ಅಪ್ಪಾಜಿ ಕ್ಯಾಂಟೀನಿನಲ್ಲಿ ಶರವಣಜಿ, ಮಾಂಡ್ರೆ ಮ್ಯಾಮ್
Recommended Video
ಬೆಂಗಳೂರು, ನವೆಂಬರ್ 9 : ಬೆಂಗಳೂರಿನ ಹನುಮಂತ ನಗರದಲ್ಲಿರುವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ಅವರ ಅಪ್ಪಾಜಿ ಕ್ಯಾಂಟಿನ್ ಗೆ ಇಂದಿಗೆ (ನವೆಂಬರ್ 9) ನೂರು ದಿನಗಳ ಸಂಭ್ರಮ.
ದೇವೇಗೌಡ ಅಪ್ಪಾಜಿ ಕ್ಯಾಂಟಿನ್ ಗೆ ನೂರು ದಿನಗಳ ಸಂಭ್ರಮದಲ್ಲಿ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಭಾಗವಹಿಸಿ ಮೆರಗು ನೀಡಿದರು. ಈ ಶತದಿನೋತ್ಸವದ ದಿನದಂದು ಶರ್ಮಿಳಾ ಮಾಂಡ್ರೆ ಸಾರ್ವಜನಿಕರಿಗೆ ಊಟ ಬಡಿಸಿ, ತಾವು ಸೇವಿಸಿದರು.
ಅಪ್ಪಾಜಿ ಕ್ಯಾಂಟೀನ್ ನಲ್ಲಿ 3 ರುಪಾಯಿಗೆ ಕಾಫಿ, 5ಕ್ಕೆ ತಿಂಡಿ, 10ಕ್ಕೆ ಊಟ...
ಇದೇ ವೇಳೆ ಮಾತನಾಡಿದ ಶರವಣ, ಬಡ ಜನರ ಹಸಿವು ನೀಗಿಸಲು ಏನಾದರೂ ಮಾಡಬೇಕು ಎನ್ನುವ ಮಾಜಿ ಪ್ರಧಾನಿ ದೇವೇಗೌಡರ ಆಸೆಯದಂತೆ ಅಗಸ್ಟ್ 2 ರಂದು ಪ್ರಾರಂಭಿಸಾಗಿದ್ದು, ಯಶಸ್ವಿಯಾಗಿ ನೂರು ದಿನಗಳನ್ನು ಪೂರೈಸಿದೆ. ಈ ನೂರು ದಿನಗಳಲ್ಲಿ ಪ್ರತಿನಿತ್ಯ ಆಟೋ ಡ್ರೈವರ್, ವಿದ್ಯಾರ್ಥಿಗಳು, ಬಡವರು ನಮ್ಮ ಕ್ಯಾಂಟಿನ್ ನಲ್ಲಿ ಊಟ ಮಾಡಿದ್ದಾರೆ. ನಮ್ಮ ಕ್ಯಾಂಟಿನ್ ನಲ್ಲಿ ಶುಚಿ ರುಚಿಯಾದ ಉಪಹಾರ ಹಾಗೂ ಊಟವನ್ನು ನೀಡಲಾಗುತ್ತಿದೆ.
ಕ್ಯಾಂಟಿನ್ ಊಟದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಇದು ವರೆಗೂ ರುಚಿಯ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಕ್ಯಾಂಟಿನ್ ನಡೆದು ಬಂದ ಅನುಭವವನ್ನು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹಂಚಿಕೊಂಡರು.
ಇಂದಿರಾ ಕ್ಯಾಟಿನ್ ಊಟ ರುಚಿ ಇಲ್ಲ
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ 198 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಿದೆ. ಆದರೆ ಕ್ಯಾಂಟಿನ್ ಅನ್ನು ಯಾವ ಉದ್ದೇಶಕ್ಕಾಗಿ ಪ್ರಾರಂಭಿಸಿದ್ದರೋ ಗೊತ್ತಿಲ್ಲ. ಅನ್ನ ನೀಡುವವರು ಸರಿಯಾಗಿ ರುಚಿಯಾಗಿರುವುದ್ನು ನೀಡಬೇಕು. ಆದರೆ, ಇಂದಿರಾ ಕ್ಯಾಟಿನ್ ನ ಊಟ ಸರಿ ಇಲ್ಲ ಎಂದು ಜನರು ಹೇಳುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ವಿರುದ್ಧ ಶರವಣ ಕಿಡಿಕಾರಿದರು.
ರಾಜ್ಯಾದ್ಯಂತ ಅಪ್ಪಾಜಿ ಕ್ಯಾಂಟಿನ್
ಸಧ್ಯಕ್ಕೆ ಮಂಡ್ಯದಲ್ಲಿ ಅಪ್ಪಾಜಿ ಕ್ಯಾಂಟಿನ್ ಪ್ರಾರಮಭವಾಗಿದೆ. ಇನ್ನು ರಾಯಚೂರಿನಲ್ಲೂ ಪ್ರಾರಂಭಿಸಬೇಕು ಎಂದು ಕಾರ್ಯಕರ್ತರು ಮನವಿ ಮಾಡಿದ್ದಾರೆ. ಈ ಬಗ್ಗೆ ದೇವೇಗೌಡ ಅವರ ಬಳಿ ಚರ್ಚಿಸಿ ತೀರ್ಮಾನಿಸಲಾಗುವುದು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಸಿಎಂ ಆದ್ರೆ ಈ ಅಪ್ಪಾಜಿ ಕ್ಯಾಂಟಿನ್ ಅನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಶರವಣ ಹೇಳಿದರು.
ಡಿಸೆಂಬರ್ 16ಕ್ಕೆ ಮತ್ತೊಂದು ಅಪ್ಪಾಜಿ ಕ್ಯಾಂಟಿನ್ ಓಪನ್
ಇದೇ ಡಿಸೆಂರ್ 16ರಂದು ಕುಮಾರಸ್ವಾಮಿ ಅವರ ಹುಟ್ಟುಹಬ್ಬ ದಿನದಂದು ಶೇಷಾದ್ರಿಪುರಂನಲ್ಲಿರವ ಜೆಡಿಎಸ್ ಕಚೇರಿ ಜೆಪಿ ಭವನ ಹತ್ತಿರ ಅಪ್ಪಾಜಿ ಕ್ಯಾಂಟಿನ್ ತೆರೆಯಲಾಗುವುದು ಎಂದು ಶರವಣ ಘೋಷಿಸಿದರು.
ಅಪ್ಪಾಜಿ ಕ್ಯಾಂಟಿನ್ ನಲ್ಲಿ ಊಟ ಸೇವಿಸಿದ ಶರ್ಮಿಳಾ ಏನಂದ್ರು?
ಅಪ್ಪಾಜಿ ಕ್ಯಾಂಟಿನ್ ನ ನೂರು ದಿನಗಳ ಸಂಭ್ರಮದಲ್ಲಿ ಪಾಲ್ಗೊಂಡು ಊಟ ಸೇವಿಸಿ ಪ್ರತಿಕ್ರಿಯಿಸಿದ ನಟಿ ಶರ್ಮಿಳಾ ಮಾಂಡ್ರೆ, ಇಂದಿನ ದುಬಾರಿ ದುನಿಯಾದಲ್ಲಿ ಇಷ್ಟು ಕಡಿಮೆ ಬೆಲೆಗೆ ಊಟ ನೀಡುತ್ತಿರುವ ಶರವಣ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಊಟ ಕೂಡ ತುಂಬ ರುಚಿಯಾಗಿದೆ. ಬಡವರಗಾಗಿ ಈ ಕ್ಯಾಂಟಿನ್ ತೆರೆದಿರುವ ಶರವಣ ಅವರು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಅಪ್ಪಾಜಿ ಕ್ಯಾಂಟಿನ್ ನಲ್ಲಿ ಏನೇನು ಸಿಗಲಿದೆ?
ಬೆಳಗಿನ ಉಪಹಾರ ತಟ್ಟೆ ಇಡ್ಲಿ, ವಡೆ, ಖಾರಾಬಾತ್, ಕೇಸರಿ ಬಾತ್ 5 ರು.ಗೆ, ಹಾಗೂ 3 ರೂಪಾಯಿಗೆ.ಕಾಫಿ ಅಥವಾ ಟೀ ನೀಡಲಾಗುತ್ತಿದೆ. ಇನ್ನು ಮದ್ಯಾಹ್ನದ ಊಟಕ್ಕೆ ಮುದ್ದೆ ಜತೆಗೆ ಬಸ್ಸಾರು, ಅನ್ನ ಸಾಂಬರ್, ರೈಸ್ ಬಾತ್ ಅದು ಕೇವಲ 10 ರು.ಗಳಲ್ಲಿ ಲಭ್ಯ.
ಈವರೆಗೆ ಅಪ್ಪಾಜಿ ಕ್ಯಾಂಟಿನ್ ನಲ್ಲಿ ಊಟ ಸೇವಿಸಿದವರೇಷ್ಟು?
ಅಗಸ್ಟ್ 2ರಂದು ಪ್ರಾರಂಭವಾಗಿರುವ ಅಪ್ಪಾಜಿ ಕ್ಯಾಂಟಿನ್ ನಲ್ಲಿ ಪ್ರತಿದಿನ 2 ರಿಂದ 3 ಸಾವಿರ ಜನರು ಊಟ ಸೇವಿಸುತ್ತಿದ್ದಾರೆ. ಇಲ್ಲಿಯ ತನಕ ಅಂದರೆ ನೂರು ದಿನದ ವರೆಗೆ ಸುಮಾರು ಎರಡುವರೆ ಲಕ್ಷ ಜನರು ಊಟ ಸೇವಿಸಿದ್ದಾರೆ ಎಂದು ಕ್ಯಾಂಟಿನ್ ಮಾಲೀಕ ಶರವಣ ತಿಳಿಸಿದರು.