ಕಂಪ್ಲಿ ಶಾಸಕ ಸುರೇಶ್ ಬಾಬುಗೆ ಜಾಮೀನು ಮಂಜೂರು
ಬೆಂಗಳೂರು, ನ.27: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಬಳ್ಳಾರಿ ಜಿಲ್ಲೆ ಕಂಪ್ಲಿ ಶಾಸಕ ಸುರೇಶ್ ಬಾಬು ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
10 ಲಕ್ಷ ರು ಬಾಂಡ್ ನೀಡಬೇಕು, ಇಬ್ಬರ ಶ್ಯೂರಿಟಿ, ಸಿಬಿಐ ತಂಡ ವಿಚಾರಣೆಗೆ ಕರೆದಾಗೆಲ್ಲ ಹಾಜರಾಗಬೇಕು, ವಿದೇಶಕ್ಕೆ ಹಾರುವಂತಿಲ್ಲ, ಸಾಕ್ಷಿಗಳನ್ನು ನಾಶಪಡಿಸುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಸುರೇಶ್ ಬಾಬುಗೆ ಜಾಮೀನು ನೀಡಿದೆ. ಇದೇ ಪ್ರಕರಣದಲ್ಲಿ ಇತ್ತೀಚೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಮಂಜೂರಾಗಿದೆ.
ಇದೀಗ ಬಂದ ಸುದ್ದಿ: ಶಾಸಕರಾದ ಸತೀಶ್ ಸೈಲ್, ನಾಗೇಂದ್ರ, ಸುರೇಶ್ಬಾಬು, ಆನಂದ್ಸಿಂಗ್ ಹಾಗೂ ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿ 6 ಜನರಿಗೆ ಜಾಮೀನು ಮಂಜೂರಾಗಿದೆ.
ಬೇಲೇಕೇರಿ ಬಂದರಿನ ಮೂಲಕ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಿಸಿದ ಆರೋಪದ ಮೇಲೆ ಸೆ.19, 2013ರಂದು ಸಿಬಿಐ ತಂಡ ಸುರೇಶ್ ಬಾಬು ಅವರನ್ನು ಬಂಧಿಸಿತ್ತು. 2009ರಿಂದ 2011 ರ ವೇಳೆಯಲ್ಲಿ ವಿದೇಶಿ ಕಂಪನಿಗಳಿಗೆ ಗಾಲಿ ಜನಾರ್ದನ ರೆಡ್ಡಿ ಅವರ ಕಂಪನಿಯ ಅದಿರನ್ನು ಅಕ್ರಮವಾಗಿ ಸಾಗಿಸಿದ ಆರೋಪ ಸುರೇಶ್ ಬಾಬು ಮೇಲಿದೆ. [ಗಾಲಿ ರೆಡ್ಡಿಗೆ ಜಾಮೀನು ಮಂಜೂರು]
ಒಟ್ಟಾರೆ 30 ಲಕ್ಷ ಟನ್ ಗಳಿಗೂ ಅಧಿಕ ಅದಿರು ಅಕ್ರಮ ರಫ್ತು ಮಾಡಿರುವ ಆರೋಪ ರೆಡ್ಡಿ ಗ್ಯಾಂಗ್ ಮೇಲಿದೆ. ಸುರೇಶ್ ಬಾಬು ಮೇಲೆ ಅಕ್ರಮ ಆಸ್ತಿ, ಬೇಲ್ ಗಾಗಿ ಡೀಲ್ ಪ್ರಕರಣ ಕೂಡಾ ಇದೆ. ಜನಾರ್ದನ ರೆಡ್ಡಿಗೆ ಜಾಮೀನು ಕೊಡಿಸಲು ಲಂಚ ಕೊಟ್ಟು ಡೀಲ್ ಕುದುರಿಸಿದ ಆರೋಪದಲ್ಲಿ ಒಮ್ಮೆ ಬಂಧನ ಕೂಡಾ ಆಗಿದ್ದರು. [ಬಾಬು ಮದ್ವೆಗೆ ಜಸ್ಟ್ 20 ಕೋಟಿ ಖರ್ಚು ಕಂಡ್ರಿ]
ಸುರೇಶ್ ಬಾಬು ಬಂಧನವಾದ ಸಂದರ್ಭದಲ್ಲಿ ಸಮಾಜ ಪರಿವರ್ತನಾ ಸಂಸ್ಥೆಯ ಎಸ್.ಆರ್ ಹಿರೇಮಠ್ ಅವರು ನೀಡಿದ್ದ ಪ್ರತಿಕ್ರಿಯೆ ಈಗಲೂ ಸ್ಮರಣೀಯ "ನ್ಯಾಯಾಂಗದ ಜತೆಗೆ ಕಾರ್ಯಾಂಗ ಕೂಡಾ ಬಲಗೊಳ್ಳಬೇಕು. ಸಿದ್ದರಾಮಯ್ಯ ಅವರು ಒಳ್ಳೆ ರಾಜಕಾರಣಿ ಅವರು ಸಮಾಜ ಸುಧಾರಣೆಗೆ ಒತ್ತು ನೀಡುತ್ತಿದ್ದಾರೆ ರೆಡ್ಡಿ ಅಂಡ್ ಗ್ಯಾಂಗ್ ಮೇಲೆ 29ಕ್ಕೂ ಅಧಿಕ ಪ್ರಕರಣಗಳಿವೆ. ಇನ್ನಷ್ಟು ಎಫ್ ಐಆರ್ ಗಳು ಬೀಳಬೇಕಿದೆ"