ವರ್ಷಾಂತ್ಯಕ್ಕೆ ಮತ್ತಿಕೆರೆಯ ಜೆ.ಪಿ.ಪಾರ್ಕ್ ನವೀಕರಣ ಕಾಮಗಾರಿ ಪೂರ್ಣ
ಬೆಂಗಳೂರು, ಮೇ 16: 37 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ನಗರದ ಮತ್ತಿಕೆರೆಯ ಜೆ.ಪಿ.ಪಾರ್ಕ್ ನವೀಕರಣ ಕಾಮಗಾರಿ ಈ ವರ್ಷದ ಡಿಸೆಂಬರ್ ವೇಳೆಗೆ ಪುರ್ಣಗೊಳ್ಳುವ ಸಾಧ್ಯತೆ ಇದೆ.
ಯೋಜನೆಯಡಿಯಲ್ಲಿ ಜೆ.ಪಿ. ಪಾರ್ಕ್ ನಲ್ಲಿ 1500 ಆಸನಗಳ ಬಯಲು ರಂಗಮಂದಿರ, ಆಟಿಕೆ ರೈಲು, ವಸಾಹತುಶಾಹಿ ಶೈಲಿಯ ರೈಲು ನಿಲ್ದಾಣ, ಕನ್ವೆನ್ಷನ್ ಸೆಂಟರ್, ಗಡಿಯಾರ ಗೋಪುರ ಮತ್ತು ಮಕ್ಕಳ ಆಟದ ಪ್ರದೇಶವನ್ನು ನಿರ್ಮಿಸಲಾಗುತ್ತಿದೆ.
ಬೆಂಗಳೂರು; ವೇಗ ಪಡೆದ ಮನೆಗೆ ಪಿಎನ್ಜಿ ಸಂಪರ್ಕಿಸುವ ಯೋಜನೆ
ಜೆ.ಪಿ. ಪಾರ್ಕ್ಗೆ ಭೇಟಿ ನೀಡಿ, ವಿವಿಧ ಕಾಮಗಾರಿಯನ್ನು ಪರಿಶೀಲಿಸಿದ ರಾಜರಾಜೇಶ್ವರಿ ನಗರ ವಲಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಮೂರು ತಿಂಗಳಲ್ಲಿ ಬಯಲು ರಂಗಮಂದಿರ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನೊಂದೆಡೆ, 59 ಕೋಟಿ ರೂ. ವೆಚ್ಚದಲ್ಲಿ ಮಲ್ಲತ್ತಹಳ್ಳಿ ಕೆರೆಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ಇಲ್ಲಿ ಕೆರೆ ಸುತ್ತಲೂ ಕಾಂಪೌಂಡ್ ನಿರ್ಮಾಣ, ಗಾಜಿನ ಮನೆ, ತೂಗು ಸೇತುವೆ ನಿರ್ಮಾಣ, ಆಟಿಕೆ ರೈಲು ಮತ್ತು ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಮಲ್ಲತ್ತಹಳ್ಳಿ ಕೆರೆಯನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸುವ ಯೋಜನೆಗೆ ತೀವ್ರ ವಿರೋಧದ ನಡೆಯುವೆಯೂ ಕೆರೆ ಪುನಶ್ಚೇತನ ಕಾಮಗಾರಿ ಮುಂದುವರಿದಿದೆ.
ಅಕ್ರಮ ಹೋಟೆಲ್ ಕಟ್ಟಡ ನೆಲಸಮಗೊಳಿಸಲು ಸೂಚನೆ:
ಮಳೆನೀರು ಕಾಲುವೆ ಮೇಲೆ ನಿರ್ಮಿಸಿರುವ ಅಕ್ರಮ ಹೋಟೆಲ್ ಕಟ್ಟಡವನ್ನು ನೆಲಸಮಗೊಳಿಸುವುದು ಸೇರಿದಂತೆ ಎಲ್ಲಾ ರೀತಿಯ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚಿಸಿದರು.
ರಸ್ತೆ ವಿಸ್ತರಣೆ ಪರಿಶೀಲನೆ:
ಕೆಂಗೇರಿ ಮತ್ತು ಕನಕಪುರ ಮುಖ್ಯ ರಸ್ತೆ ನಡುವಿನ 3.5 ಕಿ.ಮೀ ಉದ್ದದ ಉತ್ತರಹಳ್ಳಿ ಮುಖ್ಯ ರಸ್ತೆಯ ವಿಸ್ತರಣೆಗೆ ಬಿಬಿಎಂಪಿ ಯೋಜನೆ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯ ಆಯುಕ್ತರು, ಪರಿಶೀಲನೆ ನಡೆಸಿದರು. ಭೂಸ್ವಾಧೀನ ಸಮಸ್ಯೆ ಹಿನ್ನೆಲೆಯಲ್ಲಿ ಯೋಜನೆಗೆ ಇನ್ನೂ ಹಸಿರು ನಿಶಾನೆ ದೊರೆತ್ತಿಲ್ಲ.
ರಸ್ತೆ ವಿಸ್ತರಣೆ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಆಸ್ತಿ ಮಾಲೀಕರಿಗೆ ಟಿಡಿಆರ್ ನೀಡುವಂತೆ ಅಧಿಕಾರಿಗೆ ತುಷಾರ್ ಗಿರಿನಾಥ್ ಸೂಚಿಸಿದರು.
ಇದೇ ವೇಳೆ ಮೈಸೂರು ರಸ್ತೆಯಿಂದ ಬೆಂಗಳೂರು ವಿಶ್ವವಿದ್ಯಾನಿಲಯ ಕಡೆಗೆ ಸಂಪರ್ಕಿಸುವ ರಸ್ತೆಯ ವೈಟ್ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಇದನ್ನು ಮುಖ್ಯ ಆಯುಕ್ತರು ಪರಿಶೀಲಿಸಿದರು. ಅಲ್ಲದೇ ಉಲ್ಲಾಳ ವಾರ್ಡ್ ನಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿಮಾರ್ಣಗೊಳ್ಳುತ್ತಿರುವ ಒಣ ಕಸ ಸಂಗ್ರಹ ಕೇಂದ್ರದ ಪ್ರಗತಿ ಪರಿಶೀಲಿಸಿದರು. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಹಾಜರಿದ್ದರು.
Recommended Video