ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ: ಕೊನೆಗೂ ಬೆಂಗಳೂರಿಗೆ ಬಂದ ಕಂಪ್ಲಿ ಗಣೇಶ್
ಬೆಂಗಳೂರು, ಫೆಬ್ರವರಿ 21: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಕಂಪ್ಲಿ ಕ್ಷೇತ್ರ(ಬಳ್ಳಾರಿ)ದ ಶಾಸಕ ಜೆ ಎನ್ ಗಣೇಶ್ ಅವರನ್ನು ಪೊಲೀಸರು ಇಂದು ಬೆಂಗಳೂರಿಗೆ ಕರೆತಂದಿದ್ದಾರೆ.
ಬುಧವಾರ ಗಣೇಶ್ ಅವರನ್ನು ಗುಜರಾತಿನಲ್ಲಿ ಬಂಧಿಸಲಾಗಿತ್ತು. ಜನವರಿ 19 ರಂದು ರಾತ್ರಿ ಈಗಲ್ಟನ್ ರೆಸಾರ್ಟ್ ನಲ್ಲಿ ಬಳ್ಳಾರಿ ಗ್ರಾಮಾಂತರ ಶಾಸಕ ಆನಂದ್ ಸಿಂಗ್ ಮೇಲೆ ಗಣೇಶ್ ಹಲ್ಲೆ ನಡೆಸಿದ್ದರು. ನಂತರ ಜ.21 ರಂದು ಅವರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಆ ನಂತರ ಗಣೇಶ್ ತಲೆಮರೆಸಿಕೊಂಡಿದ್ದರು.
ಹಲ್ಲೆ ನಡೆದು ತಿಂಗಳ ಬಳಿಕ ಆರೋಪಿ ಶಾಸಕ ಗಣೇಶ್ ಬಂಧನ
ಕೊನೆಗೂ ಅವರನ್ನು ಫೆ.20 ರಂದು ಗುಜರಾತಿನಲ್ಲಿ ಬಂಧಿಸಲಾಗಿತ್ತು. ಘಟನೆ ನಡೆದ ಒಂದು ತಿಂಗಳ ನಂತರ ರಾಮನಗರ ಪೊಲೀಸರು ಗಣೇಶ್ ಅವರನ್ನು ಬಂಧಿಸಿದ್ದು, ಇಂದೇ ರಾಮನಗರಕ್ಕೆ ಕರೆತಂದು ಸ್ಥಳೀಯ ನ್ಯಾಯಾಲಯದ ಮುಂದೆ ಗಣೇಶ್ ಅವರನ್ನು ಹಾಜರುಪಡಿಸಲಿದ್ದಾರೆ.
ಈ ಹಲ್ಲೆಯಲ್ಲಿ ನನ್ನದೇನೂ ತಪ್ಪಿಲ್ಲ, ಆನಂದ್ ಸಿಂಗ್ ಅವರೇ ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ಅಜ್ಞಾತವಾಗಿದ್ದುಕೊಂಡೇ ಕಂಪ್ಲಿ ಗಣೇಶ್ ಫೇಸ್ ಬುಕ್ ನಲ್ಲಿ ಬರೆದಿದ್ದರು. ಎಫ್ ಐಆರ್ ದಾಖಲಾಗಿದ್ದರೂ ಅವರನ್ನು ಇದುವರೆಗೂ ಬಂಧಿಸದರಿರುವುದಕ್ಕೆ ಸರ್ಕಾರದ ಬೆಂಬಲವೇ ಇದೆ ಎಂಬ ಮಾತೂ ಕೇಳಿಬಂದಿತ್ತು.