗೂ ಪುತ್ರರಾದ ಜಯದೇವ್, ಶಿವಪ್ರಸಾದ್, ಪುತ್ರಿ ಜಯಂತಿ ಹಾಗೂ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.

ರಾಷ್ಟ್ರಕವಿ ಶಿವರುದ್ರಪ್ಪ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾಳೆ (ಡಿ.24) ಸರ್ಕಾರಿ ರಜೆ ಘೋಷಿಸಿದ್ದಾರೆ. ಇಂದು ಹಾಗೂ ನಾಳೆ ಎರಡು ದಿನ ರಾಜ್ಯದಾದ್ಯಂತ ಶೋಕಾಚರಣೆ ಆಚರಿಸಲಾಗುವುದು. ಶಿವರುದ್ರಪ್ಪ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದಿದ್ದಾರೆ.[ಶಿವರುದ್ರಪ್ಪ ಮೆಚ್ಚಿದ ಹತ್ತು ಕವನಗಳು]

ಬೆಂಗಳೂರಿನ ಜ್ಞಾನ ಭಾರತಿಯ ಆವರಣದಲ್ಲಿ ರಾಷ್ಟ್ರಕವಿಗಳ ಅಂತಿಮ ಸಂಸ್ಕಾರ ನೆರವೇರಿಸಲು ವಿವಿಧ ವಿವಿ ಕುಲಪತಿಗಳಿಂದ ಮುಖ್ಯಮಂತ್ರಿಗಳಿಗೆ ಸೂಚನೆ. ಡಿ.26ರಂದು ಡಾ. ಜಿಎಸ್ ಶಿವರುದ್ರಪ್ಪ ಅವರ ಅಂತ್ಯಕ್ರಿಯೆ.[ಶಿವರುದ್ರಪ್ಪ ಕೊಟ್ಟ ಕೊಡುಗೆ ಜಯದೇವ್]

* 1926ರ ಫೆಬ್ರವರಿ 7 ರಂದು ಜನಿಸಿದ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರು ಶಿಕಾರಿಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು.
* ಮೈಸೂರಿನಲ್ಲಿ 1949ರಲ್ಲಿ ಬಿ.ಎ ಹಾಗೂ 1953ರಲ್ಲಿ ಎಂ.ಎ ಪದವಿ ಗಳಿಸಿದರು.
* ಶಿವರುದ್ರಪ್ಪ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಕುವೆಂಪು ಅವರ ಶಿಷ್ಯರಾಗಿದ್ದ ಶಿವರುದ್ರಪ್ಪ ಅವರು ಕುವೆಂಪು ಅವರ ಬರಹ ಹಾಗೂ ಬದುಕಿನಿಂದ ಪ್ರಭಾವಿತರಾಗಿದ್ದರು. ಶಿವರುದ್ರಪ್ಪ ಅವರ ವಿದ್ಯಾಭ್ಯಾಸ, ಪ್ರಶಸ್ತಿ ಗೌರವ, ಕೃತಿಗಳ ಕುರಿತು ಇನ್ನಷ್ಟು ಮಾಹಿತಿ ಮುಂದೆ ಓದಿ...

ಪರೀಕ್ಷೆಗಳು ಮುಂದೂಡಿಕೆ

ಪರೀಕ್ಷೆಗಳು ಮುಂದೂಡಿಕೆ

ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ವಿಧಿವಶರಾದ ಹಿನ್ನೆಲೆಯಲ್ಲಿ ನಾಳೆ (ಡಿ.24) ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಮುಕ್ತ ವಿವಿಯ ಎಲ್ಲ ಪರೀಕ್ಷೆಗಳನ್ನ ಮುಂದೂಡಲಾಗಿದ್ದು, ಡಿಸೆಂಬರ್ 27ಕ್ಕೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ನಾಳೆ ನಡೆಯಬೇಕಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನೂ ಮುಂದೂಡಲಾಗಿದ್ದು, ಜನವರಿ 6ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ವಿಟಿಯುನ ಬಿಇ, ಬಿಟೆಕ್, ಎಂಇ, ಎಂಸಿಎ, ಎಂಟೆಕ್ ಪರೀಕ್ಷೆಗಳನ್ನ ಮುಂದೂಡಲಾಗಿದ್ದು, ಜನವರಿ 4ಕ್ಕೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಉಪನ್ಯಾಸಕರ ನೇಮಕಾತಿ ಸಂದರ್ಶನವೂ ಮುಂದೂಡಲಾಗಿದೆ
ವಿದ್ಯಾಭ್ಯಾಸ, ವೃತ್ತಿ

ವಿದ್ಯಾಭ್ಯಾಸ, ವೃತ್ತಿ

* 1965ರಲ್ಲಿ ಸೌಂದರ್ಯ ಸಮೀಕ್ಷೆ ಕೃತಿಗೆ ಡಾಕ್ಟರೇಟ್ ಪಡೆದರು. ಕುವೆಂಪು ಅವರು ಶಿವರುದ್ರಪ್ಪ ಅವರಿಗೆ ಮಾರ್ಗದರ್ಶನ ಮಾಡಿದ್ದರು.
* 1949ರಲ್ಲಿ ಅಧ್ಯಾಪಕರಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ವೃತ್ತಿ ಆರಂಭಿಸಿದರು. ಶಿವರುದ್ರಪ್ಪ ಅವರ ತಂದೆ ಕೂಡಾ ಶಿಕ್ಷಕರಾಗಿದ್ದರು.
* 1963-66ರ ತನಕ ಹೈದರಾಬಾದಿನ ಉಸ್ಮಾನಿಯಾ ಕಾಲೇಜಿನಲ್ಲಿ ರೀಡರ್ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು.
* 1966ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಸೇರಿಕೊಂಡರು. ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದರು.
* 1984ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದರು.
* 1992ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಪ್ರಶಸ್ತಿ, ಗೌರವಗಳು

ಪ್ರಶಸ್ತಿ, ಗೌರವಗಳು

* ರಾಷ್ಟ್ರಕವಿ ನವೆಂಬರ್ 1, 2006(ಈ ಮುಂಚೆ ಎಂ ಗೋವಿಂದ ಪೈ, ಕುವೆಂಪು ಅವರಿಗೆ ನೀಡಲಾಗಿದೆ)
* ಸೋವಿಯೆಟ್ ಲ್ಯಾಂಡ್ ನೆಹರೂ ಪ್ರಶಸ್ತಿ 1973
* ಪಂಪ ಪ್ರಶಸ್ತಿ 1998
* ದಾವಣಗೆರೆಯಲ್ಲಿ ನಡೆದ 61ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
* ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ 1982
* ಹಂಪಿ ಕನ್ನಡ ವಿವಿ ನಾಡೋಜ ಪ್ರಶಸ್ತಿ
* ಸಾಹಿತ್ಯ ಕಲಾ ಕೌಸ್ತುಭ 2010
* ಕುವೆಂಪು ಹಾಗೂ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

ಕವನ ಸಂಕಲನಗಳು

ಕವನ ಸಂಕಲನಗಳು

* ಸಾಮಗಾನ
* ಚೆಲುವು-ಒಲವು
* ದೇವಶಿಲ್ಪಿ
* ದೀಪದ ಹೆಜ್ಜೆ
* ಅನಾವರಣ
* ತೆರೆದ ಬಾಗಿಲು
* ಗೊಡೆ
* ವ್ಯಕ್ತಮಾಧ್ಯಮ
* ತೀಥವಾಣಿ
* ಕಾರ್ತಿಕ
* ಕಾಡಿನ ಕತ್ತಲಲ್ಲಿ
* ಪ್ರೀತಿ ಇಲ್ಲದ ಮೇಲೆ
* ಚಕ್ರಗತಿ

ಶಿವರುದ್ರಪ್ಪ ಅವರ ಕುಟುಂಬ

ಶಿವರುದ್ರಪ್ಪ ಅವರ ಕುಟುಂಬ

ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಕುಟುಂಬದ ಜತೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳೆಗೆರೆ. ಚಿತ್ರ : ಶ್ರೀನಿವಾಸ್

ಇನ್ನಿತರ ಕೃತಿಗಳು

ಇನ್ನಿತರ ಕೃತಿಗಳು

* ಪರಿಶೀಲನಾ
* ವಿಮರ್ಶೆಯ ಪೂರ್ವ ಪಶ್ಚಿಮ
* ಸೌಂದರ್ಯ ಸಮೀಕ್ಷೆ (ಪಿಎಚ್ ಡಿಗೆ ಸಲ್ಲಿಸಿದ ಕೃತಿ)
* ಕಾವ್ಯಾರ್ಥ ಚಿಂತನೆ
* ಗತಿ ಬಿಂಬ
* ಅನುರಣನ
* ಪ್ರತಿಕ್ರಿಯೆ
* ಕನ್ನಡ ಸಾಹಿತ್ಯ ಸಮೀಕ್ಷೆ
* ಮಹಾಕಾವ್ಯ ಸ್ವರೂಪ
* ಕನ್ನಡ ಕವಿಗಳ ಕಾವ್ಯ ಕಲ್ಪನೆ
* ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ
* ಕುವೆಂಪು-ವ್ಯಕ್ತಿಚರಿತ್ರೆ

ಪ್ರವಾಸಿ ಕಥನ

ಪ್ರವಾಸಿ ಕಥನ

* ಮಾಸ್ಕೋದಲ್ಲಿ 22 ದಿನ(ಸೋವಿಯಟ್ ಲ್ಯಾಂಡ್ ನೆಹರೂ ಪ್ರಶಸ್ತಿ ಪುರಸ್ಕೃತ ಕೃತಿ)
* ಇಂಗ್ಲೆಂಡಿನಲ್ಲಿ ಚಾತುರ್ಮಾಸ
* ಅಮೆರಿಕದಲ್ಲಿ ಕನ್ನಡಿಗ
* ಗಂಗೆ ಶಿಖರಗಳಲ್ಲಿ( ಗಂಗಾ ನದಿ ತೀರದ ಪ್ರವಾಸ ಕಥನ)

ಶಿವರುದ್ರಪ್ಪ ಅವರ ವ್ಯಕ್ತಿಚಿತ್ರ

ಹಿರಿಯ ಸಾಹಿತಿ ಜಿಎಸ್ ಶಿವರುದ್ರಪ್ಪ ಅವರನ್ನು ಕುರಿತು ನವೀನ್ ಭಾರತಿ ಅವರು ತಯಾರಿಸಿದ ಸಾಕ್ಷ್ಯಚಿತ್ರ ಇಲ್ಲಿದೆ

English summary
Kannada poet, writer and researcher, Rashtrakavi GS Shivarudrappa passed away today(Dec.23) at his residence in Banashankari, Bangalore. He was 87.The writer who was awarded title of Rashtrakavi by the Government of Karnataka in 2006, November 1, was ailing for some time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X