ಡಿಕೆ ಶಿವಕುಮಾರ್ ರಾಜಕೀಯ ಭವಿಷ್ಯ ನಾಶ: ಕನಕಪುರ ಚಲೋದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್
ಬೆಂಗಳೂರು, ಜನವರಿ 13: ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸುವುದನ್ನು ವಿರೋಧಿಸಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ, ವಿಶ್ವ ಹಿಂದೂ ಪರಿಷದ್, ಹಿಂದೂ ಜಾಗರಣ ವೇದಿಕೆ ಮತ್ತು ವಿವಿಧ ಬಲಪಂಥೀಯ ಸಂಘಟನೆಗಳು ಸೋಮವಾರ ಕನಕಪುರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಪಾಲಬೆಟ್ಟದಲ್ಲಿ 114 ಅಡಿ ಎತ್ತರದ ಏಸು ಪ್ರತಿಮೆ ನಿರ್ಮಾಣವನ್ನು ಖಂಡಿಸಿ ಸುಮಾರು 5000 ಮಂದಿ 'ಕನಕಪುರ ಚಲೋ' ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಕನಕಪುರದ ಜನರಿಗೆ ಶಾಸಕ ಡಿ. ಕೆ. ಶಿವಕುಮಾರ್ ಪತ್ರ
ಈ ವೇಳೆ ಮಾತನಾಡಿದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಕಲಾಪ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅದನ್ನು ತಡೆಯಲು ಬಲಿದಾನಕ್ಕೂ ನಾವು ಸಿದ್ಧರಿದ್ದೇವೆ. ಆದರೆ ಅದಕ್ಕೂ ಮೊದಲು ನಿಮ್ಮ ರಾಜಕೀಯ ಭವಿಷ್ಯದ ಬಲಿದಾನವಾಗಲಿದೆ ಎಂದು ಶಾಸಕ ಡಿ.ಕೆ. ಶಿವಕುಮಾರ್ ಅವರಿಗೆ ಎಚ್ಚರಿಕೆ ನೀಡಿದರು.
ಡಿಕೆ ಶಿವಕುಮಾರ್ ಅವರೇ, ಎಷ್ಟು ದಿನ ಸುಳ್ಳು, ಮೋಸ ವಂಚನೆಮಾಡುತ್ತೀರಿ. ಮತ ಬ್ಯಾಂಕ್ಗಾಗಿ ಏಸು ಪ್ರತಿಮೆ ಮಾಡಲು ಹೊರಟಿದ್ದೀರಾ? ಅದನ್ನು ಬೇಕಾದರೆ ಅಮೆರಿಕ, ಇಂಗ್ಲೆಂಡ್ನಲ್ಲಿ ನಿರ್ಮಿಸಿಕೊಳ್ಳಿ. ಆದರೆ ಇಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಸಮಾಜ ಒಡೆಯುವ ಕೆಲಸ
ಏಸು ಪ್ರತಿಮೆ ಮೂಲಕ ನಮ್ಮ ಸಂಸ್ಕೃತಿಗೆ ಕಲ್ಲು ಹಾಕಲು ಹೊರಟಿದ್ದೀರಿ. ಅದಕ್ಕೆ ನಮ್ಮ ವಿರೋಧವಿದೆ. ಹಿಂದೂ ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದೀರಿ. ಕಪಾಲಬೆಟ್ಟದಲ್ಲಿ ಪ್ರತಿಮೆ ನಿರ್ಮಿಸಲೇಬೇಕು ಎಂದಿದ್ದರೆ ಬುದ್ಧ, ಪೇಜಾವರ ಶ್ರೀಗಳ ಪ್ರತಿಮೆ ನಿರ್ಮಿಸಿ. ದೇಶದಲ್ಲಿರುವ ಹಿಂದೂಗಳ ಜಾಗದಲ್ಲಿ ಚರ್ಚ್, ಮಸೀದಿ ನಿರ್ಮಿಸಲು ಈಗಾಗಲೇ ಅವಕಾಶ ಕೊಟ್ಟಿದ್ದೇವೆ ಎಂದು ಕಿಡಿಕಾರಿದರು.
ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಕಲ್ಲಡ್ಕ ಪ್ರಭಾಕರ್ ಭಟ್ ಯಾರೆಂಬುದೇ ನನಗೆ ಗೊತ್ತಿಲ್ಲ. ಅಧಿಕಾರಕ್ಕಾಗಿ ಈ ರೀತಿಯ ಹೋರಾಟ ಮಾಡುತ್ತಿದ್ದಾರೆ. ಕನಕಪುರದಲ್ಲಿ ಶಾಂತಿ ಕಾಪಾಡಬೇಕೆಂದು ನಾನು ಹೇಳಿದ್ದೇನೆ. ನಮ್ಮಲ್ಲಿಂದ ಒಂದು ನರಪಿಳ್ಳೆ ಕೂಡ ಪ್ರತಿಭಟನೆಗೆ ಹೋಗುವುದಿಲ್ಲ. ಬಿಜೆಪಿ ಅಧಿಕಾರದಲ್ಲಿ ಇರುವುದರಿಂದಾಗಿ ಕೆಲವರು ಹೋಗುತ್ತಾರೆ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದರು.
ಏಸುಗೆ ಡಿಕೆಶಿ ಫೋಟೊ; ಸಾಮಾಜಿಕ ಜಾಲತಾಣದಲ್ಲಿ ಏಸುಕುಮಾರ್ ಎಂದು ಕುಚೋದ್ಯ
ಪ್ರತಿಭಟನೆಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರೆಲ್ಲ ಎಷ್ಟು ಬೇಕಾದರೂ ಬೊಬ್ಬೆ ಹೊಡೆಯಲಿ. ನಾನು ನನ್ನ ಗ್ರಾಮದ ಜನರ ಜೊತೆಗೆ ಇದ್ದೇನೆ. ಆರೆಸ್ಸೆಸ್ ಎಷ್ಟು ಬೇಕಾದರೂ ಪ್ರತಿಭಟನೆ ನಡೆಸಲಿ ಎಂದಿದ್ದರು. ವಿಧಾನಸೌಧದಲ್ಲಿ ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ವಿಚಾರ
ಮೊದಲಿನಿಂದಲೂ ವಿವಾದ
ಕಪಾಲ ಬೆಟ್ಟದ ವಿವಾದವು ಕಂದಾಯ ಇಲಾಖೆಗೆ ಸೇರಿದ ವಿಷಯ. ಒಂದೆಡೆ ಮುನೇಶ್ವರ ಬೆಟ್ಟ ಮತ್ತೊಂದೆಡೆ ಏಸು ಬೆಟ್ಟ ಅನ್ನೋ ವಿವಾದ ಇದೆ. ವಿವಾದ ಹುಟ್ಟುಹಾಕುವ ಕೆಲಸ ಮೊದಲಿಂದಲೂ ನಡೆಯುತ್ತಿದೆ. ಇದು ಡಿಕೆ ಶಿವಕುಮಾರ್ ಅವರಿಗೆ ಗೊತ್ತಿದೆ. ಈ ಕುರಿತು ಈಗಾಗಲೇ ಕಂದಾಯ ಸಚಿವರು ಮಾತನಾಡಿದ್ದಾರೆ. ಅವರು ಪರಿಶೀಲನೆ ಮಾಡುತ್ತಾರೆ.
ನನ್ನ ಆದ್ಯತೆ ಅಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದೇ ಅಗಿದೆ. ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ. ಯಾವ ಕಾರಣಕ್ಕೂ ಘರ್ಷಣೆ ಆಗದಂತೆ ನೋಡಿಕೊಳ್ಳಲು ಹೇಳಿದ್ದೇನೆ. ಸಬಿಜೆಪಿ ಅಧಿಕಾರದಲ್ಲಿ ಇರುವ ಕಾರಣ ಈ ವಿವಾದ ಎದ್ದಿಲ್ಲ. ಯಾವುದೇ ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಇದೇ ರೀತಿ ಈಗ ವಿವಾದ ಎದ್ದಿದೆ. ಪ್ರತಿಭಟನೆ ನಡೆಸುವುದು ಅವರವರ ಸ್ವಾತಂತ್ರ್ಯ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ದೇವರ ವಿಚಾರದಲ್ಲಿ ರಾಜಕಾರಣ ಬೇಡ
ದೇವರ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಅದರ ಹಿಂದಿನ ಉದ್ದೇಶ ಜನರಿಗೆ ಗೊತ್ತಿದೆ, ಹಾಗಾಗಿ ನಾನು ಅದರ ಬಗ್ಗೆ ಚರ್ಚೆಗೆ ಹೋಗೊಲ್ಲ ಎಂದು ಮೊಳಕಾಲ್ಮೂರನಲ್ಲಿ ಮಾಧ್ಯಮಗಳಿಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿಕೆ ನೀಡಿದರು.
ಅನುಮತಿಯನ್ನೇ ಪಡೆದಿಲ್ಲ
ಹಾರೋಹಳ್ಳಿ ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆಗೆ ಸಂಘಟನೆಯವರಾಗಲಿ, ಟ್ರಸ್ಟ್ನವರಾಗಲಿ ಅನುಮತಿಯನ್ನೇ ಪಡೆದಿಲ್ಲ. ಡಿಸೆಂಬರ್ನಲ್ಲಿ ಗ್ರಾಮಪಂಚಾಯ್ತಿಗೆ ಅರ್ಜಿ ಕೊಟ್ಟಿದ್ದಾರೆ. ಬೆಸ್ಕಾಂ ಅನುಮತಿಯನ್ನೇ ಪಡೆಯದೆ ದೂರದಿಂದ ವಿದ್ಯುತ್ ಲೈನ್ ಎಳೆದಿದ್ದಾರೆ. ಕಳೆದ ಆರು ವರ್ಷಗಳಿಂದ ಕೆಲವು ಪ್ರತಿಮೆಗಳನ್ನು ಸಾಗಿಸಿದ್ದಾರೆ. ಮೇಲಾಗಿ ಅಲ್ಲಿ ಟ್ರಸ್ಟ್ ಡೀಡ್ನಲ್ಲಿ ಇಲ್ಲಿ ಆಸ್ಪತ್ರೆ, ಸ್ಕೂಲ್ ಮಾಡುವುದಾಗಿ ತಿಳಿಸಿದ್ದಾರೆ. ಈಗ ಅಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ನ ಏಸು ಪ್ರತಿಮೆ ಸ್ಥಾಪಿಸಿದ್ದಾರೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವರದಿ ನೀಡಲು ಹಿಂದೇಟು
ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದೇನೆ. ಯಾಕೋ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ. ಅದಕ್ಕೆ ಆತುರವೇನಿಲ್ಲ. ಅವರು ಸಮಯ ತೆಗೆದುಕೊಳ್ಳಲಿ, ನಿಖರವಾದ ವರದಿಯನ್ನೇ ಕೊಡಬೇಕು ಎಂದು ಸೂಚಿಸಿದ್ದೇನೆ. ವರದಿ ಬಂದ ಬಳಿಕ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ನಮ್ಮ ತಾಯಿಯನ್ನು ಆದರಿಸೋಣ
ಡಿ.ಕೆ. ಶಿವಕುಮಾರ್ ಗಲಾಟೆ ಬೇಡ ಅಂದರೆ ಗಲಾಟೆ ಮಾಡಿಸುವ ಪ್ರವೃತ್ತಿ ಹೊಂದಿರುವವರು. ಹಾಗಾಗಿ ಅಲ್ಲಿ ಡಿಕೆ ಶಿವಕುಮಾರ್ ಅವರನ್ನು ಪ್ರಚೋದಿಸುವುದು ಬೇಡ. ನಿಮಗೆ ಅಲ್ಲಿನವರೇ ಆದ ಶಿವಕುಮಾರಸ್ವಾಮಿಗಳು, ಬಾಲಗಂಗಾಧರನಾಥ ಸ್ವಾಮಿಗಳು ಮರೆತು ಹೋದ್ರಾ? ಮೊದಲಿಗೆ ನಮ್ಮ ಹೆತ್ತ ತಾಯಿಯನ್ನು ಆದರಿಸೋಣ ಬಳಿಕ ಪಕ್ಕದ ಮನೆ ತಾಯಿಯ ಕಡೆ ನೋಡೋಣ. ನಮಗೆ ಊಟ ಆಗಿ ಮಿಕ್ಕಿದ್ರೆ ಬೇರೆಯವರಿಗೆ ಹಂಚಬಹುದು. ನಮಗೆ ಯಾವ ಧರ್ಮವೂ ವಿರೋಧಿಯಲ್ಲ. ಮೊದಲಿಗೆ ನಮ್ಮ ಧರ್ಮವನ್ನು ಪೂಜಿಸಿ ಬಳಿಕ ಅನ್ಯ ಧರ್ಮವನ್ನು ಆದರಿಸೋಣ ಎಂದು ಹೇಳಿದರು.
ಮುನೇಶ್ವರ ಬೆಟ್ಟದಲ್ಲಿ ಕೂಡ...
ರಾಮನಗರ ಜಿಲ್ಲೆಯ ಮುನೇಶ್ವರ ಬೆಟ್ಟದಲ್ಲಿಯೂ ಕೂಡ ತಮಿಳುನಾಡಿಂದ ಬಂದವರೊಬ್ಬರು ಅಕ್ರಮವಾಗಿ ಅತಿಕ್ರಮಿಸಿಕೊಂಡು ಶಿಲುಬೆ ನೆಟ್ಟಿದ್ದಾರೆ. ಸರ್ಕಾರದ ಸೂಚನೆಯನ್ನೂ ಧಿಕ್ಕರಿಸಿದ್ದಾರೆ. ಅವರ ವಿರುದ್ದವೂ ಕ್ರಮ ಜರುಗಿಸಲಾಗುತ್ತದೆ. ಈಗ ಡಿ.ಕೆ.ಶಿವಕುಮಾರ್ ಅವರ ಕೃಪಾಕಟಾಕ್ಷದಿಂದ ದಾಖಲೆಗಳನ್ನು ತಿದ್ದುತ್ತಿದ್ದಾರೆ ಎಂದು ಆರೋಪಿಸಿದರು.