ಎಟಿಎಂ ಹಲ್ಲೆ ಪ್ರಕರಣ: ಅಪಾದಿತ ಮಧುಕರರೆಡ್ಡಿಗೆ ನಾಳೆ ಶಿಕ್ಷೆ ಪ್ರಮಾಣ ಪ್ರಕಟ
ಬೆಂಗಳೂರು, ಫೆಬ್ರವರಿ 01: ಕಾರ್ಪೋರೆಷನ್ ಬ್ಯಾಂಕ್ ಎಟಿಎಂ ನಲ್ಲಿ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿ ಕೆ. ಮಧುಕರರೆಡ್ಡಿಯನ್ನು ಅಪರಾಧಿ ಎಂದು 65ನೇ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಸೋಮವಾರ ಘೋಷಣೆ ಮಾಡಿದ್ದಾರೆ. ಆಪಾದಿತನಿಗೆ ಶಿಕ್ಷೆ ಪ್ರಮಾಣವನ್ನು ನಾಳೆ ಪ್ರಕಟವಾಗಲಿದೆ.
ಪ್ರಕರಣದ ವಿಚಾರಣೆ ನಡೆಸಿದ 65 ನೇ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಅವರು, ಆರೋಪಿ ಮಧುಕರರೆಡ್ಡಿ ಅಪರಾಧಿ ಎಂದು ಘೋಷಣೆ ಮಾಡಿದರು. ಶಿಕ್ಷೆ ಪ್ರಮಾಣವನ್ನು ನಾಳೆ ಪ್ರಕಟ ಮಾಡುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಎಂ.ವಿ. ತ್ಯಾಗರಾಜ್ ವಾದ ಮಂಡಿಸಿದ್ದರು. ಎಸ್ ಜೆ. ಪಾರ್ಕ್ ಪೊಲೀಸರು ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಘಟನೆ ಹಿನ್ನೆಲೆ
ನವೆಂಬರ್ 19, 2013 ರಂದು ಬೆಳಗಿನ ಜಾವ ಕಾರ್ಪೋರೇಷನ್ ವೃತ್ತದಲ್ಲಿರುವ ಬ್ಯಾಂಕ್ ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಮೇಲೆ ಮಚ್ಚಿನಲ್ಲಿ ಕ್ರೂರವಾಗಿ ಹಲ್ಲೆ ಮಾಡಿದ್ದ. ಕೈ ಮುಗಿದು ಕೇಳಿಕೊಂಡರೂ ಕೇಳದ ವಿಕೃತವಾಗಿ ಹಲ್ಲೆ ನಡೆಸಿ ಹಣ ದೋಚಿ ಪರಾರಿಯಾಗಿದ್ದ. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಸಿಸಿಟಿವಿ ದೃಶ್ಯಗಳು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಎಸ್ ಜೆ. ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಲವು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಜ್ಯೋತಿ ಉದಯ್ ಜೀವ ಉಳಿದಿತ್ತು. ಪ್ರಕರಣವ್ನು ಗಂಭೀರವಾಗಿ ಪರಿಗಣಿಸಿದ್ದ ಬೆಂಗಳೂರು ಪೊಲೀಸರು 300 ಪೊಲೀಸರನ್ನು ಒಳಗೊಂಡ ತಂಡ ವನ್ನು ರಚಿಸಿದ್ದರು. ಸತತ ಮೂರು ವರ್ಷ ಹುಡು ಕಾಡಿದರೂ ಆರೋಪಿಯ ಸುಳಿವು ಸಿಕ್ಕಿರಲಿಲ್ಲ.
ನಾಲ್ಕು ವರ್ಷದ ಬಳಿಕ ಸಿಕ್ಕಿಬಿದ್ದ !
ಸತತ ನಾಲ್ಕು ವರ್ಷ ಹುಕಾಡಿದರೂ ಆರೋಪಿಯ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. 2017 ರಲ್ಲಿ ಆಂಧ್ರ ಪ್ರದೇಶದ ಅನಂತಪುರದಲ್ಲಿ ಎಟಿಎಂ ನಲ್ಲಿ ಮಹಿಳೆಗೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಆಂಧ್ರ ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯ, ಬೆಳರು ಮುದ್ರೆ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದ. ಆರೋಪಿಯನ್ನು ಗುರುತಿಸಲು ಜ್ಯೋತಿ ಉದಯ್ ನಿರಾಕರಿಸಿದ್ದರು. ಆರೋಪಿಯ ಚಿತ್ರ ಹಾಗೂ ವಿಡಿಯೋ ಕಳುಹಿಸಿ ಖಚಿತ ಪಡಿಸಿಕೊಂಡಿದ್ದರು. ಬಂಧಿತ ಆರೋಪಿ ನ್ಯಾಯಾಲಯದ ಮುಂದೆಯೇ ತಾನು ಜ್ಯೋತಿ ಉದಯ್ ಅವರನ್ನು ಹಲ್ಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದ. ಈ ಕುರಿತು ಎಸ್.ಜೆ. ಪಾರ್ಕ್ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಘಟನೆಗೂ ಮುನ್ನ
ಬೆಂಗಳೂರಿಗೆ ಬರುವ ಮುನ್ನ ಮೆಹಬೂಬ್ ನಗರದಲ್ಲಿ ನಾರಾಯಣ ಎಂಬ ಉದ್ಯೋಗಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಇದಾದ ಬಳಿಕ ಧರ್ಮವರಂ ನಲ್ಲಿ ವೃದ್ಧೆಯನ್ನು ಹತ್ಯೆ ಮಾಡಿದ್ದ. ನವೆಂಬರ್ 10, 2013 ರಂದು ವೃದ್ಧೆಯನ್ನು ಹತ್ಯೆ ಮಾಡಿದ ಬಳಕ ಅನಂತಪುರದಿಂದ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿನಲ್ಲಿ ಹಣವಿಲ್ಲದೇ ಎರಡು ದಿನ ಹಸಿವಿನಿಂದ ಕಂಗಾಲಾಗಿದ್ದ. ಎಟಿಎಂಗೆ ಹೋಗಿ ಹಣ ದೋಚಲು ಯತ್ನಿಸಿದ್ದ. ಹಣ ಪಡೆಯಲು ಸಾಧ್ಯವಿಲ್ಲ ಎಂದು ಅರಿತಿದ್ದ ಮಧುಕರರೆಡ್ಡಿ ಕಾರ್ಪೋರೇಷನ್ ಎಟಿಎಂ ಸಮೀಪ ಹೊಂಚು ಹಾಕಿ ಕಾಯುತ್ತಿದ್ದ. ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಶೆಟರ್ ಎಳೆದು ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ.
ಮಧುಕರ ಹಿನ್ನೆಲೆ
ಚಿತ್ತೂರು ಜಿಲ್ಲೆ ಮದನಪಲ್ಲಿ ತಾಲೂಕಿನ ದಿಗುವಪಲ್ಲಿ ಗ್ರಾಮದ ಈತ ಸಾರ್ವಜನಿಕ ನಲ್ಲಿ ನೀರಿನ ವಿಚಾರವಾಗಿ ಆನಂದರೆಡ್ಡಿ ಎಂಬುವರನ್ನು ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ 2005 ರಲ್ಲಿ ಶಿಕ್ಷೆಗೆ ಗುರಿಯಾಗಿ ಕಡಪ ಜೈಲಿನಲ್ಲಿ ನೆಲೆಸಿದ್ದ. ಅನಾರೋಗ್ಯ ದಿಂದ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 2011 ರಲ್ಲಿ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಈತನಿಗಾಗಿ ಕಡಪ ಜೈಲು ಅಧಿಕಾರಿಗಳು ಶೋಧ ನಡೆಸುತ್ತಿದ್ದರು. ಆದರೆ ಎಲ್ಲೂ ಈತ ಸಿಕ್ಕಿರಲಿಲ್ಲ. ಇದಾದ ಎರಡು ವರ್ಷದ ಬಳಿಕ ಮೆಹಬೂಬ್ ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಅಂದಿನಿಂದ ಸರಣಿ ಕೃತ್ಯಗಳನ್ನು ಎಸಗುತ್ತಿದ್ದ. 2013 ನವೆಂಬರ್ 19 ರಂದು ಜ್ಯೋತಿ ಉದಯ್ ಮೇಲೆ ಹಲ್ಲೆ ಮಾಡಿದ್ದ.
Recommended Video
ಹಾಜರು ವೇಳೆ ಶಿಕ್ಷೆ ಕೊಡಿ ಎಂದಿದ್ದ
ಮಧುಕರರೆಡ್ಡಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಜ್ಯೋತಿ ಉದಯ್ ಮೇಲೆ ಹಲ್ಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದ. ನಾನು ಹಲ್ಲೆ ಮಾಡಿದ್ದು ನಿಜ. ನನಗೆ ಮಕ್ಕಳಿದ್ದಾರೆ. ಪತ್ನಿ ಇದ್ದಾರೆ. ನನಗೆ ಯಾವ ವಕೀಲರು ಬೇಡ. ಬೇಗ ಶಿಕ್ಷೆ ಕೊಡಿ ಎಂದು ಗೋಗರಿದಿದ್ದ. ಜ್ಯೋತಿ ಉದಯ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ ಸುದೀರ್ಘ ವಿಚಾರಣೆ ಬಳಿಕ ಇದೀಗ ಅಪರಾಧಿ ಎಂದು ಪ್ರಕಟಿಸಲಾಗಿದೆ.