'ತೇಜಸ್ವಿ ವಿಸ್ಮಯ' ಆನ್ ಲೈನ್ ರಸಪ್ರಶ್ನೆಯಲ್ಲಿ ಗೆದ್ದವರು ಗೊತ್ತಾಯ್ತಾ?
ಬೆಂಗಳೂರು, ಸೆಪ್ಟೆಂಬರ್ 3: ಫೇಸ್ ಬುಕ್ ನಲ್ಲಿ "ಪೂರ್ಣಚಂದ್ರ ತೇಜಸ್ವಿ" (www.fb.com/PCTejaswi) ಪುಟವನ್ನು ನಡೆಸುತ್ತಿರುವ ತಂಡದವರು ತೇಜಸ್ವಿಯವರ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಸೆಪ್ಟೆಂಬರ್ 1ರಂದು ನಡೆಸಿದ 'ತೇಜಸ್ವಿ ವಿಸ್ಮಯ' ಆನ್ ಲೈನ್ ಸ್ಪರ್ಧೆಯಲ್ಲಿ ವಿಜೇತರಾದವರ ವಿವರ ಹೀಗಿದೆ.
1ನೇ ಬಹುಮಾನ: ಅರುಣ್ ಪ್ರಭು ಬಿ. ಮೂಲತಃ ಮಂಡ್ಯ ಜಿಲ್ಲೆಯವರು, 5 ವರ್ಷಗಳ ಕಾಲ 'ಕರ್ನಾಟಕ ರಾಜ್ಯ ಪೋಲೀಸ್' ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ, ಈಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ ಮತ್ತು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
2ನೇ ಬಹುಮಾನ: ಮಲ್ಲಿಕಾರ್ಜುನ್ ಬಿ ಎನ್. ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣದವರು, ಚಲನಚಿತ್ರ ನಿರ್ದೇಶಕರು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 3ನೇ ಬಹುಮಾನ: ಸ್ವಾತಿ ಕೆ.ಎಚ್. ಮೂಲತಃ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನವರು, ಐ ಟಿ ಉದ್ಯೋಗಿ, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.[ತೇಜಸ್ವಿ ಮಾಯಾಲೋಕದಿ ಅವಿರತವಾಗಿ ಕೇಳಿಕಥೆಯ]
ವೆಂಕಟೇಶ್ ಬಿ.ಎಮ್. ನಿಮ್ಹಾನ್ಸ್ ಸಂಸ್ಥೆಯಲ್ಲಿ ಮೇಲ್ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಮತ್ತು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ರವಿಕುಮಾರ್ ಸಿ.ಎಸ್. ಮತ್ತು ನಂದೀಶ ಶೆಟ್ಟಿ ಅವರಿಗೆ ಸಮಾಧಾನಕರ ಬಹುಮಾನ ದೊರೆತಿದೆ. ರಸಪ್ರಶ್ನೆ ಸ್ಪರ್ಧೆಯಲ್ಲಿ 200 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ತೇಜಸ್ವಿ ಜೀವನ, ಸಾಹಿತ್ಯ ಮತ್ತು ವಿಚಾರಗಳು ಎಂಬ ಮೂರು ವಿಭಾಗಗಳನ್ನು ಒಳಗೊಂಡ 30 ಪ್ರಶ್ನೆಗಳನ್ನು ರಸಪ್ರಶ್ನೆ ಒಳಗೊಂಡಿತ್ತು. ಐವತ್ತಕ್ಕೂ ಹೆಚ್ಚು ಜನರು ಬಹುತೇಕ ಪ್ರಶ್ನೆಗಳಿಗೆ ಸರಿಯುತ್ತರವನ್ನು ನೀಡಿದ್ದಾರೆ.[ಕೆಪಿ ಪೂರ್ಣಚಂದ್ರ ತೇಜಸ್ವಿ ಸ್ಮಾರಕ ಲೋಕಾರ್ಪಣೆ]
ಮಂಡ್ಯ, ಬೆಂಗಳೂರು, ತುಮಕೂರು, ಉಡುಪಿ, ಚಿಕ್ಕಮಗಳೂರು, ಹಾವೇರಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಿಂದ ಜನರು ಭಾಗವಹಿಸಿದ್ದರು. ವಿದ್ಯಾರ್ಥಿಗಳು, ಸಿನೆಮಾ ರಂಗದವರು, ಸರ್ಕಾರಿ ಕೆಲಸದವರು, ಐಟಿ ಉದ್ಯೋಗಿಗಳು ಹೀಗೆ ಹಲವಾರು ಕ್ಷೇತ್ರದ ಮಂದಿ ರಸಪ್ರಶ್ನೆಯಲ್ಲಿ ಭಾಗವಹಿಸಿದ್ದು ವಿಶೇಷ. ರಸಪ್ರಶ್ನೆಯಲ್ಲಿ ಗೆದ್ದವರಿಗೆ ತೇಜಸ್ವಿ ಬರಹವಿರುವ ಟೀ-ಶರ್ಟ್ ಹಾಗೂ ತೇಜಸ್ವಿ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.