ಯಡಿಯೂರಪ್ಪ ಜೊತೆ ಬಸವರಾಜ ಹೊರಟ್ಟಿ ಗುಸುಗುಸು!
ಬೆಂಗಳೂರು, ಡಿಸೆಂಬರ್ 12; ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಬುಧವಾರ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉನ್ನತ ಶಿಕ್ಷಣ ಇಲಾಖೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಉಪಸ್ಥಿತರಿದ್ದರು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಸವರಾಜ ಹೊರಟ್ಟಿ ಅವರು ಯಡಿಯೂರಪ್ಪ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದೊಂದು ಸಹಜ ಭೇಟಿಯಾಗಿತ್ತು ಎಂದು ಹೇಳಿದ್ದಾರೆ. ಬಿಜೆಪಿಯವರು ಸ್ಥಿರ ಸರ್ಕಾರ ಮಾಡಿಕೊಂಡಿದ್ದಾರೆ. ನಾನೊಬ್ಬ ಪರಿಷತ್ನ ಹಿರಿಯನಾಗಿ, ಮುಖ್ಯಮಂತ್ರಿಗಳಿಗೆ ಜನಪರ ಆಡಳಿತ ನಡೆಸಿಕೊಂಡು ಹೋಗಿ ಎಂದು ಸಲಹೆ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
"ಪಕ್ಷಾಂತರ ಕಾಯ್ದೆ ಇದ್ರೇನು, ಬಿಟ್ರೇನು": ಬಸವರಾಜ್ ಹೊರಟ್ಟಿ
ಬದಲಾಗಿರುವ ರಾಜಕೀಯ ಬೆಳವಣಿಗೆಯಲ್ಲಿ ಹೊರಟ್ಟಿ ಅವರ ಈ ಭೇಟಿ ಕುತೂಹಲ ಮೂಡಿಸಿದೆ. ಈ ಹಿಂದೆ ಅವರು ಸಭಾಪತಿ ನೇಮಕದ ವಿಚಾರದಲ್ಲಿ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರೊಂದಿಗೆ ಮನಸ್ತಾಪ ಹೊಂದಿದ್ದರು. ಜೆಡಿಎಸ್ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುವುದನ್ನು ಹೊರಟ್ಟಿ ಅವರು ಹೆಚ್ಚಿಗೆ ಮಾಡಿರುವುದು ಕುತೂಹಲ ಮೂಡಿಸಿದೆ.