ಕಂಬಾರರಿಗೆ ನಾಚಿಕೆಯಾಗಲ್ವ ಎಂದ ಪ್ರೇಮ್ ಕ್ಷಮೆ
ಕನ್ನಡ ಚಲನಚಿತ್ರ ನಟ ನೆನಪಿರಲಿ, ಚಂದ್ರ ಖ್ಯಾತಿಯ ಪ್ರೇಮ್ ಅವರು ಇತ್ತೀಚೆಗೆ ಡಬ್ಬಿಂಗ್ ವಿರೋಧಿಸಿ ಮಾತನಾಡುವ ಭರದಲ್ಲಿ ಚಂದ್ರಶೇಖರ ಕಂಬಾರರರಿಗೆ "ಅವ್ರಿಗೆ ನಾಚಿಕೆಯಾಗಲ್ವಾ, ಅವ್ರಿಗೆ ನಾಚಿಕೆಯಾಗಬೇಕು, ಬಿಸಿನೆಸ್ ಮಾಡಿ, ರಿಯಲ್ ಎಸ್ಟೇಟ ಮಾಡಿ, ತಲೆ ಹಿಡಿಯಬೇಡಿ" ಇತ್ಯಾದಿ ಮಾತುಗಳನ್ನಾಡಿದ್ದ ಪ್ರೇಮ್ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
'ಸಾಹಿತಿ ಚಂದ್ರಶೇಖರ ಕಂಬಾರ ಅವರ ಬಗ್ಗೆ ನಾನು ತುಂಬಾ ಗೌರವ ಇಟ್ಟುಕೊಂಡಿದ್ದೇನೆ. ನಾನು ಅವರ ವಿರುದ್ಧ ಹೇಳಿಕೆ ನೀಡಿಲ್ಲ. ನನ್ನ ಮಾತನ್ನು ಗಮನಿಸಬೇಕಿತ್ತು. ಕಂಬಾರರಿಗೆ ಡಬ್ಬಿಂಗ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಅವರು ಡಬ್ಬಿಂಗ್ ಪರ ನಿಂತಿದ್ದಾರೆ. ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಕಾರ್ಯಕ್ರಮಗಳು ಕನ್ನಡದ ಗ್ರಾಮೀಣ ಭಾಗದ ಮಕ್ಕಳಿಗೆ ತಲುಪಬೇಕು ಎಂಬ ಉದ್ದೇಶದಿಂದ ಡಬ್ಬಿಂಗ್ ಬೇಕು ಎಂದು ಕಂಬಾರರು ಹೇಳಿದ್ದಾರೆ. ಆದರೆ, ಅದು ಡಬ್ಬಿಂಗ್ ಅಲ್ಲ, ವಾಯ್ಸ್ ಓವರ್ ನೀಡಿರುವುದು. ಡಬ್ಬಿಂಗ್ ಬಗ್ಗೆ ಕಂಬಾರರಿಗೆ ಸ್ಪಷ್ಟ ಮಾಹಿತಿ ಇಲ್ಲ ಹೀಗಾಗಿ ಅವರು ಆ ರೀತಿ ಹೇಳಿಕೆ ನೀಡಿದ್ದಾರೆ. ಇನ್ನೊಮ್ಮೆ ಹೇಳುತ್ತೇನೆ. ಅವರ ಮನಸ್ಸಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ' ಎಂದು ಪ್ರೇಮ್ ಅವರು ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಸೋಮವಾರ ಮಧ್ಯಾಹ್ನ ಘೋಷಿಸಿದರು.
ನಟನ ಮಾತು ಕೇಳಿ ಸುಮ್ಮನಿರುವ ಸಾಹಿತ್ಯ ಲೋಕ
ಪ್ರೇಮ್ ಎಂಬ ಕನ್ನಡ ಚಿತ್ರರಂಗದ "ನಟ"ನೊಬ್ಬ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದವರಲ್ಲೊಬ್ಬರಾದ ಚಂದ್ರಶೇಖರ ಕಂಬಾರರರಿಗೆ "ಅವ್ರಿಗೆ ನಾಚಿಕೆಯಾಗಲ್ವಾ, ಅವ್ರಿಗೆ ನಾಚಿಕೆಯಾಗಬೇಕು, ಬಿಸಿನೆಸ್ ಮಾಡಿ, ರಿಯಲ್ ಎಸ್ಟೇಟ ಮಾಡಿ, ತಲೆ ಹಿಡಿಯಬೇಡಿ" ಇತ್ಯಾದಿ ಬಾಯಿಗೆ ಬಂದದ್ದೆಲ್ಲಾ ಮಾತಾಡಬಹುದು. ಹಾಗೆ ಮಾತಾಡಿದ್ದಕ್ಕೆ ತಾನು ಕ್ಷಮೆ ಕೋರುವ ಅಗತ್ಯ ಕಾಣದೇ ಮತ್ತು ಕ್ಷಮೆ ಕೋರಬೇಕೆಂಬ ಒತ್ತಡ ಕೂಡ ಯಾವ ವಲಯದಿಂದಲೂ ಬರದೇ ಪಾರಾಗಬಹುದು.....! ಎಲ್ಲಿಗೆ ಬಂತು...!!!- ಅಶೋಕ್ ಶೆಟ್ಟರ್
ಅಂದು ನೆನಪಿರಲಿ ಪ್ರೇಮ್ ಅವರು ಹೇಳಿದ್ದೇನು
ಖಾಸಗಿ ವಾಹಿನಿಯ ಚರ್ಚಾಕೂಟದಲ್ಲಿ ಕೂತು ಡಬ್ಬಿಂಗ್ ಪರವಾಗಿ ಪ್ರೇಮ್ ಹೇಳಿದ್ದಿಷ್ಟು
ಪ್ರೇಮ್ ನಾಚಿಕೆಯಾಗಲ್ವ ಹೇಳಿಕೆಗೆ ಪ್ರತಿಕ್ರಿಯೆ
ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಚಂದ್ರಶೇಖರ ಕಂಬಾರರು ದೂರವಾಣಿ ಮೂಲಕ ಖಾಸಗಿ ವಾಹಿನಿಗೆ ಪ್ರತಿಕ್ರಿಯೆ ನೀಡಿ,' ನಾನು ಏಕೆ ನಾಚಿಕೆ ಪಟ್ಟುಕೊಳ್ಳಬೇಕು? ನಾನು ಏನು ಮಾತಾನಡುತ್ತಿದ್ದೇನೆ ಎಂಬುದರ ಅರಿವು ನನಗಿದೆ. ನಾನು ಕನ್ನಡ, ಕನ್ನಡ ಚಿತ್ರರಂಗದ ವಿರುದ್ಧ ಸೊಲ್ಲೆತ್ತಿಲ್ಲ. ವೈಜ್ಞಾನಿಕ, ತಾಂತ್ರಿಕ ಸಿನಿಮಾಗಳು ಹಳ್ಳಿಗಾಡಿನ ಮಕ್ಕಳು, ಯುವಕರನ್ನು ತಲುಪಬೇಕು. ತಮ್ಮ ಭಾಷೆಯಲ್ಲೇ ಅವುಗಳನ್ನು ಕಾಣುವಂತಾಗಬೇಕು ಎಂದು ನಾನು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದರು
ಸಿರಿಸಂಪಿಗೆಯ ಕವಿ ನಿಂದನೆ ಎಷ್ಟು ಸರಿ: ಇಸ್ಮಾಯಿಲ್
ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಅತಿ ವಿಶಿಷ್ಟ ಮತ್ತು ಬಹುಮುಖ್ಯವಾದ ಸ್ಥಾನವಿರುವ ಸಿರಿಸಂಪಿಗೆಯ ಕವಿ ಚಂದ್ರಶೇಖರ ಕಂಬಾರರನ್ನು ಪ್ರೇಮ್ ಎಂಬ ನಟ ಟಿ.ವಿ. ಚಾನೆಲ್ ಒಂದರಲ್ಲಿ ಹೀನಾಮಾನ ನಿಂದಿಸಿರುವುದು ಅತ್ಯಂತ ಖಂಡನೀಯ. ಕನ್ನಡ ಸಾಹಿತ್ಯವನ್ನೇ ತಮ್ಮ ಸಿನಿಮಾಕ್ಕೆ ವಸ್ತುವನ್ನಾಗಿಸಿಕೊಂಡಿರುವ ಅನೇಕ ಸಿನಿಮಾ ನಿರ್ದೇಶಕರು ಈ ಬಗ್ಗೆ ಚಕಾರವೆತ್ತಿಲ್ಲ. ಕನ್ನಡಮ್ಮನ ಕಿರೀಟಕ್ಕೆ ಮತ್ತೊಂದು ಜ್ಞಾನಪೀಠದ ಗರಿಯನ್ನು ಸೇರಿಸಿದ ಸಾಹಿತಿಯೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಈತ ಈ ಕ್ಷಣದ ತನಕವೂ ಕ್ಷಮೆ ಕೇಳಿಲ್ಲ. ಈ ನಟ ಕ್ಷಮೆ ಕೇಳುವಂತೆ ಮಾಡಿಸಬೇಕು ಅನ್ನಿಸುತ್ತದೆ. ಕನ್ನಡದ ಸಂವೇದನಾಶೀಲ ನಿರ್ದೇಶಕರು ಎನಿಸಿಕೊಂಡವರೆಲ್ಲರೂ ಈ ವಿಷಯವನ್ನು ಡಬ್ಬಿಂಗ್ ಪರ-ವಿರೋಧದ ನೆಲೆಯಲ್ಲಷ್ಟೇ ನೋಡದೆ ಈ ನಟನ ಹೊಲಸು ಮಾತುಗಳನ್ನು ಖಂಡಿಸಿಯಾರೆ...?- ಎನ್. ಎ ಇಸ್ಮಾಯಿಲ್ ಫೇಸ್ ಬುಕ್ ಪುಟದಿಂದ