ಬೆಂಗಳೂರು ಗಲಭೆ: ಬಂಧಿತ ವಾಜೀದ್ ಪಾಷಾಗೂ ನಮಗೂ ಸಂಬಂಧವೇ ಇಲ್ಲ ಎಂದ ಜೆಡಿಎಸ್
ಬೆಂಗಳೂರು, ಆಗಸ್ಟ್ 20: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಗಳಲ್ಲಿ ನಡೆದ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ರಾಜಕೀಯ ಮುಖಂಡ ಕೆ.ಎಂ. ಅಬ್ದುಲ್ ವಾಜೀದ್ ಪಾಶಾಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಜೆಡಿಎಸ್ ಹೇಳಿದೆ.
Recommended Video
ಪುಲಕೇಶಿ ನಗರದ ಜೆಡಿಎಸ್ ಮುಖಂಡ ಮತ್ತು ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷರಾಗಿರುವ ಅಬ್ದುಲ್ ಪಾಶಾ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದರು. ವಾಜೀದ್ ಪಾಶಾರನ್ನು ವಿಚಾರಣೆಗೆ ಒಳಪಡಿಸಿರುವ ಸಿಸಿಬಿ ಪೊಲೀಸರು ಬುಧವಾರ ಅವರ ನಾಲ್ವರು ಸಹಚರರನ್ನು ಬಂಧಿಸಿದ್ದು, ಇನ್ನೂ ಆರೇಳು ಮಂದಿಯ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
ಬೆಂಗಳೂರು ಗಲಭೆ; ಜೆಡಿಎಸ್ ನಾಯಕನ ಬಂಧನ
ಆದರೆ ವಾಜೀದ್ ಪಾಶಾ ನಮ್ಮ ಪಕ್ಷಕ್ಕೆ ಸೇರಿದವರಲ್ಲ. ಅವರು ಕಾಂಗ್ರೆಸ್ ಪಕ್ಷದವರು. ಜೆಡಿಎಸ್ಗೆ ಬಂದು ಮತ್ತೆ ಅವರು ಕಾಂಗ್ರೆಸ್ಗೆ ಮರಳಿದ್ದರು. ಪುಲಿಕೇಶಿ ನಗರದ ಮಾಜಿ ಶಾಸಕ ಪ್ರಸನ್ನ ಕುಮಾರ್ ಕೂಡ ಕಾಂಗ್ರೆಸ್ನಿಂದ ಜೆಡಿಎಸ್ಗೆ ಬಂದು, ಕಾಂಗ್ರೆಸ್ಗೆ ವಾಪಸಾಗಿದ್ದರು ಎಂದು ಜೆಡಿಎಸ್ ತಿಳಿಸಿದೆ. ಮುಂದೆ ಓದಿ.
ಪಾಶಾಗೂ ಜೆಡಿಎಸ್ಗೂ ಸಂಬಂಧವಿಲ್ಲ
ಕೆ.ಎಂ. ವಾಜೀದ್ ಪಾಶಾ ಅವರು ಪುಲಿಕೇಶಿನಗರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಪ್ರಸನ್ನಕುಮಾರ್ ಅವರ ಬೆಂಬಲಿಗರಾಗಿದ್ದು, ಇವರಿಬ್ಬರೂ ಕಾಂಗ್ರೆಸ್ ನಿಂದ ಜೆಡಿಎಸ್ ಪಕ್ಷಕ್ಕೆ ಬಂದು, ಮತ್ತೆ ಕಾಂಗ್ರೆಸ್ ಪಕ್ಷದ ಕಡೆಗೆ ಮುಖ ಮಾಡಿದ್ದಾರೆ. ಇಂಥವರ ಕೃತ್ಯಗಳಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಹೇಳಿದ್ದಾರೆ.
ಪಾಶಾ ಸಹಚರರ ಬಂಧನ
ಈ ನಡುವೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ವಾಜೀದ್ ಪಾಶಾ ಅವರ ಸಹಚರರಾದ ಡಿಜೆ ಹಳ್ಳಿಯ ತೌಸಿಫ್, ಫಾಜಿಲ್, ಅಫ್ಜಲ್ ಪಾಶಾ ಮತ್ತು ಸಯ್ಯದ್ ಎಂಬುವವರನ್ನು ಬಂಧಿಸಿದ್ದಾರೆ. ಇನ್ನೂ ಆರೇಳು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಅಖಂಡ-ಪಾಶಾ ಜಗಳ
ಗಲಭೆಗೆ ಕೆಲವು ದಿನಗಳ ಹಿಂದಷ್ಟೇ ವಾಜೀದ್ ಪಾಶಾ, ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಅಖಂಡ ಶ್ರೀನಿವಾಸಮೂರ್ತಿ ಬೆಂಬಲಿಗರು, ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಯಿಸಿ ರಾಜಿಮಾಡಿ ಕಳುಹಿಸಿದ್ದರು.
ಸಂಪತ್ ರಾಜ್ ಸಂಬಂಧಿ ಅರುಣ್ ಬಂಧನ
ಗಲಭೆಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಅವರ ಆಪ್ತ ಸಹಾಯಕ ಮತ್ತು ದೂರದ ಸಂಬಂಧಿ ಅರುಣ್ ರಾಜ್ ಕೈವಾಡ ಇದೆ ಎನ್ನುವುದನ್ನು ಖಚಿತಪಡಿಸಿಕೊಂಡಿರುವ ಪೊಲೀಸರು, ಆತನನ್ನು ಬಂಧಿಸಿದ್ದಾರೆ. ಗಲಭೆಕೋರರ ಜತೆಗೆ ಅರುಣ್ ರಾಜ್ ಫೋನ್ ಮೂಲಕ ನಿರಂತರ ಸಂಪರ್ಕದಲ್ಲಿದ್ದ. ಹೀಗಾಗಿ ಆತನನ್ನು ಬಂಧಿಸಿ ಲ್ಯಾಪ್ಟಾಪ್, ಮೊಬೈಲ್ ಫೋನ್, ಟ್ಯಾಬ್ ಮುಂತಾದವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ರಾಜಕೀಯ ಉದ್ದೇಶದಿಂದ ದಾಳಿ
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಬುಧವಾರ ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಲಾಗಿದೆ. ನಗರ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ ಅಖಂಡ ಅವರನ್ನು ಅಪರಾಧ ವಿಭಾಗದ ಡಿಸಿಪಿ ರವಿಕುಮಾರ್ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅಖಂಡ ಶ್ರೀನಿವಾಸಮೂರ್ತಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ರಾಜಕೀಯ ಉದ್ದೇಶದಿಂದ ನನ್ನನ್ನು ಕ್ಷೇತ್ರದಿಂದ ಹೊರಹಾಕುವ ಸಲುವಾಗಿಯೇ ಈ ದಾಳಿ ನಡೆಸಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾಗಿ ಹೇಳಲಾಗಿದೆ.