ಜೆಡಿಎಸ್ ವಕ್ತಾರ ರಮೇಶ್ ಬಾಬು ಟ್ವಿಟ್ಟರ್ ಸ್ವರೂಪ ಬದಲು ಸ್ಪಷ್ಟನೆ
ಬೆಂಗಳೂರು, ನವೆಂಬರ್15: ಜೆಡಿಎಸ್ ಮುಖಂಡ, ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರ ಅನುಯಾಯಿ, ಮಾಜಿ ಎಂಎಲ್ಸಿ, ವಕೀಲ ರಮೇಶ್ ಬಾಬು ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ದೇವೇಗೌಡರ ವಿರುದ್ಧ ''ಸಾಂಕೇತಿಕ"ವಾಗಿ ಪ್ರತಿಭಟನೆ ನಡೆಸಿದ್ದಾರೆ.
ಜಾತ್ಯಾತೀತ ಜನತಾ ದಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರರೂ ಆಗಿರುವ ರಮೇಶ್ ಬಾಬು ಅವರು ಪಕ್ಷದ ವರಿಷ್ಠ ದೇವೇಗೌಡರ ವಿರುದ್ಧವೇ ಪ್ರತಿಭಟನೆ ಹೇಗೆ ಸಾಧ್ಯ? ಎಂದು ಹಲವಾರು ಮಂದಿ ಹುಬ್ಬೇರಿಸಿದ್ದಾರೆ.
ಉಪ ಚುನಾವಣೆ:10 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ
ಕೆಲವರು ಊಹಾಪೋಹಾ ಸುದ್ದಿ ಹಬ್ಬಿಸಲು ಯತ್ನಿಸುತ್ತಿದ್ದಾರೆ ಇದಕ್ಕೆಲ್ಲ ಫುಲ್ ಸ್ಟಾಪ್ ಹಾಕಲು ರಮೇಶ್ ಬಾಬು ಅವರಿಗೆ ಒನ್ಇಂಡಿಯಾ ಕನ್ನಡ ಪ್ರತಿನಿಧಿ ಕರೆ ಮಾಡಿದಾಗ ಅವರು ಕೊಟ್ಟ ಸ್ಪಷ್ಟನೆ ಹೀಗಿತ್ತು:
"ವಿಧಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಕೇತ್ರಗಳಿಗೆ ನಡೆಯುವ ಚುನಾವಣೆಗೆ ಇನ್ನೂ ಸಮಯವಿದೆ. ಈಗ ಪ್ರಕಟವಾಗಿರುವುದನ್ನು ತಾತ್ಕಾಲಿಕ ಪಟ್ಟಿ ಎನ್ನಬಹುದು. ಬಿ ಫಾರಂ ಮೇ ತಿಂಗಳಲ್ಲಿ ನೀಡಬಹುದು ಜೂನ್ ನಲ್ಲಿ ಅಂತಿಮ ಪಟ್ಟಿ ನಿರೀಕ್ಷಿಸಬಹುದು. ಟ್ವಿಟ್ಟರ್ ನಲ್ಲಿ ಬದಲಾವಣೆ ಬಗ್ಗೆ ಹೆಚ್ಚಿನ ಅರ್ಥ ಕಲ್ಪಿಸುವುದು ಬೇಡ. ಇದೊಂದು ಸಾಂಕೇತಿಕ ಪ್ರತಿಭಟನೆ ಎಂದು ತಿಳಿದುಕೊಳ್ಳಬಹುದು. ನೋಡೋಣ ಇನ್ನೂ ಅವಕಾಶವಿದೆ'' ಎಂದರು.
ವಿಧಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಕೇತ್ರಗಳಿಗೆ ನಡೆಯುವ ಚುನಾವಣೆಗೆ ಜೆಡಿಎಸ್ ವತಿಯಿಂದ ಟಿಕೆಟ್ ಪ್ರಕಟಿಸಲಾಗಿದೆ. ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಆರ್. ಚೌಡರೆಡ್ಡಿ ತೂಪಲ್ಲಿ, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಎ.ಪಿ. ರಂಗನಾಥ್, ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಶಿವಶಂಕರ್ ಕಲ್ಲೂರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ತಿಮ್ಮಯ್ಯ ಪುರ್ಲೆ ಟಿಕೆಟ್ ಪಡೆದಿದ್ದಾರೆ.