ದಿನಪತ್ರಿಕೆ ಸಂಯುಕ್ತ ಕರ್ನಾಟಕಕ್ಕೆ 60ನೇ ಹುಟ್ಟುಹಬ್ಬದ ಸಂಭ್ರಮ
ಬೆಂಗಳೂರು, ಜನವರಿ 28 : ಕರ್ನಾಟಕದ ಪುರಾತನ ಮತ್ತು ಜನಪ್ರಿಯ ದಿನಪತ್ರಿಕೆಗಳಲ್ಲಿ ಒಂದಾಗಿರುವ 'ಸಂಯುಕ್ತ ಕರ್ನಾಟಕ'ದ ಬೆಂಗಳೂರಿನ ಆವೃತ್ತಿ ಆರಂಭವಾಗಿ 60 ವರ್ಷ ಸಂದಿರುವ ಸುಸಂದರ್ಭದಲ್ಲಿ, ಇದರ ಯಶಸ್ಸಿನಲ್ಲಿ ಭಾಗಿಯಾದ ಹಿರಿಯ ಪತ್ರಕರ್ತರನ್ನು ಸ್ಮರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸರಿಯಾಗಿ ಜನವರಿ 26ಕ್ಕೆ ಸಂಯುಕ್ತ ಕರ್ನಾಟಕದ ಬೆಂಗಳೂರಿನ ಆವೃತ್ತಿ ಶುರುವಾಗಿ 60 ವರ್ಷ (ಜನವರಿ 26, 1959). ಇಂದಿನ ಹಲವಾರು ಪತ್ರಕರ್ತರು ತಮ್ಮ ಪತ್ರಿಕಾ ಜೀವನವನ್ನು ಆರಂಭಿಸಿದ್ದು ಈ ಪತ್ರಿಕೆಯ ಮೂಲಕವೆ. ಉತ್ತಮ ಪತ್ರಕರ್ತರಾಗಿ ಬೆಳೆಯಲು ಕೂಡ ಈ ದಿನಪತ್ರಿಕೆ ವೇದಿಕೆ ಕಲ್ಪಿಸಿಕೊಟ್ಟಿದೆ.
ನೀವೇನೇ ಸಾಧನೆ ಮಾಡಿದ್ರೂ, ನೀವು ಕಥೆ ಹೇಳುವ ತಾತನೆ!
ಈಗಲೂ ಅಷ್ಟೇ ಜನಪ್ರಿಯತೆ ಉಳಿಸಿಕೊಂಡಿರುವ ಸಂಯುಕ್ತ ಕರ್ನಾಟಕ ಜನವರಿ 28, ಸೋಮವಾರ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ 60ನೇ ವರ್ಷದ ಸಮಾರಂಭ ಜರುಗಲಿದೆ. ಇದಕ್ಕೂ ಮೊದಲು 3 ಗಂಟೆಗೆ ಕೃಷ್ಣ ಪ್ರಸಾದ್ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ಇರಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಜೆ ಮುಂತಾದವರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಯುಬಿ ವೆಂಕಟೇಶ್ ಅವರು ವಹಿಸಲಿದ್ದಾರೆ.
ಬೆಂಗಳೂರಿನ ಆವೃತ್ತಿ ಆರಂಭವಾಗುವ ಒಂದು ವರ್ಷ ಮೊದಲೇ ಹುಬ್ಬಳ್ಳಿಯಿಂದ ವರದಿಗಾರರಾಗಿ ವೃತ್ತಿಜೀವನ ಆರಂಭಿಸಿದ ಹಿರಿಯ ಪತ್ರಕರ್ತ ಪ್ರಹ್ಲಾದ್ ಕುಳಲಿ ಮುಂತಾದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತಿದೆ. ಪ್ರಹ್ಲಾದ್ ಕುಳಲಿ ಅವರು ಸ್ಥಾನಿಕ ಸಂಪಾದಕರಾಗಿ 1997ರಲ್ಲಿ ನಿವೃತ್ತರಾಗುವ ಮುನ್ನ ಸಂಯುಕ್ತ ಕರ್ನಾಟಕದಲ್ಲಿ 40 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ್ದಾರೆ.
ಹಿರಿಯ ಉಪಸಂಪಾದಕರಾಗಿ ಸೇರಿ, ಸ್ಥಾನಿಕ ಸಂಪಾದಕರಾಗಿ ಇಪ್ಪತ್ತೇಳು ವರ್ಷ ಸೇವೆ ಸಲ್ಲಿಸಿ 1985ರಲ್ಲಿ ನಿವೃತ್ತರಾದ ಎಚ್ ಆರ್ ನಾಗೇಶ್ ರಾವ್ ಅವರನ್ನು ಸ್ಮರಿಸಲಾಗುತ್ತಿದೆ. ಎಚ್ ಆರ್ ನಾಗೇಶ್ ರಾವ್ ಅವರ ಪರವಾಗಿ ಅವರ ಮಗ ಖ್ಯಾತ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ ಅವರು ಪುರಸ್ಕಾರ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವೃತ್ತಪತ್ರಿಕೆ ನಡೆದುಬಂದ ದಾರಿಯನ್ನು ಕೂಡ ನೆನಪಿಸಿಕೊಳ್ಳಲಾಗುತ್ತಿದೆ.