ಸಂವಾದ.ಕಾಂ ಎಡಿಟರ್ ಗೆ ರಕ್ಷಣೆ ಕೊಡಿ: ನಾಗಾಭರಣ
ಬೆಂಗಳೂರು, ಅ.23: ನಿಯಮಬಾಹಿರವಾಗಿ ಅಪಾರ್ಟ್ ಮೆಂಟ್ ನಿರ್ಮಿಸಿ ಫ್ಲ್ಯಾಟ್ ಮಾರಾಟ ಮಾಡಿರುವುದನ್ನು ಕಾನೂನು ರೀತಿ ಪ್ರಶ್ನಿಸಿ ಪರಿಹಾರ ಕೇಳಿದ್ದಕ್ಕೆ ಪತ್ರಕರ್ತ ವಿ.ಚಂದ್ರಶೇಖರ್ ಅಲಿಯಾಸ್ ಶೇಖರ್ ಪೂರ್ಣ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಶೇಖರ್ ಪೂರ್ಣ ಅವರಿಗೆ ರಕ್ಷಣೆ ನೀಡಿ ಎಂದು ನಿರ್ದೇಶಕರಾದ ನಾಗಾಭರಣ, ಪಿ. ಶೇಷಾದ್ರಿ ಅವರು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಶೇಖರ್ ಪೂರ್ಣ ಅವರು ಡೆಕ್ಕನ್ ಹೆರಾಲ್ಡ್ ಪ್ರಜಾವಾಣಿಯಲ್ಲಿ ಉದ್ಯೋಗಿಯಾಗಿದ್ದವರು ಕನ್ನಡ ಚಿತ್ರರಂಗದ ಸದಭಿರುಚಿ ಚಿತ್ರಗಳು ಹಾಗೂ ಕನ್ನಡ ಸಾಹಿತ್ಯದ ಪ್ರೋತ್ಸಾಹಕರಾಗಿದ್ದಾರೆ. ಇದಕ್ಕಾಗಿ ಆನ್ ಲೈನ್ ನಲ್ಲಿ ವೆಬ್ ತಾಣಗಳನ್ನು ನಿರ್ಮಿಸಿ, ಸಂವಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಇವರು ಇರುವ ನಿವಾಸ ಹಾಗೂ ಜನಪ್ರಿಯ ಅಪಾರ್ಟ್ಮೆಂಟಿನ ಅಸೋಸಿಯೇಷನ್ ನವರಿಗೂ ತಕರಾರು ಉಂಟಾಗಿ ನ್ಯಾಯಾಲಯದ ಪ್ರಕರಣ ಮೆಟ್ಟಿಲೇರಿದೆ.
ಶೇಖರ್ ಪೂರ್ಣ ಅವರಿಗೆ ಜೀವ ಬೆದರಿಕೆ ಇದ್ದು ಅವರ ಮೇಲೆ ಹಲ್ಲೆ ನಡೆದಿರುವುದನ್ನು ಪಬ್ಲಿಕ್ ಟಿವಿ, ಜನಶ್ರೀ ವಾಹಿನಿ ಸುದ್ದಿಗಳ ಮೂಲಕ ನೋಡಿ ತಿಳಿದು ಕೊಂಡಿದ್ದೇವೆ. ಹೀಗಾಗಿ ಶೇಖರ್ ಪೂರ್ಣ ಕುಟುಂಬ ರಕ್ಷಣೆ ನೀಡಬೇಕು ಎಂದು ಟಿಎಸ್ ನಾಗಾಭರಣ, ಪಿ ಶೇಷಾದ್ರಿ ಅವರು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ಕೋಡಿಚಿಕ್ಕನಹಳ್ಳಿ ಬಳಿಯ ಜನಪ್ರಿಯ ಲೇಕ್ ವ್ಯೂ ಅಪಾರ್ಟ್ ಮೆಂಟ್ ಮೊದಲ ಹಂತದಲ್ಲಿ ವಾಸವಾಗಿರುವ ನನ್ನನ್ನು ಅಪಾರ್ಟ್ ಮೆಂಟ್ ನಿವಾಸಿಗಳ ಸಂಘದ ಪದಾಧಿಕಾರಿಗಳು ದಿಗ್ಭಂಧನದಲ್ಲಿರಿಸಿದ್ದಾರೆ. ನನ್ನ ಹಾಗೂ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಹಿಂದೆ ಸ್ಥಳೀಯ ಶಾಸಕ ಸತೀಶ್ ರೆಡ್ಡಿ, ಬಿಬಿಎಂಪಿ ಸದಸ್ಯೆ ರೂಪಾ ರಮೇಶ್ ಆವರ ಕುಮ್ಮಕ್ಕು ಇದೆ ಎನ್ನುವುದಕ್ಕೂ ಸಾಕ್ಷ್ಯಾಧಾರಗಳಿವೆ ಎಂದು ಶೇಖರ್ ಪೂರ್ಣ ಅವರು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಿರ್ವಹಣಾ ಶುಲ್ಕ ಪಾವತಿ, ಅಕ್ರಮ ಸಕ್ರಮ, ಕೈ ಚೆಲ್ಲಿದ ಬಿಬಿಎಂಪಿ ಅಧಿಕಾರಿಗಳು ಮುಂತಾದ ವಿವರ ಮುಂದೆ ಓದಿ
ನಿರ್ವಹಣಾ ಶುಲ್ಕ ಪಾವತಿ ಭಿನ್ನಾಭಿಪ್ರಾಯ
ನಿರ್ವಹಣಾ ಶುಲ್ಕ ಪಾವತಿ ಬಗ್ಗೆ ಪದಾಧಿಕಾರಿಗಳು ಮತ್ತು ತಮ್ಮ ನಡುವೆ ಭಿನ್ನಾಭಿಪ್ರಾಯಗಳು ಮೂಡಿ ಬಂದಿವೆ. ಸಂಘದ ಅಧ್ಯಕ್ಷ ಎಸ್.ಎಲ್.ಎನ್.ಪ್ರಸನ್ನ ಕುಮಾರ್ ಮತ್ತಿತರರು ತಮ್ಮ ಫ್ಲ್ಯಾಟ್ ಗೆ ನೀರು ಸರಬರಾಜು, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು, ಮನೆಗೆ ಬರುವ ಸ್ನೇಹಿತರು ಮತ್ತು ಬಂಧುಗಳನ್ನು ಒಳಗೆ ಬಿಡದೆ ತಡೆಯುವುದು ಮುಂತಾದ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಚಂದ್ರಶೇಖರ್ ದೂರಿದ್ದಾರೆ.
ಏನಿದು ಸಮಸ್ಯೆ
ಚಂದ್ರಶೇಖರ್ ಅವರು 2000ರಲ್ಲಿ ಕೋಡಿಚಿಕ್ಕನಹಳ್ಳಿ ಬಳಿಯ ಜನಪ್ರಿಯ ಲೇಕ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಇತ್ತೀಚೆಗೆ ಫ್ಲ್ಯಾಟ್ ಮಾರಾಟಕ್ಕಾಗಿ ಬಿಬಿಎಂಪಿಯಿಂದ ಅನುಮತಿ ಕೇಳಿದಾಗ ಅದಕ್ಕೆ ಸ್ವಾಧೀನ ಪತ್ರ (ಓಸಿ) ಮತ್ತು ಕಟ್ಟಡ ನಿರ್ಮಾಣದ ಆರಂಭಿಕ ಪ್ರಮಾಣ ಪತ್ರ (ಸಿಸಿ) ಅಗತ್ಯ ಎಂದು ಹೇಳಿದ್ದಾರೆ.
ಈ ದಾಖಲೆಗಳನ್ನು ನೀಡುವಂತೆ ಅಪಾರ್ಟ್ ಮೆಂಟ್ ಮಾಲೀಕರನ್ನು ಕೇಳಿದಾಗ ಅವರು ಈಗಾಗಲೇ ತಮ್ಮ ಹಕ್ಕನ್ನು ಅಪಾರ್ಟ್ ಮೆಂಟ್ ನ ನಿವಾಸಿಗಳ ಸಂಘಕ್ಕೆ ಹಸ್ತಾಂತರಿಸಿದ್ದು, ಇದಕ್ಕೂ ತಮಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಇದು ಅಕ್ರಮ ಕಟ್ಟಡ
ನಂತರ ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿ, ಮಾಹಿತಿ ಹಕ್ಕು ಕಾಯಿದೆ ಮೂಲಕ ದಾಖಲೆಗಳನ್ನು ತೆಗೆದುಕೊಂಡಾಗ ಅಪಾರ್ಟ್ ಮೆಂಟ್ ನಿರ್ಮಾಣದಲ್ಲಿ ಕೆಲವು ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಒಟ್ಟು 1.1 ಎಕರೆ ವಿಸ್ತೀರ್ಣದಲ್ಲಿ ಬೇಸ್ ಮೆಂಟ್, ನೆಲ ಅಂತಸ್ತು ಮತ್ತು ಮೂರು ಮಹಡಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಬೇಸ್ ಮೆಂಟ್ ನಿರ್ಮಿಸದೆ ನೆಲ ಅಂತಸ್ತಿನ ಮೇಲೆ ನಾಲ್ಕು ಅಂತಸ್ತುಗಳನ್ನು ನಿರ್ಮಿಸಲಾಗಿದೆ. ಇದು ಕಾನೂನಿಗೆ ವಿರುದ್ಧವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದಿನ ಬೊಮ್ಮನಹಳ್ಳಿ ನಗರಸಭೆ ಬಿಎಂಟಿಎಫ್ ಗೆ ಪತ್ರ ಬರೆದಿತ್ತು.
ಅಕ್ರಮ -ಸಕ್ರಮ ಎಚ್ಚರಿಕೆ
ಇತ್ತೀಚೆಗೆ ಬಿಬಿಎಂಪಿ ಬೊಮ್ಮನಹಳ್ಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ '1976ರ ಕೆಎಂಸಿ ಕಾಯಿದೆ ಪ್ರಕಾರ ಮಂಜೂರಾದ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿರುವ ಭಾಗವನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ, ಪಾಲಿಕೆಯೇ ತೆರವು ಕಾರ್ಯ ಕೈಗೊಂಡು ಅದಕ್ಕೆ ತಗಲುವ ಖರ್ಚುವೆಚ್ಚಗಳನ್ನು ವಸೂಲಿ ಮಾಡಲಾಗುವುದು' ಎಂದು ಸೂಚನೆ ನೀಡಿ ಸ್ಥಿರೀಕರಣ ಆದೇಶ ಹೊರಡಿಸಿದ್ದಾರೆ.
''ಈ ಮಧ್ಯೆ ಸರಕಾರ ಅಕ್ರಮ- ಸಕ್ರಮ ಯೋಜನೆ ಜಾರಿಗೆ ಮುಂದಾಗಿರುವುದರಿಂದ ಪ್ರಸನ್ನ ಕುಮಾರ್, ಅಕ್ರಮ-ಸಕ್ರಮ ದಂಡಶುಲ್ಕಕ್ಕಾಗಿ ಪ್ರತಿ ಫ್ಲ್ಯಾಟ್ ಮಾಲೀಕರಿಂದ ಎರಡು ಲಕ್ಷ ರೂ.ನಂತೆ ವಸೂಲಿ ಮಾಡುತ್ತಿದ್ದಾರೆ. ಅಪಾರ್ಟ್ ಮೆಂಟ್ ನಿರ್ಮಾಣ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಿರುವುದಲ್ಲದೆ ಅಂತಹ ಫ್ಲ್ಯಾಟ್ ಗಳನ್ನು ಮಾರಾಟ ಮಾಡಿ ವಂಚಿಸಿದ್ದಾರೆ. ಅವರಿಂದಲೇ ದಂಡ ವಸೂಲಿ ಮಾಡಬೇಕು ಎನ್ನುತ್ತಾರೆ,'' ಚಂದ್ರಶೇಖರ್.
ಶೇಖರ್ ಪೂರ್ಣಗೆ ರಕ್ಷಣೆ ಕೊಡಿ
ಸೆಟ್ ಬ್ಯಾಕ್ ಹಾಗೂ ನಿರ್ಮಿತಿ ಪ್ರದೇಶ ಉಲ್ಲಂಘನೆಯ ಸಕ್ರಮದಿಂದಲೇ ಸರ್ಕಾರ 3,000 ಕೋಟಿ ರೂ.ಗಿಂತ ಹೆಚ್ಚು ಆದಾಯ ಸಂಗ್ರಹವಾಗುವ ನಿರೀಕ್ಷೆ ಹೊಂದಿದೆ.
ಶೇಖರ್ ಪೂರ್ಣ ಅವರಿಗೆ ಜೀವ ಬೆದರಿಕೆ ಇದ್ದು ಅವರ ಮೇಲೆ ಹಲ್ಲೆ ನಡೆದಿರುವುದನ್ನು ಪಬ್ಲಿಕ್ ಟಿವಿ, ಜನಶ್ರೀ ವಾಹಿನಿ ಸುದ್ದಿಗಳ ಮೂಲಕ ನೋಡಿ ತಿಳಿದು ಕೊಂಡಿದ್ದೇವೆ. ಹೀಗಾಗಿ ಶೇಖರ್ ಪೂರ್ಣ ಕುಟುಂಬ ರಕ್ಷಣೆ ನೀಡಬೇಕು ಎಂದು ಟಿಎಸ್ ನಾಗಾಭರಣ, ಪಿ ಶೇಷಾದ್ರಿ ಅವರು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.