24ರಂದು ಚಲನಚಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ
ಸಿನಿಮಾರಂಗವು ಬೆಳೆದಂತೆಲ್ಲಾ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಕೊಡುತ್ತಾ ಬಂದ ರಾಜ್ಯ ಸರ್ಕಾರವು ಪ್ರಸ್ತುತ 30 ವಿಭಾಗಗಳಲ್ಲಿ 40 ಕ್ಕೂ ಹೆಚ್ಚು ಪ್ರಶಸ್ತಿ.
ಬೆಂಗಳೂರು, ಏಪ್ರಿಲ್ 20: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರದಾನ 2016 ಸಮಾರಂಭವನ್ನು ಏಪ್ರಿಲ್ 24 ರಂದು ಸೋಮವಾರ ಸಂಜೆ 6.00 ಗಂಟೆಗೆ ನಗರದ ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದೆ.
ಚಲನಚಿತ್ರ ಪ್ರಶಸ್ತಿ ಸಮಾರಂಭದ ಉದ್ಫಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಇದು 51ನೇ ವಾರ್ಷಿಕ ಪ್ರಶಸ್ತಿಯಾಗಿದ್ದು ರಾಜ್ಯ ಸರ್ಕಾರವು 1966 ರಿಂದ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡುತ್ತಾ ಬಂದಿದೆ.[ಕಾಶೀನಾಥ್ 50 ನಾಟೌಟ್: ಕನ್ನಡ ಸಿನಿ ಪ್ರೇಮಿಗಳಿಂದ ಸಲ್ಯೂಟ್]
1966 ರಲ್ಲಿ ವಿರೇಂದ್ರ ಪಾಟೀಲ್ ಮುಖ್ಯಮಂತ್ರಿ ಹಾಗೂ ರಾಮಕೃಷ್ಣ ಹೆಗಡೆ ಅವರು ವಿತ್ತ ಹಾಗೂ ವಾರ್ತಾ ಸಚಿವರಾಗಿದ್ದ ಸಂದರ್ಭದಲ್ಲಿ ಚಲನಚಿತ್ರರಂಗಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಶಸ್ತಿಗಳನ್ನು ನೀಡುವುದಾಗಿ ಘೋಷಿಸಲಾಯಿತು. 1966-67 ರಲ್ಲಿ ಮೊದಲ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಕೇವಲ ಮೊದಲ ಮೂರು ಅತ್ಯುತ್ತಮ ಚಿತ್ರಗಳಿಗೆ ನೀಡಲಾಗಿತ್ತು.
ಅದರಲ್ಲೂ ಮೊದಲ ಅತ್ಯುತ್ತಮ ಚಿತ್ರಕ್ಕೆ ಯಾವುದೇ ಚಿತ್ರವನ್ನು ಆಯ್ಕೆ ಮಾಡಿರಲಿಲ್ಲ. ಎಂ.ಆರ್. ವಿಠ್ಠಲ್ ನಿರ್ದೇಶನದ ನಕ್ಕರೆ ಅದೇ ಸ್ವರ್ಗ" ದ್ವಿತೀಯ ಅತ್ಯುತ್ತಮ ಚಿತ್ರ ಹಾಗೂ ಎ.ಸಿ. ನರಸಿಂಹಮೂರ್ತಿ ನಿರ್ದೇಶನದ ಸಂಧ್ಯಾರಾಗ ಚಿತ್ರ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದವು.
ಸಿನಿಮಾರಂಗವು ಬೆಳೆದಂತೆಲ್ಲಾ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಕೊಡುತ್ತಾ ಬಂದ ರಾಜ್ಯ ಸರ್ಕಾರವು ಪ್ರಸ್ತುತ 30 ವಿಭಾಗಗಳಲ್ಲಿ 40 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡುತ್ತಿದೆ.[ಆದವಾನಿ ಲಕ್ಷ್ಮಿದೇವಿ, ಕೆ.ವಿ.ರಾಜು ಗೆ ಚಲನಚಿತ್ರ ಜೀವಿತಾವಧಿ ಸಾಧನೆ ಪ್ರಶಸ್ತಿ]
2014 ಹಾಗೂ 2015 ರ ಕ್ಯಾಲೆಂಡರ್ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಘೋಷಿಸಿದಂತೆ ಈ ಬಾರಿ ವರನಟ ಡಾ: ರಾಜ್ಕುಮಾರ್ ಜನ್ಮದಿನದಂದೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ದಿನಾಂಕ 24 ರಂದು ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್. ರೋಷನ್ ಬೇಗ್ ಅವರು ವಹಿಸಲಿದ್ದಾರೆ.
ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಮಹಪೌರರಾದ ಶ್ರೀಮತಿ ಜಿ. ಪದ್ಮಾವತಿ, ವಿಧಾನ ಪರಿಷತ್ ಸದಸ್ಯರು ಹಾಗೂ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಅವರು ಮುಖ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ.
ವಿಧಾನ ಪರಿಷತ್ ಸದಸ್ಯರುಗಳಾದ ಬಿ.ಜೆ. ಪುಟ್ಟಸ್ವಾಮಿ, ಪುಟ್ಟಣ, ಟಿ.ಎ. ಶರವಣ, ಡಾ. ಜಯಮಾಲ ರಾಮಚಂದ್ರ, ಡಿ.ಯು. ಮಲ್ಲಿಕಾರ್ಜುನ, ಶ್ರೀಮತಿ ತಾರಾ ಅನೂರಾಧ, ಬಿ.ಎಸ್. ಸುರೇಶ್, ಎಂ. ನಾರಾಯಣ ಸ್ವಾಮಿ, ರಾಮಚಂದ್ರ ಗೌಡ ಹಾಗೂ ರಿಜ್ವಾನ್ ಅರ್ಷಾದ್ ಅವರು ಸೇರಿದಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಎಸ್. ವಿ. ರಾಜೇಂದ್ರ ಸಿಂಗ್ ಬಾಬು, ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಕೃಷ್ಣಮೂರ್ತಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ. ರಾ. ಗೋವಿಂದು ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.