ಜೆಡಿಎಸ್ ಸಭೆಯಲ್ಲೇ ಗೌಡ್ರಿಗೆ 'ಕ್ಲಾಸ್' ತೆಗೆದುಕೊಂಡ ಕಾರ್ಯಕರ್ತ ಸಸ್ಪೆಂಡ್
Recommended Video
ತಮ್ಮ ಎಂಬತ್ತು ಪ್ಲಸ್ ವರ್ಷದ ರಾಜಕೀಯ ಜೀವನದಲ್ಲಿ ಎಂತೆಂಥಾ ರಾಜಕೀಯವನ್ನು ದೇವೇಗೌಡ್ರು ನೋಡಿರಬಹುದು, ಆದರೆ ತಮ್ಮದೇ ಪಕ್ಷದ ಕಾರ್ಯಕರ್ತನೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಗೌಡ್ರು ಅಕ್ಷರಸಃ ತಬ್ಬಿಬ್ಬಾಗಿ ಹೋಗುವಂತಾದ ಘಟನೆ ಎರಡು ದಿನದ ಹಿಂದೆ ನಡೆದಿತ್ತು.
ಪಕ್ಷಕ್ಕೆ ಮತ್ತು ದೇವೇಗೌಡರಿಗೆ ಮಾಧ್ಯಮವರ ಮುಂದೆ ಮುಜುಗರ ತಂದೊಡ್ಡಿದ ಕಾರ್ಯಕರ್ತನನ್ನು ಅಮಾನತುಗೊಳಿಸಿ, ಸೋಮವಾರದಂದು (ಜುಲೈ 1) ಬೆಂಗಳೂರು ನಗರ ಘಟಕದ ಅಧ್ಯಕ್ಷ ಪ್ರಕಾಶ್ ಆದೇಶ ಹೊರಡಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರ ಜೊತೆ 4 ಕಾರ್ಯಾಧ್ಯಕ್ಷರ ನೇಮಕ
ಪಕ್ಷದ ಪ್ರಧಾನ ಕಚೇರಿ ಜೆ ಪಿ ಭವನದಲ್ಲಿ ಕಾರ್ಯಕರ್ತನೊಬ್ಬ ಏರುದನಿಯಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗ, ವೇದಿಕೆಯಲ್ಲಿದ್ದ ಯಾವ ಮುಖಂಡರಿಗೂ ಏನು ಮಾಡಬೇಕೆಂದು ತೋಚಲಿಲ್ಲ.
ರಿವರ್ಸ್ ಆಪರೇಷನ್ ಮಾಡ್ತೀವಿ, ಹುಷಾರ್: ಬಿಜೆಪಿಗೆ ಎಚ್ಚರಿಕೆ
ಅದೆಷ್ಟೋ ಬಾರಿ ಗೌಡ್ರು ಲೋಕಸಭೆಯಲ್ಲಿ ಸಭಾತ್ಯಾಗ ಮಾಡಿರಬಹುದು, ಆದರೆ, ಯಾರೂ ನಿರೀಕ್ಷಿಸದ ಈ ಘಟನೆಯಿಂದ ಗೌಡ್ರು ಕಾರ್ಯಕರ್ತರ ಸಭೆಯಲ್ಲೇ ಅರ್ಧದಲ್ಲಿ ಎದ್ದು ಹೋಗುವಂತಾಯಿತು. ಅಸಲಿಗೆ ನಡೆದಿದ್ದೇನು?
ಜೆಡಿಎಸ್ ಕಾರ್ಯಕರ್ತರ ಸಭೆ ಜೆ ಪಿ ಭವನದಲ್ಲಿ ನಡೆಯುತ್ತಿತ್ತು
ಬೆಂಗಳೂರು ನಗರ ಜೆಡಿಎಸ್ ಕಾರ್ಯಕರ್ತರ ಸಭೆ ಜೆ ಪಿ ಭವನದಲ್ಲಿ ನಡೆಯುತ್ತಿತ್ತು. ಗೌಡ್ರು, ಕುಪೇಂದ್ರ ರೆಡ್ಡಿ, ಶರವಣ, ಶಾಸಕ ಗೋಪಾಲಯ್ಯ ಮುಂತಾದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಿರಿಕ್ ಆಗಲು ಕಾರಣವಾಗಿದ್ದು, ನಿಯತ್ತಾಗಿ ದುಡಿಯುತ್ತಿರುವ ಜೆಡಿಎಸ್ ಕಾರ್ಯಕರ್ತರನ್ನು ಪಕ್ಷ 'ನೋಡಿಕೊಳ್ಳುವುದು' ಯಾವಾಗ ಎನ್ನುವ ಕಾರ್ಯಕರ್ತರ ನೋವಿಗಾಗಿ..
ಇಷ್ಟು ವರ್ಷದಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ, ನಮಗೇನು ಮಾಡಿದ್ದೀರಾ
ಸಭೆ ಆರಂಭವಾಗುತ್ತಿದ್ದಂತೆಯೇ, ಬರೀ ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಕೊಡುತ್ತೀರಲ್ಲಾ.. ನಾವು ಇಷ್ಟು ವರ್ಷದಿಂದ ನಿಯತ್ತಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ, ನಮಗೇನು ಮಾಡಿದ್ದೀರಾ, ನಮಗೂ ಸ್ಥಾನಮಾನ ಕೊಡಿ ಎಂದು ಕೆಲವು ಕಾರ್ಯಕರ್ತರು ನೇರವಾಗಿ ದೇವೇಗೌಡರನ್ನು ಏರುದನಿಯಲ್ಲಿ ಪ್ರಶ್ನಿಸಲಾರಂಭಿಸಿದರು.
ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಗೌಡ್ರು ತಬ್ಬಿಬ್ಬು
ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಗೌಡ್ರು ತಬ್ಬಿಬ್ಬಾದರು. ಕೂಡಲೇ, ಶಾಸಕ ಗೋಪಾಲಯ್ಯ ಮತ್ತು ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಪ್ರಕಾಶ್ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಅಷ್ಟಕ್ಕೆ ಸುಮ್ಮನಾಗದ ಕಾರ್ಯಕರ್ತರು, ಎರಡು ಪಕ್ಷಕ್ಕೆ ಸೇರದವರಿಗೆ ಅಧ್ಯಕ್ಷ ಸ್ಥಾನ ಕೊಡುತ್ತೀರಾ ಎಂದು ಅಸಮಾಧಾನ ಹೊರಹಾಕುತ್ತಲೇ ಇದ್ದಿದ್ದರಿಂದ ಸಭೆಯಿಂದ ಗೌಡ್ರು ಹೊರ ನಡೆದರು.
ಕುಪೇಂದ್ರ ರೆಡ್ಡಿಯವರನ್ನೂ ಕಾರ್ಯಕರ್ತರು ಪ್ರಶ್ನಿಸಲಾರಂಭಿಸಿದರು
ಇದಾದ ಮೇಲೆ ಕುಪೇಂದ್ರ ರೆಡ್ಡಿಯವರನ್ನೂ ಕಾರ್ಯಕರ್ತರು ಪ್ರಶ್ನಿಸಲಾರಂಭಿಸಿದರು. ನೀವು ಹೀಗೆ ನಮ್ಮನ್ನು ಕಡೆಗಣಿಸಿದರೆ, ನಾವು ಹೇಗೆ ಕೆಲಸ ಮಾಡುವುದು ಎಂದು ಅವರ ಬಳಿಯೂ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ರೆಡ್ಡಿ ಅಲ್ಲಿಂದ ಹೊರ ನಡೆದರು.
ಜೆಡಿಎಸ್ ಕಾರ್ಯಕರ್ತರಲ್ಲಿ ಒಬ್ಬನನ್ನು ಪಕ್ಷದಿಂದ ಅಮಾನತು
ಭಾನುವಾರ (ಜೂ 30) ನಡೆದ ಘಟನೆಯಿಂದ ತೀವ್ರ ಮುಜುಗರ ಎದುರಿಸಿದ ಜೆಡಿಎಸ್, ಕಾರ್ಯಕರ್ತರಲ್ಲಿ (ಕೆ ಎಚ್ ಕುಮಾರ್, ರಾಜಾಜಿನಗರ) ಒಬ್ಬನನ್ನು ಸೋಮವಾರ ಪಕ್ಷದಿಂದ ಅಮಾನತು ಮಾಡಿದೆ. ಅನಗತ್ಯವಾಗಿ ಮೈಕ್ ಕಸಿದುಕೊಂಡು ಮಾತನಾಡಲು ಪ್ರಯತ್ನ ಪಟ್ಟಿರುತ್ತೀರಿ. ಎಲ್ಲಾ ನಾಯಕರಿಗೆ ಅಗೌರವ ತೋರಿಸಿದ್ದೀರಿ. ನಿಮ್ಮೆಲ್ಲಾ ನಡುವಳಿಕೆಗಳನ್ನು ಖಂಡಿಸುತ್ತಾ, ಈ ಕೂಡಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿರುತ್ತದೆ ಎಂದು ಆರ್ ಪ್ರಕಾಶ್ (ಅಧ್ಯಕ್ಷ, ಜೆಡಿಎಸ್, ಬೆಂಗಳೂರು) ಅಮಾನತು ನೋಟಿಸ್ ನಲ್ಲಿ ಹೇಳಿದ್ದಾರೆ.