ಮಧ್ಯಂತರ ಚುನಾವಣೆಗೆ ಸಜ್ಜಾಗಿ ಎಂದ ದೇವೇಗೌಡರಿಂದ ವಿಶ್ವನಾಥ್ ಮನವೊಲಿಕೆ?
ಬೆಂಗಳೂರು, ಜೂನ್ 18: ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ಬಹುತೇಕ ನಿಶ್ಚಿತವಾದಂತೆ ಇದೆ. ಈ ಹಿನ್ನೆಲೆಯಲ್ಲಿ ಪಕ್ಷಾಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ವಾಪಸ್ ಪಡೆದು, ಪಕ್ಷವನ್ನು ಮುನ್ನಡೆಸುವಂತೆ ಮಾಜಿ ಪ್ರಧಾನಿ- ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಅವರು ಎಚ್.ವಿಶ್ವನಾಥ್ ಅವರಿಗೆ ಸೂಚನೆ ನೀಡಿದ್ದಾರೆ ಎನ್ನುತ್ತವೆ ಮೂಲಗಳು.
ಪದ್ಮನಾಭ ನಗರದ ತಮ್ಮ ನಿವಾಸಕ್ಕೆ ವಿಶ್ವನಾಥ್ ಅವರನ್ನು ಕರೆಸಿಕೊಂಡ ದೇವೇಗೌಡರು ಈ ಸೂಚನೆ ನೀಡಿದ್ದು, ರಾಜೀನಾಮೆಯನ್ನು ಹಿಂಪಡೆಯಲಾರೆ ಎಂದು ವಿಶ್ವನಾಥ್ ಅವರು ಸಹ ದೊಡ್ಡ ಗೌಡರಿಗೆ ಮಾತು ನೀಡಿದ್ದಾರಂತೆ. ದೇವೇಗೌಡರು ನೀಡಿದ ಇಷಾರೆ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆ ನಿರ್ಧಾರವನ್ನು ವಿಶ್ವನಾಥ್ ಅವರು ಪುನರ್ ಪರಿಶೀಲಿಸತೊಡಗಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆಗಳು ಹೆಚ್ಚಾಗಿವೆ.
ಜೆಡಿಎಸ್ ನಾಯಕರ ವಿರುದ್ಧ ಮತ್ತೆ ಎಚ್.ವಿಶ್ವನಾಥ್ ಗರಂ
ಈಚೆಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ವಿಶ್ವನಾಥ್. ಆದರೆ ಪಕ್ಷದ ನಾಯಕರು ನಿಮ್ಮ ನಿರ್ಧಾರವನ್ನು ಹಿಂಪಡೆಯಿರಿ ಎಂದು ಪದೇಪದೇ ಹೇಳಿದ್ದರೂ ಒಪ್ಪಿರಲಿಲ್ಲ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ವಿಶ್ವನಾಥ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ದೇವೇಗೌಡರು, ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ನಿಮ್ಮನ್ನು ಬಿಟ್ಟು ಬೇರೆಯವರನ್ನು ತಂದು ಕೂರಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಮಧುಬಂಗಾರಪ್ಪ ಅವರಿಗೆ ಅಧ್ಯಕ್ಷ ಸ್ಥಾನ ನೀಡಿ
ಇವತ್ತಿನ ರಾಜಕೀಯ ಪರಿಸ್ಥಿತಿಯು ದಿನ ದಿನಕ್ಕೂ ಸೂಕ್ಷ್ಮವಾಗುತ್ತಿದೆ. ಈಗಿನ ಪರಿಸ್ಥಿತಿ ನೋಡಿದರೆ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ಬಹುತೇಕ ಖಚಿತ. ಹೀಗಾಗಿ ಮುಂದಿನ ಚುನಾವಣೆಯನ್ನು ಎದುರಿಸಲು ನಾವು ಸಜ್ಜಾಗಬೇಕು. ಹಾಗೆಯೇ ಈ ಸಂದರ್ಭದಲ್ಲಿ ನಿಮ್ಮನ್ನು ಹೊರತುಪಡಿಸಿ ಆ ಜಾಗದಲ್ಲಿ ಯಾರನ್ನು ಕೂರಿಸಲು ಸಾಧ್ಯವಿಲ್ಲ ಎಂದು ದೇವೇಗೌಡರು ವಿವರಿಸಿದ್ದಾರೆ. ಒಂದು ಹಂತದಲ್ಲಿ ವಿಶ್ವನಾಥ್ ಮಧ್ಯೆ ಪ್ರವೇಶಿಸಿ, ನಾನು ರಾಜೀನಾಮೆ ಹಿಂಪಡೆಯಲಾರೆ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮಧುಬಂಗಾರಪ್ಪ ಅವರನ್ನು ಕೂರಿಸಿ. ಆ ಮೂಲಕ ಹಿಂದುಳಿದ ಸಮುದಾಯಕ್ಕೆ ಆದ್ಯತೆ ನೀಡಿದಂತೆಯೂ ಆಗುತ್ತದೆ ಎಂದು ಹೇಳಿದ್ದಾರೆ.
ಅದದ್ದೆಲ್ಲ ಮರೆತಿದ್ದೇನೆ ಎಂದರಂತೆ ವಿಶ್ವನಾಥ್
ಆದರೆ, ವಿಶ್ವನಾಥ್ ಅವರ ಮಾತನ್ನು ಒಪ್ಪದ ದೇವೇಗೌಡ, ನಿಮಗೆ ನಾನಾ ವಿಚಾರಗಳಿಗೆ ಮನಸಿಗೆ ಬೇಸರವಾಗಿದೆ ಎಂಬ ಸಂಗತಿ ನನಗೆ ಗೊತ್ತಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೀವು ಹೇಳಿದ ಅಭ್ಯರ್ಥಿಗಳಿಗೆ ಸಚಿವ ಸಾ.ರಾ.ಮಹೇಶ್ ಟಿಕೆಟ್ ನೀಡಲಿಲ್ಲ ಎಂಬುದು ನನಗೆ ಗೊತ್ತಿದೆ ಎಂದಿದ್ದಾರೆ. ಆಗ ಸ್ಥಳದಲ್ಲೇ ಇದ್ದ ಸಾ.ರಾ.ಮಹೇಶ್, ನಡೆದ ಘಟನೆಯನ್ನು ಮರೆತುಬಿಡಿ ಎಂದು ವಿಶ್ವನಾಥ್ ಅವರನ್ನು ವಿನಂತಿಸಿದ್ದಾರೆ. ಯಾವಾಗ ಸ್ವತಃ ಸಾ.ರಾ.ಮಹೇಶ್ ಅವರೇ ಈ ರೀತಿ, ನಡೆದದ್ದನ್ನು ಮರೆತುಬಿಡಿ ಎಂದರೋ ಆಗ ವಿಶ್ವನಾಥ್ ಅವರೂ 'ನಾನು ಅದನ್ನೆಲ್ಲ ಮರೆತಿದ್ದೇನೆ' ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೈತ್ರಿ ಸರಕಾರದ ಅನಿವಾರ್ಯ ಇದು
ಅದೇ ರೀತಿ ವಿಶ್ವನಾಥ್ ಅವರು ರಾಜಕೀಯವಾಗಿ ಬಯಸಿದ ಸ್ಥಾನಮಾನಗಳ ಕುರಿತೂ ದೇವೇಗೌಡರು ಮಾತನಾಡಿದ್ದಾರೆ. ಅಲ್ಲದೆ ಸಮ್ಮಿಶ್ರ ಸರಕಾರದ ಅನಿವಾರ್ಯಗಳು ನಿಮಗೆ ಅರ್ಥವಾಗುತ್ತವೆ ಎಂದಾಗ ವಿಶ್ವನಾಥ್ ಸುಮ್ಮನಾಗಿದ್ದಾರೆ. ಈ ಎಲ್ಲದರ ಮಧ್ಯೆ, ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆಗಳು ದಟ್ಟವಾಗಿರುವ ಕುರಿತು ದೇವೇಗೌಡರು ಬಹಳ ಹೊತ್ತು ಮಾತನಾಡಿದ್ದಾರೆ. ಸಭೆಯಲ್ಲಿ ಉನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ,ಸಾ.ರಾ.ಮಹೇಶ್ ಸೇರಿದಂತೆ ಹಲ ಪ್ರಮುಖರು ಉಪಸ್ಥಿತರಿದ್ದರು.
ತಾತ್ಕಾಲಿಕವಾಗಿ ಸರಕಾರದ ಗಂಡಾಂತರಕ್ಕೆ ತಡೆ
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ನಾಗೇಶ್ ಹಾಗೂ ಶಂಕರ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಯಾವ ಖಾತೆ ಎಂಬುದು ಇನ್ನೂ ಖಾತ್ರಿ ಆಗಿಲ್ಲದಿದ್ದರೂ ಅಷ್ಟರ ಮಟ್ಟಿಗೆ ಸರಕಾರದ ಪಾಲಿನ ಗಂಡಾಂತರಕ್ಕೆ ತಡೆ ಹಾಕಿದಂತಾಗಿದೆ. ಆದರೆ ಈ ಬೆಳವಣಿಗೆಯಿಂದ ಅತೃಪ್ತರ ಅಸಮಾಧಾನ ಮತ್ತಷ್ಟು ಹೆಚ್ಚಾಗಿದ್ದು, ಸರಕಾರ ಬೀಳುತ್ತದೆ ಎಂಬ ಮಾತುಗಳು ಕೇಳಲಾರಂಭಿಸಿವೆ.