ಆನಂದ್ ಸಿಂಗ್ ಮೇಲೆ ಹಲ್ಲೆ: ಎಫ್ಐಆರ್ ರದ್ದು ಕೋರಿ ಕಂಪ್ಲಿ ಗಣೇಶ್ ಮನವಿ
ಬೆಂಗಳೂರು, ಜನವರಿ 17: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಎಫ್ಐಆರ್ ರದ್ದು ಮಾಡುವಂತೆ ಶಾಸಕ ಕಂಪ್ಲಿ ಗಣೇಶ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.
ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ನಲ್ಲಿದ್ದಾಗ ಈಗಲ್ ಟನ್ ರೆಸಾರ್ಟ್ನಲ್ಲಿ ಕಂಪ್ಲಿ ಗಣೇಶ್ ಹಲ್ಲೆ ಮಾಡಿದ್ದರು. ಆನಂದ್ ಸಿಂಗ್ ಮುಖಕ್ಕೆ ಬಾಟಲಿಯಲ್ಲಿ ಗಣೇಶ್ ಹೊಡೆದಿದ್ದರು ಎನ್ನಲಾಗಿತ್ತು.
ಮುಖಕ್ಕೆ ತೀವ್ರ ಪೆಟ್ಟು ತಿಂದಿದ್ದ ಆನಂದ್ ಸಿಂಗ್ ಹಲವು ದಿನ ಆಸ್ಪತ್ರೆಗೆ ದಾಖಲಾಗಿದ್ದರು. ಹಲ್ಲೆ ಮಾಡಿದ್ದ ಗಣೇಶ್ ಸುಮಾರು ಒಂದು ತಿಂಗಳು ತಲೆಮರೆಸಿಕೊಂಡಿದ್ದರು. ನಂತರ ಬಿಡದಿ ಪೊಲೀಸರು ಗಣೇಶ್ ಅವರನ್ನು ಗುಜರಾತ್ನಲ್ಲಿ ಬಂಧಿಸಿದ್ದರು.
ನಂತರ ಗಣೇಶ್ ಅವರು ಆನಂದ್ ಸಿಂಗ್ ಜೊತೆ ರಾಜಿ ಸಂಧಾನ ಮಾಡಿಕೊಂಡಿದ್ದರು. ಆಮೇಲಿನ ರಾಜಕೀಯ ಬೆಳವಣಿಗೆಯಲ್ಲಿ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಉಪಚುನಾವಣೆ ಎದುರಿಸಿ ಮತ್ತೆ ಶಾಸಕರಾಗಿದ್ದಾರೆ.
ಈ ನಡುವೆ ಈಗ ಕಂಪ್ಲಿ ಗಣೇಶ್ ಅವರು ತಮ್ಮ ಮೇಲೆ ಬಿಡದಿ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಮಾಡಬೇಕು ಎಂದು ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ಪ್ರಕರಣದ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.