'ಭ್ರಷ್ಟರ ಬಹಿಷ್ಕಾರಕ್ಕಿಂತ ದೊಡ್ಡ ಶಿಕ್ಷೆ ಇನ್ನೊಂದಿಲ್ಲ'
(ಸಂತೋಷ್ ಹೆಗ್ಡೆ ಸಂದರ್ಶನದ ಮುಂದುವರಿದ ಭಾಗ)
ಒನ್ಇಂಡಿಯಾ : ಭ್ರಷ್ಟತೆಯ ವಿರುದ್ಧ ಜನರನ್ನು ಜಾಗೃತಗೊಳಿಸುವ ಕಾರ್ಯ ನಡೆಯುತ್ತಲೇ ಇರುತ್ತದೆ. ಆದರೆ, ಸರಕಾರಿ ನೌಕರರನ್ನು ಕೂಡ ಭ್ರಷ್ಟತೆಯನ್ನು ಪೋಷಿಸದಂತೆ ಉತ್ತೇಜಿಸುವ ಕೆಲಸ ಏಕೆ ಆಗುತ್ತಿಲ್ಲ? ಜನ ಲಂಚ ನೀಡೋದು ನಿಲ್ಸಲ್ಲ, ಇವರೂ ತೆಗೆದುಕೊಳ್ಳುವುದನ್ನು ಬಿಡಲ್ಲ. ಎರಡೂ ಕೈ ತಟ್ಟಿದರೇನೇ ಚಪ್ಪಾಳೆ ಅಲ್ಲವೆ ಸರ್?
ಸಂತೋಷ್ ಹೆಗ್ಡೆ : ಸರಕಾರ ಕೂಡ ಜನರಿಂದ ನಡೆಸುವ ಸಂಸ್ಥೆ. ಅವರಲ್ಲೇ ದುರಾಸೆ ಸೇರಿಕೊಂಡದ್ದರೆ ಬದಲಾವಣೆ ತರುವುದು ಸಾಧ್ಯವೇ ಇಲ್ಲ. ಆದ್ದರಿಂದ ಹೊರಗಿಂದಲೇ ಬದಲಾವಣೆ ತರಬೇಕು. ಭ್ರಷ್ಟರನ್ನು ನಾನು ಸಹಿಸಲ್ಲ ಎಂದು ಪ್ರಜೆಗಳು ನಿರ್ಧಾರ ಮಾಡಬೇಕು. ಭ್ರಷ್ಟ ಅಧಿಕಾರಿಗಳಿಗೆ ಲಂಚ ನೀಡುವುದಿಲ್ಲ, ಅವರನ್ನು ನಾನು ಬಹಿಷ್ಕರಿಸುತ್ತೇನೆ ಎನ್ನುವುದಕ್ಕಿಂತ ದೊಡ್ಡ ಶಿಕ್ಷೆ ಇನ್ನೊಂದಿಲ್ಲ. ಮೊದಲು ಯುವಕರನ್ನು ಬದಲಾಯಿಸಿದರೆ, ಸರಕಾರಿ ನೌಕರರು ಬದಲಾಗುತ್ತಾರೆ, ರಾಜಕಾರಣಿಗಳು ಬದಲಾಗುತ್ತಾರೆ. ದುರಾಸೆ ರೋಗ ಬಂದಿರುವ ವ್ಯಕ್ತಿಗೆ ಔಷಧಿ ಇಲ್ಲ.
ಒನ್ಇಂಡಿಯಾ : ಭ್ರಷ್ಟ ನೌಕರರು ಲಂಚ ಕೇಳಿದರೆ ಅದನ್ನು ಕೂಡಲೆ ಪ್ರತಿಭಟಿಸುವಂಥ, ಸಂಬಂಧಪಟ್ಟವರಿಗೆ ತಕ್ಷಣ ದೂರು ನೀಡುವಂಥ ಮನೋಭಾವ ಜನರಲ್ಲಿ ಬರಬೇಕಿದೆ.
ಸಂತೋಷ್ ಹೆಗ್ಡೆ : ಆ ಮನೋಭಾವ ಖಂಡಿತ ಬರುತ್ತಿದೆ. ನೋಡಿ, ಐ ಪೇಯ್ಡ್ ಬ್ರೈಬ್ ಡಾಟ್ ಕಾಂ ಎಂಬ ವೆಬ್ ಸೈಟ್ ಇದೆ. ಅದರಲ್ಲಿ ತಮ್ಮ ಹೆಸರು ಹಾಕಿದೇನೆ ನಾನು ಇಂಥ ಅಧಿಕಾರಿಗೆ ಇಷ್ಟು ಲಂಚ ನೀಡಿದೆ ಎಂದು ತಿಳಿಸಬಹುದು. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಮಕ್ಕಳನ್ನ, ಯುವಕರನ್ನು ದುರಾಸೆಯಿಂದ ಹೊರತಂದರೆ ಇನ್ನೂ ಹೆಚ್ಚಿನದನ್ನು ನಾವು ನಿರೀಕ್ಷಿಸಬಹುದು.
ಒನ್ಇಂಡಿಯಾ : ಲೋಕಾಯುಕ್ತ ಸಂಸ್ಥೆಯಲ್ಲಿ ನೀವಿದ್ದಾಗ ವಿಚಾರಣೆ ಪ್ರಕ್ರಿಯೆ ವೇಗವಾಗಿ ನಡೆಯುತ್ತಿತ್ತು. ಈಗ ಅದು ನಿಧಾನವಾಗಿದೆ ಎಂದು ನಿಮಗೆ ಅನಿಸುತ್ತದೆಯಾ?
ಸಂತೋಷ್ ಹೆಗ್ಡೆ : ಇದನ್ನು ಹೇಳಿಕೊಳ್ಳಲು ಸ್ವಲ್ಪ ಮುಜುಗರವಾಗುತ್ತದೆ. ನಾನೇನಾದರೂ ಟೀಕೆ ಮಾಡಿದರೆ ಇವನು ತನ್ನನ್ನು ತಾನು ಹೊಗಳಿಕೊಳ್ಳುತ್ತಿದ್ದಾನೆ ಎಂಬ ಭಾವನೆ ಜನರಲ್ಲಿ ಬಂದುಬಿಡುತ್ತದೆ. ಕೇಳಿದ್ದೇನೆ ನೀವು ಹೇಳಿದ ಮಾತನ್ನ. ಇಷ್ಟು ದಿನ ಜನರನ್ನು ಸ್ಪಂದಿಸಲು, ಬರಲು ಬಿಡುತ್ತಿರಲಿಲ್ಲ. ಉಪಲೋಕಾಯುಕ್ತರ ಕೆರೆ ಇನ್ಸ್ಪೆಕ್ಟ್ ಮಾಡೋಕೆ ಹೋಗಿದ್ರು, ಆಸ್ಪತ್ರೆಗೆ ಭೇಟಿ ಕೊಟ್ಟಿದ್ರು, ಲೋಕಾಯುಕ್ತರು ಕೋಲಾರದಲ್ಲಿ ದಾಳಿ ಮಾಡಿದ್ರು ಎಂಬ ಕೆಲ ಸುದ್ದಿಯನ್ನು ಕೇಳಿದ್ದೇನೆ ಓದಿದ್ದೇನೆ. ಆದರೆ ಇಷ್ಟು ಮಾಡಿದರೆ ಸಾಲುವುದಿಲ್ಲ.
ಮೊತ್ತಮೊದಲಾಗಿ ತಮ್ಮ ಬಾಗಿಲನ್ನು ಜನರಿಗೆ ತೆರೆದಿಡಬೇಕು. ಜನರ ಕಷ್ಟಗಳನ್ನು ಕೇಳಬೇಕು. ಆವಾಗ ಸಮಾಜದಲ್ಲೇ ಏನಾಗುತ್ತದೆ ಎಂದು ಅರ್ಥವಾಗುತ್ತದೆ. ಬರೀ ಕಂಪ್ಲೇಂಟ್ ಕೊಟ್ಟು ಹೋಗಿ, ನಾವು ನಂತರ ವಿಚಾರಿಸಿಕೊಳ್ಳುತ್ತೇನೆ ಎಂದು ಸಾಗಹಾಕುವುದು ಸರಿಯಲ್ಲ. ನೂರು ದೂರುಗಳಲ್ಲಿ ಐವತ್ತನ್ನು ಅಲ್ಲಲ್ಲೇ ಮುಗಿಸಬಹುದು. ಒಬ್ಬ ಬರ್ತ್ ಸರ್ಟಿಫಿಕೇಟ್ ಬೇಕೆಂದು ಬರುತ್ತಾನೆ. ಅದಕ್ಕೆಂಥ ವಿಚಾರಣೆ ಮಾಡುವುದು? ಸಂಬಂಧಪಟ್ಟ ಅಧಿಕಾರಿಗೆ ಫೋನ್ ಮಾಡಿ ಸರ್ಟಿಫಿಕೇಟ್ ಕೊಡ್ತಿಯಾ ಅಥವಾ ಕಂಪ್ಲೇಂಟ್ ತಗೊಳ್ಳಲಾ ಎಂದು ಕೇಳಿದರೆ ಅಲ್ಲೇ ಕೆಲಸ ಆಗಿಬಿಡುತ್ತದೆ. ಪೊಲೀಸ್ ಸ್ಟೇಷನ್ ನಲ್ಲೂ ಇದೇ ರೀತಿ ಆಗುತ್ತದೆ. ಆದರೆ, ಕೆಲವೊಂದು ಗಂಭೀರ ವಿಷಯಗಳು ಬಂದಾಗ ವಿಚಾರಣೆ ಮಾಡಬೇಕಾಗುತ್ತದೆ.