ಮದುವೆಗೆ ಒಲ್ಲೆ ಅಂದ ಪ್ರೇಮಿ, ನೊಂದು ವಿಷ ಸೇವಿಸಿ ನಟಿ ಸಾವು
ಬೆಂಗಳೂರು, ಜೂನ್ 1: ನಗರದ ತಾವರೆಕೆರೆಯಲ್ಲಿ ಕನ್ನಡ ಚಲನಚಿತ್ರ, ಕಿರುತೆರೆ ನಟಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ತಾವರೆಕೆರೆಯ ಕೃಷ್ಣಮೂರ್ತಿ ಲೇಔಟಿನ ನಿವಾಸಿ ಚಂದನಾ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಪ್ರಾಶನ ಮಾಡಿದ್ದ ಚಂದನಾರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಕನ್ನಡ ಕಿರುತೆರೆ, ಜಾಹೀರಾತು, ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಚಂದನಾ ಸಾವಿಗೆ ಆಪ್ತರು, ಬಂಧುಮಿತ್ರರು ಕಂಬನಿ ಮಿಡಿದಿದ್ದಾರೆ.
ವಿಷ ಸೇವನೆ ಸೆಲ್ಫಿ ವಿಡಿಯೋ ಮಾಡಿರುವ ಚಂದನಾ ಅವರು ತಮ್ಮ ಪ್ರಿಯಕರ ದಿನೇಶ್ ಎಂಬುವರ ಮೇಲೆ ಆರೋಪ ಮಾಡಿದ್ದಾರೆ. ದಿನೇಶ್ ಅವರು ಸದ್ಯ ನಾಪತ್ತೆಯಾಗಿದ್ದಾರೆ. ವಿಷ ಸೇವಿಸಿ, ಜೀವನ್ಮರಣ ಹೋರಾಟ ನಡೆಸಿದ್ದ ಚಂದನಾರನ್ನು ದಿನೇಶ್ ಅವರೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕಿತ್ಸೆಗೆ ಚಂದನಾ ಸ್ಪಂದಿಸದಿದ್ದಾಗ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂಬ ಸುದ್ದಿಯಿದೆ. ಘಟನಾ ಸ್ಥಳಕ್ಕೆ ಸುದ್ದುಗುಂಟೆ ಪಾಳ್ಯ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಸೆಲ್ಫಿ ವಿಡಿಯೋ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಎಫ್ ಎಸ್ ಎಲ್ ವರದಿ ಬಂದ ನಂತರ ಹೆಚ್ಚಿನ ವಿವರ ಸಿಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಂದನಾ-ದಿನೇಶ್ ಇಬ್ಬರಿಗೂ ಪರಸ್ಪರ ಪ್ರೀತಿ
ಚಂದನಾ-ದಿನೇಶ್ ಇಬ್ಬರು ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಚಂದನಾ ವಾಸವಿದ್ದ ಬೆಂಗಳೂರು ಮನೆಗೆ ದಿನೇಶ್ ಆಗಾಗ ಬರುತ್ತಿದ್ದ. ಮದುವೆ ಪ್ರಸ್ತಾಪ ಬಂದಾಗ ಮಾತ್ರ ದಿನೇಶ್ ಮದುವೆಗೆ ಒಲ್ಲೆ ಎಂದಿದ್ದಾನೆ.
ಚಂದನಾ ಬಳಿ ಲಕ್ಷಾಂತರ ದುಡ್ಡು ಪಡೆದಿದ್ದ ದಿನೇಶ್ ಮದುವೆ ಬಗ್ಗೆ ನಿರಾಕರಿಸುತ್ತಿರುವುದರಿಂದ ಅನುಮಾನ ಬಂದಿದೆ. ಈ ಬಗ್ಗೆ ತಮ್ಮ ಕುಟುಂಬದ ಹತ್ತಿರ ಚಂದನಾ ಹೇಳಿಕೊಂಡಿದ್ದಾರೆ.
ಕುಟುಂಬಸ್ಥರು ಮದುವೆ ಮಾಡಿಸಲು ಮುಂದಾಗಿದ್ರು
ಚಂದನಾ ಅವರ ಕುಟುಂಬಸ್ಥರು ಮದುವೆ ಪ್ರಸ್ತಾಪ ಮುಂದಿಟ್ಟುಕೊಂಡು ದಿನೇಶ್ ಮನೆಗೆ ತೆರಳಿದ್ದಾರೆ. ಆದರೆ, ದಿನೇಶ್ ತಾಯಿ ಗಾಯತ್ರಿ, ಮಾವ ದಯಾನಂದ ಎಂಬುವರು ಚಂದನಾ ಕ್ಯಾರೆಕ್ಟರ್ ಸರಿಯಿಲ್ಲ, ನಿಮ್ಮ ಹುಡುಗಿಯನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಹೇಳಿ ಅವಮಾನ ಮಾಡಿ ಕಳಿಸಿದ್ದಾರೆ.
ಇದರಿಂದ ನೊಂದ ಚಂದನಾ ಈ ಬಗ್ಗೆ ದಿನೇಶ್ ರನ್ನು ಪ್ರಶ್ನಿಸಿದ್ದಾರೆ. ಆದರೆ, ದಿನೇಶ್ ಕೊಟ್ಟ ಉತ್ತರ ಚಂದನಾಗೆ ತೃಪ್ತಿ ತಂದಿಲ್ಲ, ಇನ್ನು ಮಾತುಕತೆಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ತೀವ್ರವಾಗಿ ನೋವಿನಲ್ಲಿ ಕಣ್ಣೀರಿಡುತ್ತಾ ಚಂದನಾ ವಿಷ ಸೇವಿಸಿದ್ದಾರೆ.
ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ
ದಿನೇಶ್, ದಿನೇಶ್ ಅಪ್ಪ, ಅಮ್ಮ, ಮಾವ ಹಾಗೂ ಮತ್ತೊಬ್ಬ ಕುಟುಂಬಸ್ಥರು ಸೇರಿದಂತೆ ಐವರ ವಿರುದ್ಧ ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಲಾಗಿದೆ. ದುಡ್ಡು ಪಡೆದು ವಂಚನೆ, ಮದುವೆಯಾಗುವುದಾಗಿ ನಂಬಿಸಿ ಮೋಸ, ಆತ್ಮಹತ್ಯೆಗೆ ಪ್ರಚೋದನೆ ಎಂಬ ಆರೋಪದ ಮೇಲೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಚಂದನಾ ಅವರ ಮಾವ ಸಂತೋಷ್ ಹೇಳಿದ್ದಾರೆ.
ಸೆಲ್ಫಿ ವಿಡಿಯೋದಲ್ಲಿ ಏನಿದೆ?
ಹಾಸನ ಜಿಲ್ಲೆ ಬೇಲೂರು ಮೂಲದ ಚಂದನಾ ಅವರು ದಿನೇಶ್ ರನ್ನು ತುಂಬಾ ನಂಬಿದ್ದರು. ದಿನೇಶ್ ಕೂಡಾ ಮದುವೆಯಾಗುವುದಾಗಿ ಹೇಳಿದ್ದರು. ಆದರೆ, ಇತ್ತೀಚೆಗೆ ಮದುವೆ ಮಾತುಕತೆ ಮುರಿದು ಬಿದ್ದಿತ್ತು. ಇದರ ಜೊತೆಗೆ ಚಂದನಾ ಅವರ ನಡತೆ ಬಗ್ಗೆ ದಿನೇಶ್ ಕುಟುಂಬಸ್ಥರು ಆಡಿದ ಮಾತುಗಳು ಚಂದನಾರನ್ನು ಘಾಸಿ ಮಾಡಿದ್ದವು. ಇದರಿಂದ ನೊಂದು ಸೆಲ್ಫಿ ವಿಡಿಯೋ ಮಾಡಿ,
ನಾನು ಯಾರ ಜೊತೆ ಅಡ್ಡಾಡಿದೆ ನೀವು ಬಂದು ನೋಡಿದ್ರಾ, ನಾನು ಯಾವ ಆಟನು ಆಡಿಲ್ಲ ಎನ್ನುತ್ತಾ ಸ್ಟೀಲ್ ಲೋಟದಲ್ಲಿದ್ದ ವಿಷವನ್ನು ಚಂದನಾ ಕುಡಿಯುತ್ತಾರೆ. ವಿಷ ಗಂಟಲಲ್ಲಿ ಸೇರುತ್ತಿದ್ದಂತೆ ಕೆಮ್ಮುತ್ತಾ, ಖುಷಿಯಾಗಿರಿ, ಲೈಫಲ್ಲಿ ಯಾರ ಜೊತೆಗೂ ಹಿಂಗ್ ಆಡ್ಬೇಡಿ, ನಿಮ್ಮನ್ನು ಮದುವೆಯಾಗಬೇಕು ಅಂತಾ ಮಾಡಿದೆವರೆತೂ ಬೇರೆ ಏನಕ್ಕೂ ಅಲ್ಲ ಎಂದು ಕಣ್ಣೀರಿಡುತ್ತಾರೆ.