ಭಾನುವಾರ ಜೋಗಿ, ಸಿಂಧು ರಾವ್ ಪುಸ್ತಕ ಬಿಡುಗಡೆ
ಬೆಂಗಳೂರು, ಫೆಬ್ರವರಿ 04 : ಭಾನುವಾರ ಫೆಬ್ರವರಿ 5, ಮಧ್ವನವಮಿಯಂದು ಎರಡು ಗಮ್ಮತ್ತಾದ ಕಥಾಸಂಕನಗಳು ಕನ್ನಡ ಕಥಾಪ್ರಿಯರಿಗೆ ರಸದೌತಣ ಬಡಿಸಲಿವೆ. ಅಕ್ಷರದೌತಣಕ್ಕೂ ಮೊದಲು 9.30ಕ್ಕೆ ಲಘು ಉಪಹಾರವೂ ಇರುತ್ತದೆ.
ಒಂದು, ಖ್ಯಾತ ಅಂಕಣಕಾರ, ಪತ್ರಕರ್ತ, ಕತೆಕಾದಂಬರಿಕಾರ ಜೋಗಿ ಊರ್ಫ್ ಗಿರೀಶ್ ರಾವ್ ಅವರ 'B ಕ್ಯಾಪಿಟಲ್' ಎಂಬ ಪುಸ್ತಕ ಮತ್ತು ಯುವ ಬರಹಗಾರ್ತಿ ಸಿಂಧು ರಾವ್ ಟಿ ಅವರ 'ಸರ್ವಋತು ಬಂದರು' ಎಂಬ ಕಥಾಸಂಕಲನ ಬಿಡುಗಡೆಗೊಳ್ಳಲಿವೆ.[ಕಾದಂಬರಿ ವಿಮರ್ಶೆ: ಉತ್ತರಕಾಂಡದ ಹೆಸರಿನಲ್ಲಿ ಉತ್ತರಪೂರ್ವಕಾಂಡದ ಕತೆ]
ಅಂಕಿತ ಪುಸ್ತಕ ಪ್ರಕಟಿಸುತ್ತಿರುವ ಈ ಎರಡು ಪುಸ್ತಕಗಳು ಬಸವನಗುಡಿಯ ವಾಡಿಯಾರ್ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಸರಿಯಾಗಿ 10.30ಕ್ಕೆ ಅತಿಥಿಗಳು, ಪುಸ್ತಕಪ್ರಿಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿವೆ.
ಖ್ಯಾತ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ, ಕಿರುತೆರೆ ನಿರ್ದೇಶಕ ಟಿಎನ್ ಸೀತಾರಾಮ್, 'ನಾನು ಅವನಲ್ಲ, ಅವಳು' ಚಿತ್ರದ ನಿರ್ದೇಶಕ ಬಿಎಸ್ ಲಿಂಗದೇವರು ಮತ್ತು 'ಕಿರಿಕ್ ಪಾರ್ಟಿ'ಯ ನಾಯಕ ರಕ್ಷಿತ್ ಶೆಟ್ಟಿ ಅವರು ಉಪಸ್ಥಿತರಿರಲಿದ್ದಾರೆ.
ಇವರೊಂದಿಗೆ ಕಾರ್ಯಕ್ರಮದ ಕೇಂದ್ರಬಿಂದುವಾಗಿರುವ ಜೋಗಿ ಮತ್ತು ಸಿಂಧು ರಾವ್ ಅವರು ಇರಲಿದ್ದಾರೆ. ಎರಡೂ ಪುಸ್ತಕಗಳ ಬೆಲೆ 130 ರುಪಾಯಿ. ಭಾನುವಾರ ಬಹುಶಃ ಸ್ವಲ್ಪ ಕಡಿಮೆ ಬೆಲೆ ಸಿಕ್ಕರೂ ಸಿಗಬಹುದು. ಸ್ನೇಹಿತರನ್ನು ಭೇಟಿಯಾಗಲು, ಅತಿಥಿಗಳ ಮಾತುಗಳನ್ನು ಸವಿಯಲು ಖಂಡಿತ ಕಾರ್ಯಕ್ರಮಕ್ಕೆ ಬನ್ನಿ.