ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಮಧು ಬಂಗಾರಪ್ಪ ನೇಮಕ?
Recommended Video
ಬೆಂಗಳೂರು, ಜೂನ್ 25: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಚ್ ವಿಶ್ವನಾಥ್ ಅವರು ರಾಜೀನಾಮೆ ನೀಡಿ ಸುಮಾರು ಒಂದು ತಿಂಗಳಾದರೂ ಅದಿನ್ನೂ ಅಂಗೀಕಾರವಾಗಿಲ್ಲ. ಅತ್ತ ಅವರ ಜಾಗಕ್ಕೆ ಮತ್ತೊಬ್ಬ ಸಮರ್ಥ ಮುಖಂಡನನ್ನು ಆಯ್ಕೆ ಮಾಡುವ ಕಸರತ್ತು ಸಹ ಮುಗಿಯುತ್ತಿಲ್ಲ.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅನೇಕ ಹೆಸರುಗಳು ಕೇಳಿಬರುತ್ತಿವೆ. ಇದರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರೂ ಸೇರಿದೆ. ಎಚ್ ಡಿ ಕುಮಾರಸ್ವಾಮಿ ಅವರು ಈ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಿದ ಅನುಭವ ಹೊಂದಿದ್ದರು. ಆದರೆ, ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನೀತಿ ಅಳವಡಿಸಿಕೊಂಡಿರುವುದರಿಂದ ಕುಮಾರಸ್ವಾಮಿ ಅವರ ಹೆಸರನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.
ಮೂರು ನಾಲ್ಕು ದಿನಗಳಲ್ಲಿ ಜೆಡಿಎಸ್ ರಾಜ್ಯ ಘಟಕಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಎಚ್ ವಿಶ್ವನಾಥ್ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡುವುದಿಲ್ಲ. ಅವರಿಂದಲೇ ಹೊಸ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿಸಲಾಗುತ್ತದೆ ಎಂದು ದೇವೇಗೌಡ ತಿಳಿಸಿದ್ದಾರೆ.
4 ದಿನದಲ್ಲಿ ಜೆಡಿಎಸ್ಗೆ ಹೊಸ ಅಧ್ಯಕ್ಷರ ನೇಮಕ : ದೇವೇಗೌಡ
ಈ ನಡುವೆ ಜೆಡಿಎಸ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಯಾರು ಸೂಕ್ತ ಎಂಬ ಲೆಕ್ಕಾಚಾರ ಜೋರಾಗಿದೆ. ರಾಜೀನಾಮೆ ಅಂಗೀಕರಿಸಲೇಬೇಕು ಎಂದು ಪಟ್ಟು ಹಿಡಿದಿರುವ ಅಧ್ಯಕ್ಷ ಎಚ್ ವಿಶ್ವನಾಥ್, ತಮ್ಮ ಉತ್ತರಾಧಿಕಾರಿಯ ಸ್ಥಾನಕ್ಕೆ ಮಧು ಬಂಗಾರಪ್ಪ ಅವರ ಹೆಸರು ಸೂಚಿಸಿದ್ದಾರೆ.
ಕುಮಾರಸ್ವಾಮಿ ಅವರೇ ಸೂಕ್ತ
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರಾಜ್ಯದ ಅಧಿಕಾರ ನಡೆಸುವುದರ ಜತೆಗೆ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನೂ ನಿಭಾಯಿಸಿದ್ದರು. ಈಗ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೇ ಸೂಕ್ತರು. ಅವರ ನಾಯಕತ್ವದ ಮೇಲೆ ಪಕ್ಷದ ಎಲ್ಲರಿಗೂ ನಂಬಿಕೆ ಇದೆ. ಆದರೆ, ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂದು ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ. ಹೀಗಾಗಿ ಪಕ್ಷದ ತೀರ್ಮಾನದಂತೆ ಬೇರೆಯವರಿಗೆ ಕೊಡಬಹುದು ಎಂದು ಎಚ್. ವಿಶ್ವನಾಥ್ ಹೇಳಿದರು.
ಎಚ್.ವಿಶ್ವನಾಥ್ ಮನವೊಲಿಸುವ ದೇವೇಗೌಡರ ಪ್ರಯತ್ನಕ್ಕೆ ಫಲವಿಲ್ಲ?
ಮಧು ಬಂಗಾರಪ್ಪ ಆಗಲಿ
ಜೆಡಿಎಸ್ ರಾಜ್ಯಘಟಕದ ಅಧ್ಯಕ್ಷ ಸ್ಥಾನಕ್ಕೆ ಎಚ್ ವಿಶ್ವನಾಥ್ ಅವರು ಮಧು ಬಂಗಾರಪ್ಪ ಅವರ ಹೆಸರು ಸೂಚಿಸಿದ್ದಾರೆ. ಈಡಿಗ ಸಮುದಾಯದವರಾದ ಮಧು ಬಂಗಾರಪ್ಪ ಅವರು ಹಿಂದುಳಿದ ಸಮುದಾಯಗಳನ್ನು ಒಗ್ಗೂಡಿಸಲು ಸಾಧ್ಯವಾಗುತ್ತದೆ. ಯುವ ಜನತಾದಳದ ಅಧ್ಯಕ್ಷರಾಗಿದ್ದ ಅನುಭವ ಅವರಿಗಿದೆ. ಮಿಗಿಲಾಗಿ ಇನ್ನೂ ಯುವಕರು. ಎರಡು ಬಾರಿ ಚುನಾವಣೆಯಲ್ಲಿ ಸೋತಿರುವ ಅವರಿಗೆ ಪಕ್ಷ ಸಂಘಟನೆಗೆ ಸಾಕಷ್ಟು ಸಮಯ ದೊರಕಿದೆ. ಹೀಗಾಗಿ ಅವರ ಹೆಸರನ್ನು ಶಿಫಾರಸು ಮಾಡುತ್ತೇನೆ ಎಂದು ವಿಶ್ವನಾಥ್ ಹೇಳಿದ್ದಾರೆ.
ಶಾಸಕ ಸ್ಥಾನ ಬಿಡಬೇಕಾಗುತ್ತದೆ
ಎಚ್ ವಿಶ್ವನಾಥ್ ಅವರ ರಾಜೀನಾಮೆಯನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ತಮ್ಮ ನಿವಾಸಕ್ಕೆ ಕರೆಯಿಸಿ ಮಾತುಕತೆ ನಡೆಸಿದ್ದರು. ಆದರೆ, ಆ ಪ್ರಯತ್ನ ಫಲಕೊಡಲಿಲ್ಲ. ವಿಶ್ವನಾಥ್ ಅವರು ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕಾದರೆ ಹುಣಸೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಶಾಸಕನಾಗಿ ಕ್ಷೇತ್ರದ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಪಕ್ಷದ ಈ ಜವಾಬ್ದಾರಿ ಬೇಡ ಎಂದು ಅವರು ಹೇಳಿದ್ದಾರೆ.
ಕಷ್ಟವಾದರೆ ಬೆಂಬಲ ಹಿಂಪಡೆದು ಹೋಗಲಿ: ಕಾಂಗ್ರೆಸ್ ವಿರುದ್ಧ ವಿಶ್ವನಾಥ್ ಕಿಡಿ
ಮೂರು ನಾಲ್ಕು ದಿನದಲ್ಲಿ ನೇಮಕ
ಇನ್ನು ಮೂರು ನಾಲ್ಕು ದಿನಗಳಲ್ಲಿ ಜೆಡಿಎಸ್ ರಾಜ್ಯ ಘಟಕಕ್ಕೆ ಹೊಸ ಸಾರಥಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಮಾಜಿ ಶಾಸಕ ವೈಎಸ್ವಿ ದತ್ತ, ಮಧುಬಂಗಾರಪ್ಪ, ಬಿಎಂ ಫಾರೂಕ್, ಎಚ್ ಕೆ ಕುಮಾರಸ್ವಾಮಿ ಅವರ ಹೆಸರು ಕೇಳಿಬರುತ್ತಿದೆ.