ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂತಿರುಗಿಸಲು ಕುಂವೀ ನಿರ್ಧಾರ
ಬೆಂಗಳೂರು, ಅಕ್ಟೋಬರ್ 11 : ಭಾರತೀಯ ಲೇಖಕರ ಮೇಲೆ ಸನಾತನವಾದಿಗಳಿಂದ ಆಗುತ್ತಿರುವ ಹಲ್ಲೆ, ನಿರ್ಭಿಡೆಯಾಗಿ ಬರೆಯುವ ಹಕ್ಕಿನ ಸ್ವಾತಂತ್ರ್ಯ ಹರಣವನ್ನು ಖಂಡಿಸಿ ಖ್ಯಾತ ಕನ್ನಡ ಬರಹಗಾರ ಕುಂವೀ ಎಂದೇ ಖ್ಯಾತರಾಗಿರುವ ವೀರಭದ್ರಪ್ಪ ಕುಂಬಾರ್ ಅವರು ಕೂಡ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂತಿರುಗಿಸಲು ನಿರ್ಧರಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕಚೇರಿಗೆ ತೆರಳಿ, 2007ರಲ್ಲಿ ತಮ್ಮ 'ಅರಮನೆ' ಕಾದಂಬರಿಗೆ ನೀಡಲಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಕುಂವೀ ಮಾಧ್ಯಮಗಳಿಗೆ ತಿಳಿಸಿದ್ದಾರೆ. 'ಅರಮನೆ' ಕಾದಂಬರಿಯು 19ನೇ ಶತಮಾನದಲ್ಲಿನ ಬಳ್ಳಾರಿಯ ಸುತ್ತಮುತ್ತಲಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪರಿಸರವನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ. [ಸಾಹಿತಿಗಳಿಂದ ಪ್ರಶಸ್ತಿ ವಾಪಸ್]
ಖ್ಯಾತ ಕನ್ನಡ ಸಂಶೋಧಕ ಎಂಎಂ ಕಲಬುರ್ಗಿ ಅವರ ಹತ್ಯೆ(ಆಗಸ್ಟ್ 30)ಯನ್ನು ಖಂಡಿಸಿ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಕುಂವೀ ಹೇಳಿದ್ದಾರೆ. ಅಲ್ಲದೆ, ಇತ್ತೀಚೆಗೆ ಹತ್ಯೆಗೀಡಾದ ವಿಚಾರವಾದಿಗಳಾದ ನರೇಂದ್ರ ಧಾಬೋಲ್ಕರ್ ಮತ್ತು ಗೋವಿಂದ್ ಪನ್ಸಾರೆ ಅವರ ಹತ್ಯೆಯನ್ನೂ ತಾವು ಖಂಡಿಸುವುದಾಗಿ ಅವರು ಹೇಳಿದರು.
ಸನಾತನವಾದಿಗಳು ಸಮಾಜಕ್ಕೆ ಕಂಟಕವಾಗಿದ್ದು, ಇವರ ದಬ್ಬಾಳಿಕೆಯಿಂದಾಗಿ ಬರಹಗಾರರು ಭೀತಿಯಲ್ಲಿ ಬದುಕುವಂತಾಗಿದೆ ಎಂದು ಆರೋಪಿಸಿದ ಅವರು, ಇವರ ವಿರುದ್ಧ ಸರಕಾರ ಕೂಡ ಕ್ರಮ ತೆಗೆದುಕೊಳ್ಳಲು ವಿಫಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.