ಕಲಬುರ್ಗಿಯವರ ಪೈಶಾಚಿಕ ಹತ್ಯೆ: ಕರವೇ ಬೃಹತ್ ಪ್ರತಿಭಟನಾ ಸಭೆ
ಬೆಂಗಳೂರು, ಸೆ 1: ಹಿರಿಯ ವಿಮರ್ಶಕ, ವಿದ್ವಾಂಸ, ಸಾಹಿತಿ ಡಾ. ಎಂ ಎಂ ಕಲಬುರ್ಗಿಯವರ ಪೈಶಾಚಿಕ ಹತ್ಯೆ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಿನ ಬೆಲ್ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ (ಸೆ 1) ಸಂಜೆ 3 ಗಂಟೆಗೆ ಬೃಹತ್ ಪ್ರತಿಭಟನಾ ಸಭೆ ಏರ್ಪಡಿಸಿದೆ.
ಕಲಬುರ್ಗಿಯವರ ಹತ್ಯೆಯ ನೋವಿನ ಆಘಾತದಿಂದ ಚೇತರಿಸಿಕೊಳ್ಳಲಾಗುತ್ತಿಲ್ಲ. ಇದು ನನ್ನ ನಾಡಿನಲ್ಲಿ ನಡೆದ ಘಟನೆಯೇ ಎಂದು ಪದೇ ಪದೇ ಖಚಿತ ಪಡಿಸಿಕೊಳ್ಳಬೇಕಾಗಿದೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ನೋವು ವ್ಯಕ್ತ ಪಡಿಸಿದ್ದಾರೆ. (ಕಲಬುರ್ಗಿ ಹತ್ಯೆ ಕೇಸ್, ಸಿಬಿಐಗೆ)
ಬಸವಣ್ಣನವರ ಸಂಸ್ಕೃತಿಯ ಪ್ರತಿಪಾದಕರಾಗಿದ್ದ ಕಲಬುರ್ಗಿಯವರನ್ನು ಪಟ್ಟಭದ್ರ ಹಿತಾಶಕ್ತಿ ಭಯೋತ್ಪಾದಕರು ಕೊಂದೇ ಹಾಕಿದ್ದಾರೆ. ಭಾನುವಾರ (ಆ 30) ನಡೆದ ಈ ಹತ್ಯೆಯ ವಿವರಗಳನ್ನು ಕೇಳಿದರೆ ಎದೆ ನಡುಗಿ ಹೋಗುತ್ತದೆ.
ಇಂಥ ಘಟನೆ ಅಫಘಾನಿಸ್ತಾನದಲ್ಲೋ, ಪಾಕಿಸ್ತಾನದಲ್ಲೋ ಅಥವಾ ಟರ್ಕಿ, ಇರಾಕ್ ನಲ್ಲಿ ನಡೆದಿದ್ದರೆ ಮಾಮೂಲಿ ಎನ್ನಬಹುದಿತ್ತು. ಆದರೆ ಇದು ನಡೆದಿದ್ದು ಶರಣರು, ಸಂತರು, ದಾರ್ಶನಿಕರು ಹುಟ್ಟಿ ಬೆಳೆದ ನಾಡಿನಲ್ಲಿ ಎಂದು ನಾರಾಯಣ ಗೌಡ ತೀವ್ರ ವಿಷಾದ ವ್ಯಕ್ತ ಪಡಿಸಿದ್ದಾರೆ.
ನಿಷ್ಠುರವಾದ ನಿಲುವನ್ನು ಇಡೀ ಸಮಾಜದ ಹಿತಕ್ಕೆ ಬಳಸಿದ ಕಲಬುರ್ಗಿಯವರಿಗೆ ಅತ್ಯಂತ ಕೆಟ್ಟ ವಿದಾಯವನ್ನು ಹೇಳಿದ್ದೇವೆ. ಕೊಲೆಗಡುಕ ಭಯೋತ್ಪಾದಕ ಯಾರೇ ಆಗಿರಲಿ, ಅವರನ್ನು ಬಂಧಿಸುವ ಮತ್ತು ಶಿಕ್ಷಿಸುವ ಕೆಲಸ ಸರಕಾರ ಮಾಡಬೇಕಾಗಿದೆ ಎಂದು ಗೌಡ್ರು ಒತ್ತಾಯಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಿದೆ. ಇದರಲ್ಲಿ ಡಾ.ಬರಗೂರು ರಾಮಚಂದ್ರಪ್ಪ, ಡಾ ಚಂದ್ರಶೇಖರ ಕಂಬಾರ, ಎಸ್ ಜಿ ಸಿದ್ಧರಾಮಯ್ಯ, ಪ್ರೊ.ಚಂದ್ರಶೇಖರ ಪಾಟೀಲ್, ದಿನೇಶ್ ಅಮೀನ್ ಮಟ್ಟು, ಡಾ.ಬಂಜಗೆರೆ ಜಯಪ್ರಕಾಶ್, ಡಾ.ನಲ್ಲೂರು ಪ್ರಸಾದ್, ಡಾ ಸಿ ಎಸ್ ದ್ವಾರಕಾನಾಥ್, ಡಾ.ಹಂಪನಾ, ಪ್ರೊ. ಬಿ ಕೆ ಚಂದ್ರಶೇಖರ್, ಕೆ ಎಚ್ ಶ್ರೀನಿವಾಸ್, ಎಚ್ ಆರ್ ರಂಗನಾಥ್, ಪುಂಡಲೀಕ ಹಾಲಂಬಿ, ಪ್ರೊ.ಕೆ ಎಸ್ ಭಗವಾನ್, ಬಿ ಟಿ ಲಲಿತಾ ನಾಯಕ್ ಮತ್ತಿತರರು ಪಾಲ್ಗೊಳ್ಲಲಿದ್ದಾರೆ.
ಕರವೇ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಎಲ್ಲ ಸಮಾನ ಮನಸ್ಕರು ಈ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಲು ಕರವೇ ಕೋರಿದೆ.