ಅಗರಬತ್ತಿ ಸಂಸ್ಥೆ ವಿರುದ್ಧ ಕೇಸು ಗೆದ್ದ ಗೋಲ್ಡನ್ ಸ್ಟಾರ್
ಬೆಂಗಳೂರು, ಏಪ್ರಿಲ್ 02: ಆಗರಬತ್ತಿ ಸಂಸ್ಥೆ ಜಾಹೀರಾತು ವಿಷಯಕ್ಕೆ ಕಲಾ ಸಾಮ್ರಾಟ್ ಎಸ್ ನಾರಾಯಣ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಡುವೆ ಬೆಂಕಿ ಹತ್ತಿಸಿದ್ದ ಕಿರಿಕಿರಿಗೆ ಈಗ ಮೋಕ್ಷ ಸಿಕ್ಕಿದೆ.
ಅನುಮತಿ ಪಡೆಯದೇ ಗಣೇಶ್ ಅವರ ಚಿತ್ರವನ್ನು ಮೋಕ್ಷ್ ಅಗರಬತ್ತಿ ಕಂಪನಿಯ ಸ್ವರ್ಣ ಚಂಪಾ ಅಗರಬತ್ತಿಯ ಮೇಲೆ ಮುದ್ರಿಸಿ, ಪ್ರಚಾರಕ್ಕೆ ಬಳಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆ ವಿರುದ್ಧ ಗಣೇಶ್ ಅವರು ಕೇಸು ದಾಖಲಿಸಿ 75 ಲಕ್ಷ ರೂ. ಪರಿಹಾರ ನೀಡುವಂತೆ 2008ರಲ್ಲಿ ಕೋರಿದ್ದರು. ಇಂದು ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.
2006ರಲ್ಲಿ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಚಿತ್ರದ ಜತೆ ಅಗರಬತ್ತಿ ಸಂಸ್ಥೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಪ್ರಕಾರ, ಚಿತ್ರದ ಸ್ಟಿಲ್ ಗಳನ್ನು ಬಳಸಲು ನಿರ್ಮಾಪಕ, ನಿರ್ದೇಶಕ ಎಸ್ ನಾರಾಯಣ್ ಅವರು ಅನುಮತಿ ನೀಡಿದ್ದರು. ಆದರೆ, ಸ್ವರ್ಣ ಚಂಪಾ ಅಗರಬತ್ತಿ ಮೇಲೆ ಬಳಸಿದ ಚಿತ್ರಗಳು ಚೆಲುವಿನ ಚಿತ್ತಾರದಲ್ಲ ಎಂದು ಗಣೇಶ್ ದೂರಿದ್ದರು.
ಈ ವಿಚಾರವಾಗಿ ನಟ ಗಣೇಶ್ ಮತ್ತು ನಿರ್ದೇಶಕ ಎಸ್. ನಾರಾಯಣ್ ಮಧ್ಯೆ ವಿವಾದಕ್ಕೂ ಕಾರಣವಾಗಿತ್ತು. ಸಂಸ್ಥೆ ಪರ ವಕೀಲ ಶಂಕರಪ್ಪ ಅವರು ಗಣೇಶ್ ಅವರಿಗೆ ನೋಟಿಸ್ ನೀಡಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ವೇಳೆ ಎಸ್. ನಾರಾಯಣ್ ಕೂಡ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಕೊನೆಗೆ, ಸಂಸ್ಥೆಯಿಂದ ಗಣೇಶ್ ಅವರ ಚಿತ್ರ ದುರ್ಬಳಕೆಯಾಗಿರುವುದು ಸಾಬೀತಾದ ಹಿನ್ನಲೆಯಲ್ಲಿ ಗಣೇಶ್ ಅವರಿಗೆ 75 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿದೆ.