ಝುಮಕಿ ನೀಡಿದ ಸುಳಿವಿನಿಂದ ಸಿನಿಮಾ ನಿರ್ಮಾಪಕ ಮನೆಯ ಕಳುವು ಪತ್ತೆ
ಬೆಂಗಳೂರು, ಜು. 29: ರಾಜಧಾನಿಯ ಸ್ಯಾಂಡಲ್ ವುಡ್ ಚಿತ್ರ ನಿರ್ಮಾಪಕನ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಚಿನ್ನದ ಜುಮುಕಿಯಿಂದ ಪತ್ತೆಯಾಗಿದೆ. ಝುಮಿಕಿ ಜಾಡು ಹಿಡಿದು ನಿರ್ಮಾಪಕ ಮನೆಯಲ್ಲಿ ಕಳ್ಳತನ ಆಗಿದ್ದ ಮಾಲನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಳ್ಳರು ಬಂಧನಕ್ಕೆಒಳಗಾಗಿ ಕಂಬಿ ಎಣಿಸುತ್ತಿದ್ದಾರೆ. ಚಿನ್ನದ ಝುಮುಕಿಯಿಂದ ಕಳ್ಳತನ ಪ್ರಕರಣ ಪತ್ತೆಯಾದ ಅಸಲಿ ಸ್ಟೋರಿಯ ವಿವರ ಇಲ್ಲಿದೆ.
ಒಂದಲ್ಲಾ ಒಂದು ಸುಳಿವು ಬಿಡೋದು ಹೀಗೆ: ಯಾವ ಕಳ್ಳನೂ ತಾನು ಸಿಕ್ಕಿ ಹಾಕಿಕೊಳ್ಳಬೇಕು ಎಂಬ ಆಸೆಯಿಂದ ಕಳ್ಳತನಕ್ಕೆ ಇಳಿಯಲ್ಲ. ಮಾಲು ಕದ್ದ ಬಳಿಕ ತನ್ನ ಸುಳಿವು ಸಿಗಬಾರದಂತೆ ಪ್ಲಾನ್ ಹಾಕಿ ಕಾರ್ಯಗತ ಗೊಳಿಸುತ್ತಾರೆ. ಆದರೆ ಸುಳಿವು ಸಿಗಬಾರದು ಎಂದು ಮಾಡುವ ಕೃತ್ಯಗಳೇ ಸುಳಿವು ನೀಡಿ ಅಪರಾಧ ಕೃತ್ಯಗಳು ಬೆಳಕಿಗೆ ಬರಲು ನೆರವಾಗುತ್ತದೆ. ಹೀಗಾಗಿ ಪೊಲೀಸರು ಕೂಡ ಯಾವುದೇ ಅಪರಾಧ ಕೃತ್ಯದಲ್ಲಿ ಮೊದಲು ಕೈ ಹಾಕುವುದೇ ಆರೋಪಿಗಳು ಬಿಟ್ಟು ಹೋಗಿರುವ ಸುಳಿವುಗಳಿಗೆ. ಸುಳಿವಿನಿಂದ ಸಿಗುವ ಮಾಹಿತಿ ಆಧರಿಸಿ ಸಾಕ್ಷ್ಯಾಧಾರಗಳ ಸಮೇತ ಅಪರಾಧಿಗಳನ್ನು ಪತ್ತೆ ಮಾಡುತ್ತಾರೆ. ಇಲ್ಲಿ ಕಳ್ಳರು ಕಳ್ಳತನ ಮಾಡುವ ಮೇಲೆ ಮಾಡಿದ್ದ ಎಡವಟ್ಟಿನಿಂದ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಮಾತ್ರವಲ್ಲ ಆರೋಪಿಗಳು ಬಂಧನಕ್ಕೆ ಹೋಗಿ ಜೈಲಿಗೆ ಹೋಗಿದ್ದಾರೆ.
ಸ್ಯಾಂಡಲ್ ವುಡ್ ನಿರ್ಮಾಪಕನ ಮನೆಯಲ್ಲಿ ಕಳವು
ಸ್ಯಾಂಡಲ್ ವುಡ್ ನಿರ್ಮಾಪಕ ರಮೇಶ್ ಕಶ್ಯಪ್ ಅವರ ಮನೆ ಹನುಮಂತನಗರದ ಶ್ರೀನಗರದಲ್ಲಿದೆ. ಜು. 10 ರಂದು ಕೆಲಸದ ನಿಮಿತ್ತ ರಮೇಶ್ ಕಶ್ಯಪ್ ಕುಟುಂಬ ಹೊರಗೆ ಹೋಗಿತ್ತು. ಮನೆಗೆ ವಾಪಸು ಬಂದರೂ ಏನೂ ಬದಲಾವಣೆ ಆಗಿರಲಿಲ್ಲ.ಮನೆಯಲ್ಲಿ ಲಾಕರ್ ಇರುವ ಕಾರಣ ಕಳ್ಳತನದ ಬಗ್ಗೆ ಸಣ್ಣ ಭಯವೂ ಇರಲಿಲ್ಲ.ಲಾಕರ್ ಸಮೀಪ ರಮೇಶ್ ಕಶ್ಯಪ್ ಅವರ ಮನೆಯವರಿಗೆ ಸಂಬಂಧಿಸಿದ ಝುಮುಕಿಯೊಂದು ಕೆಳಗೆ ಬಿದ್ದಿತ್ತು. ಅದನ್ನು ಲಾಕರ್ನಲ್ಲಿ ಇಡಲು ಹೋದಾಗ 28 ಲಕ್ಷ ರೂ. ಮೌಲ್ಯದ 710 ಗ್ರಾಂ ಚಿನ್ನಾಭರಣ ಹಾಗೂ ಮೂರು ಲಕ್ಷ ರೂಪಾಯಿ ನಗದು ಕಳುವು ಆಗಿರುವುದು ಬೆಳಕಿಗೆ ಬಂದಿತ್ತು. ಕಾರು ಚಾಲಕ ಚಂದ್ರಶೇಖರ್ ಬಗ್ಗೆ ಅನುಮಾನ ವ್ಯಕ್ತವಾದರೂ ಆತನನ್ನು ತುಂಬಾ ನಂಬಿದ್ದರು. ಮನೆಯಲ್ಲಿ ಕಳ್ಳತನ ಆಗಿರುವ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಝಮುಕಿ ಜಾಡು ಹಿಡಿದು ತನಿಖೆ
ಪ್ರಕರಣ ದಾಖಲಿಸುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಹನುಮಂತನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದರು. ಕೆಳಗೆ ಬಿದ್ದಿದ್ದ ಝುಮುಕಿಯನ್ನು ಪಡೆದಿದ್ದರು. ಕಳ್ಳತನ ಆಗಿರುವ ಸಮಯದ ಜಾಡು ಹಿಡಿದು ಸಿಸಿಟಿವಿ ಕ್ಯಾಮರಾ ಹಾಗೂ ಟವರ್ ಲೊಕೇಷನ್ ತಾಂತ್ರಿಕ ನೆರವಿನ ಮೊರೆ ಹೋದರು. ಈ ವೇಳೆ ರಮೇಶ್ ಕಶ್ಯಪ್ ಸ್ನೇಹಿತನ ಮೊಬೈಲ್ ನಂಬರ್ ಸಿಕ್ಕಿತ್ತು. ಆ ಬಳಿಕ ಆತನನ್ನು ವಶಕ್ಕೆ ಪಡೆದಾಗ ನಿರ್ಮಾಪಕ ರಮೇಶ್ ಕಶ್ಯಪ್ ಮನೆಯಲ್ಲಿ ಕಳ್ಳತನದ ಅಸಲಿ ವೃತ್ತಾಂತರವನ್ನು ಬಿಚ್ಚಿಟ್ಟಿದ್ದಾನೆ.
ಅಟ್ಟಿಕಾ ಗೋಲ್ಡ್ ಸಂಸ್ಥೆಯಲ್ಲಿ ಅಡವಿಟ್ಟಿದ್ದರು
ಕೂಡಲೇ ರಮೇಶ್ ಕಶ್ಯಪ್ ಕಾರು ಚಾಲಕ ಅಭಿಶೇಕ್, ಈತನ ಸ್ನೇಹಿತ ಚಂದ್ರಶೇಖರ್ ಇಬ್ಬರನ್ನು ಹನುಮಂತನಗರ ಪೊಲೀಸರ ಬಂಧಿಸಿದ್ದಾರೆ. ಬಂಧಿತರಿಂದ 28 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕದ್ದ ಚಿನ್ನಾಭರಣಗಳನ್ನು ಅಟ್ಟಿಕಾ ಗೋಲ್ಡ್ ಸಂಸ್ಥೆಯಲ್ಲಿ ಅಡವಿಟ್ಟಿದ್ದರು. ಮನೆಯಲ್ಲಿ ಸಿಕ್ಕಿದ್ದ ಝುಮುಕಿಯನ್ನೇ ಹೋಲುವ ಇನ್ನೊಂದು ಝುಮುಕಿ ಅಟ್ಟಿಕಾ ಗೋಲ್ಡ್ ಲೋನ್ ಸಂಸ್ಥೆಯಲ್ಲಿ ಪತ್ತೆಯಾಗಿದ್ದು, ಕದ್ದ ಮಾಲನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಝುಮುಕಿ ನೆರವಾಗಿದೆ.
Recommended Video
ಆತ ನಕಲಿ ಕೀ ಮಾಡಿಸಿದ್ದ
ರಮೇಶ್ ಕಶ್ಯಪ್ ಬಳಿ ಕೆಲಸ ಮಾಡುತ್ತಿದ್ದ ಕಾರು ಚಾಲಕ ಅಭಿಶೇಕ್ ತುಂಬಾ ನಂಬಿಕೆ ಗಳಿಸಿದ್ದ. ಮನೆಯ ಲಾಕರ್ ಕೀ ನೋಡಿದ್ದ ಆತ ನಕಲಿ ಕೀ ಮಾಡಿಸಿದ್ದ. ಲಾಕರ್ ನಲ್ಲಿ ಹಣ ಹಾಗೂ ಚಿನ್ನಾಭರಣ ನೋಡಿದ್ದ ಖದೀಮ, ಜು. 10 ರಂದು ಯಾರೂ ಇಲ್ಲದ ವೇಳೆ ನಕಲಿ ಕೀ ಬಳಿಸಿ ತನ್ನ ಸ್ನೇಹಿತ ಚಂದ್ರಶೇಖರ್ ನೆರವಿನಿಂದ 710 ಗ್ರಾಂ ಚಿನ್ನದ ಆಭರಣ ಹಾಗು ಮೂರು ಲಕ್ಷ ರೂ. ನಗದು ಹಣ ಕದ್ದಿದ್ದಾರೆ. ಹಣ ಹಂಚಿಕೊಂಡಿದ್ದ ಇಬ್ಬರೂ ಚಿನ್ನಾಭರಣಗಳನ್ನು ಅಡವಟ್ಟು ಹಣ ಹಂಚಿಕೊಂಡಿದ್ದರು. ಆದರೆ ಅವರೆ ಬಿಟ್ಟಿದ್ದ ಝುಮುಕಿಯಿಂದ ಸುಳಿವು ಸಿಕ್ಕಿ ಇದೀಗ ಇಬ್ಬರು ಜೈಲು ಸೇರಿದ್ದಾರೆ. ಕಳುವು ಆಗಿದ್ದ ಅಷ್ಟೂ ಮಾಲನ್ನು ಹನುಮಂತನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಅಭಿಷೇಕ್ ಸ್ವಲ್ಪ ಹಣ ಕಳುವು ಮಾಡಿದ್ದು, ಇದು ನಿರ್ಮಾಪಕ ಮತ್ತು ಅವರ ಕುಟುಂಬಕ್ಕೆ ಗೊತ್ತಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಅಂತೂ ಝುಮುಕಿ ಸಿಗದೇ ದಿನ ಕಳೆದಲ್ಲಿ ಕಳ್ಳರು ಸಿಗುತ್ತಿರರಿಲ್ಲ, ಕಳವು ಮಾಲು ರೀಕವರಿ ಆಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.