'ಪ್ರಜಾ'ಕೀಯಕ್ಕೆ ಉಪೇಂದ್ರ ಮುನ್ನುಡಿ: ರುಪ್ಪೀಸ್ ರೆಸಾರ್ಟ್ ನಲ್ಲಿ ಘೋಷಣೆ
ಉಪೇಂದ್ರರಿಂದ ರಾಜಕೀಯ ಪ್ರವೇಶದ ಘೋಷಣೆ. ಬೆಂಗಳೂರಿನ ರುಪ್ಪೀಸ್ ರೆಸಾರ್ಟ್ ನಲ್ಲಿ ಘೋಷಿಸಿದ ನಟ. ರಾಜಕೀಯದ ಬದಲು ಪ್ರಜಾಕೀಯ ಮಾಡುವ ಉದ್ದೇಶವಿದೆ ಎಂದ ಸ್ಟಾರ್.
ಬೆಂಗಳೂರು, ಆಗಸ್ಟ್ 12: ಸಮಾಜದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹೊಸ ಆಲೋಚನೆಗಳನ್ನು ಹೊಂದಿರುವ ಜನರಿರುವ ವೇದಿಕೆಯೊಂದನ್ನು ಸೃಷ್ಟಿಸಲು ನಿರ್ಧರಿಸಿರುವುದಾಗಿ ಚಿತ್ರ ನಟ ಉಪೇಂದ್ರ ಘೋಷಿಸಿದರು.
ಹೊರವಲಯದಲ್ಲಿರುವ ರುಪ್ಪೀಸ್ ರೆಸಾರ್ಟ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಹಾಗಾಗಿ, ಇಲ್ಲಿ ಯಾರೇ ರಾಜರು ಎಂಬ ಪದ ಬಳಕೆ ಸರಿಯಲ್ಲ. ಇಂದಿನ ರಾಜಕೀಯ ಎಂಬ ಪದವು ಪ್ರಜಾಪ್ರಭುತ್ವಕ್ಕೆ ಸರಿಹೊಂದುವುದಿಲ್ಲ. ಇಂಥದ್ದೊಂದು ಪರಿಕಲ್ಪನೆಯೊಂದಿಗೆ ಪ್ರಜಾಕೀಯ ಮಾಡಲು ನಾನು ಸಿದ್ಧನಾಗಿದ್ದು, ಇದಕ್ಕಾಗಿ ಪ್ರಜಾಕೀಯ ಮಾಡಲು ನಿರ್ಧರಿಸಿದ್ದಾಗಿ ಅವರು ತಿಳಿಸಿದರು.
ಖಾಕಿ ಬಣ್ಣದ ಶರ್ಟು ಧರಿಸಿ ಸುದ್ದಿಗೋಷ್ಠಿಯಲ್ಲಿ ಬಂದಿದ್ದ ಅವರು, ತಾವು ಕಾರ್ಮಿಕನಾಗಿರಬೇಕೆಂದು ಸಾಂಕೇತಿಕವಾಗಿ ತೋರಿಸಲು ತಾವು ಖಾಕಿ ಅಂಗಿ ಧರಿಸಿರುವುದಾಗಿ ತಿಳಿಸಿದರು. ಅವರು ಹೇಳಿದ ಮಾತುಗಳ ಹೈಲೈಟ್ಸ್ ಇಲ್ಲಿವೆ.
- ಶ್ರಮಿಕ ವರ್ಗದಿಂದಲೇ ಸರ್ಕಾರ, ಸಮಾಜ ಮುನ್ನಡೆಯುತ್ತಿರುವುದು. ಆದರೆ, ಅವರಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ.
- ಇಂದು ಒಂದು ರಾಜಕೀಯ ಪಕ್ಷ ಕಟ್ಟಬೇಕೆಂದರೆ, ಹಣಬಲ ಬೇಕೇಬೇಕು ಎಂಬಂತಾಗಿದೆ. ಆದರೆ, ಈ ಹಣಬಲವಿಲ್ಲದೆ, ಕೇವಲ ಜನಬಲದಿಂದಲೇ ನಾವು ಈ ಸಮಾಜವನ್ನು ಮತ್ತೆ ಕಟ್ಟಬಹುದು ಎಂಬ ಆಲೋಚನೆ ನನ್ನದು.
- ನಾನು ಪಕ್ಷ ಕಟ್ಟಲು ಹಲವರಿಂದ ದುಡ್ಡು ತೆಗೆದುಕೊಂಡರೆ, ಒಂದು ವೇಳೆ ಅಧಿಕಾರ ಸಿಕ್ಕಾಗ ಅವರಿಗೆ ಆ ದುಡ್ಡು ಮರಳಿಸಲು ನಾನೇ ಅವರಿಗೆ ಹಲವಾರು ದಾರಿ ಮಾಡಿಕೊಡಬೇಕಾಗುತ್ತದೆ. ಇದು ನನಗಿಷ್ಟವಿಲ್ಲ. ಹಾಗಾಗಿ, ನಾನು ಯಾವುದೇ ಹಣ, ದೇಣಿಗೆ, ಕೊಡುಗೆಗಳಿಲ್ಲದ ಒಂದು ಜನ ಸಾಮಾನ್ಯರೇ ಇರುವಂಥ ವೇದಿಕೆ ರೂಪಿಸುತ್ತೇನೆ.
- ರೋಷಾವೇಶದಿಂದ ನನ್ನ ಹಿಂದೆ ಜನರು ಬರುವುದು ಬೇಕಿಲ್ಲ. ಸಮಾಜದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ತಮ್ಮದೇ ಆದ ಹೊಸ ಆಲೋಚನೆಗಳನ್ನು ಇಟ್ಟುಕೊಂಡವರು ಮಾತ್ರ ನಮ್ಮಲ್ಲಿಗೆ ಬರಲಿ. ಅಂಥವರಿಗಾಗಿಯೇ ಈ ವೇದಿಕೆಯನ್ನು ಸಿದ್ಧಪಡಿಸಲು ನಿರ್ಧರಿಸಿದ್ದೇನೆ.
- ನಮ್ಮ ಸಂಘಟನೆಗೆ ಇನ್ನೂ ನಿಖರವಾದ ಹೆಸರನ್ನಿಟ್ಟಿಲ್ಲ. ಸದ್ಯಕ್ಕೆ ಇದನ್ನು ಪ್ರಜಾಕೀಯ ಎಂದು ಕರೆಯಲು ಇಚ್ಛಿಸುತ್ತೇನೆ.
- ಪಕ್ಷ, ಚಿಹ್ನೆ ಬಗ್ಗೆ ಈಗಲೇ ಏನೂ ಹೇಳಲಾರೆ. ಏಕೆಂದರೆ, ಪಕ್ಷ ಕಟ್ಟಲು, ಚಿಹ್ನೆ ಹೊಂದಲು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಬೇಕು. ಅವರು ಅನುಮತಿ ನೀಡಿದ ಮೇಲಷ್ಟೇ ಪಕ್ಷ, ಲಾಂಛನ ಎಲ್ಲವನ್ನೂ ಪ್ರಕಟಿಸಬಹುದು. ಆದರೆ, ಅದಕ್ಕೆ ಸಾಕಷ್ಟು ಸಮಯ ಬೇಕಾಗುವುದರಿಂದ ಸದ್ಯಕ್ಕೆ ನನ್ನೊಂದಿಗೆ ಸಮಾನ ಮನಸ್ಕರು ಸೇರುವುದನ್ನು ನಾನು ವೇದಿಕೆ ಎಂದು ಕರೆಯಲಿಚ್ಛಿಸುತ್ತೇನೆ.
- ನನಗೆ ಯಾವುದೇ ಪಕ್ಷದ, ರಾಜಕಾರಣಿಗಳ ಬಗ್ಗೆ ಅಸಮಾಧಾನವಿಲ್ಲ. ಜೆಡಿಎಸ್, ಕಾಂಗ್ರೆಸ್ ಅಥವಾ ಬಿಜೆಪಿ - ಈ ಮೂರೂ ಪಕ್ಷಗಳಲ್ಲಿ ಯಾರೇ ಒಳ್ಳೇ ಕೆಲಸ ಮಾಡಿದರೂ ಅವರನ್ನು ನಾವು ಬೆಂಬಲಿಸುತ್ತೇವೆ.
- ಜನರಿಂದ ಐಡಿಯಾ ಸ್ವಾಗತ. ರುಪ್ಪೀಸ್ ರೆಸಾರ್ಟ್ ವಿಳಾಸಕ್ಕೆ ಅಥವಾ ಇ-ಮೇಲ್ ವಿಳಾಸಗಳಾದ [email protected], [email protected], [email protected] ಇವುಗಳಿಗೆ ತಮ್ಮ ಆಲೋಚನೆಗಳನ್ನು ಸಲ್ಲಿಸಬಹುದು.