ಜೆಡಿಎಸ್ ಅಧಿಕೃತ ಅಭ್ಯರ್ಥಿ ನಾಮಪತ್ರ ತಿರಸ್ಕೃತ, ಬಂಡಾಯಗಾರನಿಗೆ ಪಟ್ಟ
ಬೆಂಗಳೂರು, ಏಪ್ರಿಲ್ 25: ರಾಜಕೀಯ ಪಕ್ಷಗಳ ಟಿಕೆಟ್ ಗಾಗಿ ಹಲವರು ತರಹೇವಾರಿ ಬಡಿದಾಡಿದ್ದರು. ಆದರೆ ದೇವನಹಳ್ಳಿಯ ಜೆಡಿಎಸ್ ಬಂಡಾಯ ಅಭ್ಯರ್ಥಿಗೆ ತಮಗೆ ಟಿಕೆಟ್ ಹೀಗೂ ಸಿಗುತ್ತದೆ ಎಂದು ತಿಳಿದಿರಲಿಲ್ಲ. ಇಂಥಹದ್ದೊಂದು ವಿಚಿತ್ರ ಪ್ರಸಂಗ ಇಲ್ಲಿ ನಡೆದಿದೆ.
ದೇವನಹಳ್ಳಿ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವಾಗಿದ್ದು ಜೆಡಿಎಸ್ ನ ಪಿಳ್ಳಮುನಿಶಾಮಪ್ಪ ಹಾಲಿ ಶಾಸಕರಾಗಿದ್ದಾರೆ. 2013ರ ಚುನಾವಣೆಯಲ್ಲಿ 70,323 ಮತಗಳನ್ನು ಪಡೆದಿದ್ದ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು 2 ಸಾವಿರ ಮತಗಳಿಂದ ಸೋಲಿಸಿದ್ದರು.
ಈ ಬಾರಿಯೂ ಜೆಡಿಎಸ್ ಅವರಿಗೆ ಟಿಕೆಟ್ ನೀಡಿತ್ತು. ಹಾಗಾಗಿ ಅವರು ಬಿ-ಫಾರ್ಮ್ ನೊಂದಿಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ನಿಸರ್ಗ ನಾರಾಯಣಸ್ವಾಮಿ ಸಿ-ಫಾರ್ಮ್ ಜೊತೆಗೆ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಇಂದು ಪಿಳ್ಳಮುಶಾಮಪ್ಪ ನಾಮಪತ್ರ ತಿರಸ್ಕೃತವಾಗಿದೆ.
ಇದೇ ಕ್ಷೇತ್ರದಲ್ಲಿ ಆರಂಭದಲ್ಲೇ ನಿಸರ್ಗ ನಾರಾಯಣಸ್ವಾಮಿ (ನಾರಾಯಣಸ್ವಾಮಿ ಎಲ್. ಎನ್) ಜೆಡಿಎಸ್ ಟಿಕೆಟ್ ಬಯಸಿದ್ದರು. ಆದರೆ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಇದರಿಂದ ಬಂಡಾಯವೆದ್ದಿದ್ದ ಅವರು ಜೆಡಿಎಸ್ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಎರಡು ನಾಮಪತ್ರ ಸಲ್ಲಿಸಿದ್ದರು.
ಇದೀಗ ಅಧಿಕೃತ ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಗಿರುವುದರಿಂದ ಬಂಡಾಯ ಅಭ್ಯರ್ಥಿಗೆ ಅದೃಷ್ಟ ಒಲಿದು ಬಂದಿದೆ. ಇಲ್ಲಿ ಬಂಡಾಯ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿಯವರನ್ನೇ ಜೆಡಿಎಸ್ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದೆ.