ಪರಿಷೆ ಸಂಭ್ರಮ: ಸಂಚಾರ ಬದಲಿ ಮಾರ್ಗ, ಪಾರ್ಕಿಂಗ್ ಎಲ್ಲಿ?
ಬೆಂಗಳೂರು, ನವೆಂಬರ್ 13: ಐತಿಹಾಸಿಕ ಕಡಲೆಕಾಯಿ ಪರಿಷೆ ಸೋಮವಾರ(ನವೆಂಬರ್ 13) ದಿಂದ ಆರಂಭವಾಗಲಿದ್ದು, ಬಸವನಗುಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗ ಹಾಗೂ ವಾಹನ ನಿಲುಗಡೆ ತಾಣಗಳನ್ನು ಸೂಚಿಸಿ ಟ್ರಾಫಿಕ್ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ಈ ಬಾರಿಯ ಕಡಲೆಕಾಯಿ ಪರಿಷೆಗೆ 4 ಲಕ್ಷ ಭಕ್ತರು ಸೇರುವ ನಿರೀಕ್ಷೆ ಇದೆ. ಇದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬಸವನಗುಡಿಯ ಪರಿಸರ ಮಾಲಿನ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಕ್ರಿಯಾಯೋಜನೆ ರೂಪಿಸಿದೆ. ಇದಕ್ಕೆ ಬಿಬಿಎಂಪಿ ಹಾಗೂ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಕೂಡಾ ಸಾಥ್ ನೀಡಿದೆ.
ವಾಹನ ನಿಲುಗಡೆ: 'ನ್ಯಾಷನಲ್ ಕಾಲೇಜು ಆಟದ ಮೈದಾನ, ಗವಿಪುರದ ಹಯವದನ ರಸ್ತೆಯ ಕೋಹಿನೂರು ಆಟದ ಮೈದಾನ ಹಾಗೂ ದೊಡ್ಡಗಣಪತಿ ದೇವಸ್ಥಾನ ರಸ್ತೆಯ ಸಾಯಿರಂಗಾ ಆಟದ ಮೈದಾನದಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ' ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಲಾಲ್ಬಾಗ್ ಪಶ್ಚಿಮ ಗೇಟ್, ವಾಣಿ ವಿಲಾಸ್ ರಸ್ತೆ, ಚಾಮರಾಜಪೇಟೆಯ 5ನೇ ಮುಖ್ಯರಸ್ತೆ ಹಾಗೂ ಗಾಂಧಿಬಜಾರ್ ಮುಖ್ಯರಸ್ತೆ ಕಡೆಯಿಂದ ಹನುಮಂತನಗರಕ್ಕೆ ಹೋಗುವ ವಾಹನಗಳು, ರಾಮಕೃಷ್ಣ ಆಶ್ರಮದ ವೃತ್ತದಲ್ಲಿ ಬಲತಿರುವು ಪಡೆದು ಹಯವದನ ರಸ್ತೆ ಗವಿಪುರ 3ನೇ ಅಡ್ಡರಸ್ತೆ, ಮೌಂಟ್ ಜಾಯ್ ಮೂಲಕ ಸಂಚರಿಸಬಹುದು.
ದೊಡ್ಡಗಣಪತಿ ದೇವಸ್ಥಾನ ರಸ್ತೆಯ ಶೇಖರ್ ಆಸ್ಪತ್ರೆ ಜಂಕ್ಷನ್ನಿಂದ ಅಯ್ಯಂಗಾರ್ ರಸ್ತೆ, ಗವಿಪುರದ 3ನೇ ಅಡ್ಡರಸ್ತೆ ಮೂಲಕವೂ ಹನುಮಂತನಗರಕ್ಕೆ ಹೋಗಬಹುದು.