ಮೋದಿಯವರಿಗೆ ಪ್ರಶ್ನೆ ಕೇಳುವ ಸರದಿ ಈಗ ಕುಮಾರಸ್ವಾಮಿ ಅವರದು
ಬೆಂಗಳೂರು, ಜನವರಿ 2: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹಾಗೂ ಶುಕ್ರವಾರ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಘಟಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮೋದಿ ಭೇಟಿಯನ್ನು ವಿರೋಧಿಸಿ ಸರಣಿ ಟ್ವೀಟ್ ಮಾಡಿ ರಾಜ್ಯ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೂಡ ಮೋದಿ ಅವರಿಗೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಕೊಡಿ ಎಂದು ಟ್ವೀಟ್ಟರ್ನಲ್ಲಿ ಮೋದಿ ಕಾಲೆಳದಿದ್ದಾರೆ.
ರಾಜ್ಯದಿಂದ 25 ಸಂಸದರನ್ನು ಪಡೆದಿರುವ ಮೋದಿಯವರು, ಕೇಂದ್ರದ ಚಂದಮಾಮನನ್ನು ತೋರಿಸಿ "ಅನರ್ಹ ಸರ್ಕಾರ' ರಚಿಸಿಕೊಂಡ ಬಿಎಸ್ವೈ ಅವರು ಶಿವಕುಮಾರ ಸ್ವಾಮೀಜಿಗಳು ಐಕ್ಯರಾಗಿರುವ ತುಮಕೂರಿನ ನೆಲದಲ್ಲಿ ನಿಂತು ಇವೆಲ್ಲಕ್ಕೂ ಉತ್ತರ ಕೊಡುವರೇ? ಎಂದು ಮೋದಿಯವರನ್ನು ಪಶ್ನಿಸಿದ್ದಾರೆ.
ನರೇಂದ್ರ ಮೋದಿ ತುಮಕೂರು ಭೇಟಿ ವಿರೋಧಿಸಿದ ರೈತರು
ಪ್ರಮಾಣವಚನ ಸ್ವೀಕರಿಸಿದ ಮರುದಿನ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದಿದ್ದರು ಬಿಎಸ್ವೈ. ಆದರೀಗ ಪರಿಸ್ಥಿತಿ ವಿಷಮವಾಗಿದೆ. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಬರ ಪರಿಹಾರ, ಅನುದಾನ, ತೆರಿಗೆ ಹಂಚಿಕೆಗಳನ್ನು ದಿಟ್ಟತನದಿಂದ ಕೇಳುವ ಶಕ್ತಿ ಬಿಎಸ್ವೈ ಅವರಿಗಿಲ್ಲ.ನ್ಯಾಯವಾಗಿ ಬರಬೇಕಾದ್ದನ್ನು ಪಡೆಯಲಾಗದ ಬಿಎಸ್ವೈ ಅವರು ದುರ್ಬಲ ಸಿಎಂ. ಮೋದಿಯವರ ಬಳಿ ಈ ಬಗ್ಗೆ ಮಾತನಾಡುತ್ತಾರೆಯೇ ಬಿಎಸ್ವೈ ಎಂದು ಯಡಿಯೂರಪ್ಪ ಅವರನ್ನು ಕೆಣಕಿದ್ದಾರೆ.
ತೆರಿಗೆಯಲ್ಲಿ ರಾಜ್ಯಕ್ಕೆ ನೀಡಬೇಕಾದ ಪಾಲನ್ನೂ ಕೇಂದ್ರ ವಂಚಿಸಿದೆ. ರಾಜ್ಯಕ್ಕೆ ಬರಬೇಕಿದ್ದ ಪಾಲಿನಲ್ಲಿ 5.44% ರಷ್ಟು ಇನ್ನೂ ಬಂದಿಲ್ಲ. ಇದು ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ಕೇಂದ್ರದ ಮಲತಾಯಿ ಧೋರಣೆ. ಲೋಕಸಭೆ ಸ್ಥಾನಗಳ ಮೇಲೆ ಮಾತ್ರ ಕಣ್ಣಿಡುವ ಕೇಂದ್ರ ಇಲ್ಲಿನ ಬೇಕು ಬೇಡಗಳನ್ನು ನಿರ್ಲಕ್ಷಿಸುತ್ತದೆ. ಮೋದಿ ಈ ಬಗ್ಗೆ ಇಂದು ಮಾತಾಡಲಿ ಎಂದು ಸವಾಲು ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿಗೆ ಭೇಟಿ ಭೇಟಿ ನೀಡಿದ್ದರು. ಅಲ್ಲಿ ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು, ತುಮಕೂರು ವಿವಿ ಆವರಣದಲ್ಲಿ ಆಯೋಜಿಸಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನಾದ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.. ಸಂಜೆ ಡಿಆರ್ಡಿಓ ಸಂಸ್ಥೆಗೆ ಭೇಟಿ ನೀಡಿ ರಾಜಭವನದಲ್ಲಿ ತಂಗಲಿದ್ದಾರೆ. ನಾಳೆ ಭಾರತೀಯ ವಿಜ್ಞಾನ ಕಾಂಗ್ರೆಸ್ ಜಿಕೆವಿಕೆ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.