ಕನ್ನಡೇತರರಿಗಾಗಿ ಬಿಟಿಎಂ ಲೇಔಟಲ್ಲಿ ಕನ್ನಡ ಕಲಿಕೆ
ಬೆಂಗಳೂರು, ಅ. 26 : ಕನ್ನಡ ರಾಜ್ಯೋತ್ಸವ ಹತ್ತಿರ ಬರುತ್ತಿದ್ದಂತೆ ಬೆಂಗಳೂರಿನಲ್ಲಿ ಕನ್ನಡ ಪ್ರೇಮ ಜಾಗೃತವಾಗುತ್ತಿದೆ, ಕನ್ನಡಪರ ಕಾರ್ಯಕ್ರಮಗಳು ಗರಿಗೆದರುತ್ತಿವೆ. ಅದರಲ್ಲೊಂದು ಬೆಂಗಳೂರಿನಲ್ಲಿದ್ದು ಕನ್ನಡ ಕಲಿಯಲು ಉತ್ಸುಕರಾಗಿರುವ ಕನ್ನಡೇತರ ನಿವಾಸಿಗಳಿಗೆ ಕನ್ನಡ ಮಾತಾಡುವುದನ್ನು ಮತ್ತು ಬರೆಯುವುದನ್ನು ಕಲಿಸುವ ಕಾರ್ಯಕ್ರಮ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಿಟಿಎಂ ಬಡಾವಣೆಯ ನಿವಾಸಿಗಳು ಈ ಕಾರ್ಯಕ್ರಮವನ್ನು ಜಂಟಿಯಾಗಿ ಈ ಯೋಜನೆಯನ್ನು ರೂಪಿಸಿದ್ದಾರೆ. ಕನ್ನಡ ಕಲಿಯಲು ಉತ್ಸುಕತೆ ಇರುವವರಿಗೆ ಕನ್ನಡವನ್ನು ಇಲ್ಲಿ ಉಚಿತವಾಗಿ ಕಲಿಸಲಾಗುತ್ತಿದೆ.
ಕನ್ನಡ ಕಲಿಸುವ ಕಾರ್ಯಕ್ರಮಕ್ಕೆ ಅ.20ರಂದು ಭಾನುವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಅಚ್ಚರಿಯೆಂಬಂತೆ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ಮೂಲದ 27 ಕನ್ನಡೇತರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಆಯೋಜಕರಿಗೆ ಭಾರೀ ಉತ್ಸಾಹ ತುಂಬಿದೆ.
ಬಿಟಿಎಂ ಬಡಾವಣೆಯ ಎರಡನೇ ಹಂತದಲ್ಲಿರುವ ವಿನಾಯಕ ದೇವಸ್ಥಾನದ ಹಿಂಬದಿ ಇರುವ ಸ್ಥಳದಲ್ಲಿ ಈ ತರಗತಿಗಳನ್ನು ನಡೆಸಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವೃತ್ತಿಪರ ಶಿಕ್ಷಕರು ಈ ತರಗತಿಗಳನ್ನು ನಡೆಸುತ್ತಿದ್ದಾರೆ.
ಶ್ನೀಡರ್ ಎಲೆಕ್ಟ್ರಿಕ್ ಕಂಪನಿಯಲ್ಲಿ ಹಿರಿಯ ಅಧಿಕಾರಿ ಆಗಿರುವ ಎಚ್.ಎಸ್. ಕೃಷ್ಣಪ್ರಸಾದ್ ಅವರು ಕನ್ನಡ ಕಲಿಕಾ ಆಂದೋಲನಕ್ಕೆ ನಾಂದಿ ಹಾಡಿದ್ದಾರೆ. "ಇತರ ರಾಜ್ಯಗಳ, ಕನ್ನಡ ಬಾರದಿರುವ ಬೆಂಗಳೂರು ನಿವಾಸಿಗಳು ಬಸ್ಸಿನಲ್ಲಿ, ಆಟೋ ಬಳಸುವಾಗ, ಸರಕಾರಿ ಕಚೇರಿಗಳಿಗೆ ಹೋದಾಗ ತೊಂದರೆ ಅನುಭವಿಸಬಾರದು ಎನ್ನುವ ಉದ್ದೇಶದಿಂದ ಈ ತರಗತಿಗಳನ್ನು ಆರಂಭಿಸಲಾಗಿದೆ" ಎಂದು ಕೃಷ್ಣಪ್ರಸಾದ್ ಹೇಳುತ್ತಾರೆ.
ಈ ಪ್ರಯತ್ನಕ್ಕೆ ಭಾಗವಹಿಸುವವರಿಂದ ಅತ್ಯುತ್ತಮ ಪ್ರಶಂಸೆ ಕೂಡ ವ್ಯಕ್ತವಾಗಿದೆ.
60 ವರ್ಷದ ತಮಿಳುನಾಡಿನ ಸಾವಿತ್ರಿ ಚೆಲ್ಲಪ್ಪ ಅವರು, "ಇತರೆ ಭಾಷೆಯವರಿಗೆ ಸಾರ್ವಜನಿಕ ಸಾರಿಗೆಯಲ್ಲಿ ಅಡ್ಡಾಡುವಾಗ ತುಂಬಾ ತೊಂದರೆಯಾಗುತ್ತದೆ. ಏಕೆಂದರೆ ಅಲ್ಲಿ ಹೆಚ್ಚಾಗಿ ಕನ್ನಡ ಅಕ್ಷರ ಮತ್ತು ಅಂಕಿಗಳನ್ನು ಬಳಸುತ್ತಾರೆ. ಕನ್ನಡ ಭಾಷೆ ಕಲಿಯುವ ಅವಕಾಶ ತಾನಾಗಿಯೇ ದೊರೆತಾಗ ಕೂಡಲೆ ತರಗತಿಗೆ ಸೇರಿಕೊಂಡೆ" ಎಂದು ಸಂತೋಷದಿಂದ ನುಡಿಯುತ್ತಾರೆ.
ಹೈದರಾಬಾದ್ ಮೂಲದ ನವೀನ್ ಫ್ರಾನ್ಸಿಸ್ ಪ್ರಕಾರ, "ನಾನು ಬೆಂಗಳೂರಿನಲ್ಲಿ 2005ರಿಂದ ವಾಸವಿದ್ದೇನೆ. ಕನ್ನಡ ಅರ್ಥವಾಗುತ್ತಾದರೂ ಅದು ತೆಲುಗಿಗಿಂತ ವಿಭಿನ್ನ. ಕನ್ನಡವನ್ನು ಪೂರ್ತಿಯಾಗಿ ಕಲಿಯುವುದರಿಂದ ನಾನು ಪೂರ್ತಿ ಬೆಂಗಳೂರಿಗನಾಗುತ್ತೇನೆ ಎಂಬ ಭಾವನೆಯಿಂದ ಈ ತರಗತಿಗಳನ್ನು ಸೇರಿಕೊಂಡಿದ್ದೇನೆ."
ಈ ತರಗತಿಗಳು ಒಂದು ಬಡಾವಣೆಯಲ್ಲಿ ಮಾತ್ರವಲ್ಲ ಬೆಂಗಳೂರಿನಲ್ಲಿನ ಎಲ್ಲ ಲೇಔಟುಗಳಲ್ಲಿ ಆರಂಭವಾಗಬೇಕು ಮತ್ತು ನಿರಂತರವಾಗಿ ನಡೆಯುತ್ತಿರಬೇಕು. ಆಗ ಮಾತ್ರ ಕನ್ನಡೇತರರಲ್ಲಿ ಕನ್ನಡತನವನ್ನು ತುಂಬಲು ಸಾಧ್ಯ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರು ಎಲ್ಲ ಕಡೆಗಳಲ್ಲಿ ಕನ್ನಡವನ್ನು ಬಳಸಲು ಮುಂದಾಗಬೇಕು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ವಿಳಾಸ
:
ಥಿಂಕ್
ವಿದ್ಯಾ
ಲರ್ನಿಂಗ್
ಪ್ರೈ.ಲಿ.
#867,
25ನೇ
ಮುಖ್ಯ
ರಸ್ತೆ,
4ನೇ
ಅಡ್ಡರಸ್ತೆ,
ಬಿಟಿಎಂ
ಲೇಔಟ್
-
ಎರಡನೇ
ಹಂತ,
ಬೆಂಗಳೂರು
-
560076
ದೂರವಾಣಿ
:
09590014159
ವಿನಾಯಕ
ದೇವಸ್ಥಾನದ
ಹಿಂದೆ
ಈಮೇಲ್
:
[email protected]