ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಗ್ಗೆ ತೀರ್ಮಾನವಾಗಿಲ್ಲ: ದೇವೇಗೌಡ
ಬೆಂಗಳೂರು, ನವೆಂಬರ್ 08: ಮಾಜಿ ಪ್ರಧಾನಿ ಎಚ್. ಡಿ ದೇವೆಗೌಡರ ಮೊಮ್ಮಗ ಮತ್ತು ಎಚ್.ಡಿ ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಅವರು ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಕುತೂಹಲ ಮುಂದುವರೆದಿದೆ.
ಪ್ರಜ್ವಲ್ ಸ್ಪರ್ಧಿಸುವ ಬಗ್ಗೆ ಭವಾನಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡ ಅವರು, 'ಈ ಬಗ್ಗೆ ಪಕ್ಷ ಇನ್ನೂ ನಿರ್ಧಾರ ಕೈಗೊಂಡಿಲ್ಲ' ಎಂದಿದ್ದಾರೆ.
ಪ್ರಜ್ವಲ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಎಂಬ ಕುತೂಹಲದ ಪ್ರಶ್ನೆಗೆ ಪ್ರಜ್ವಲ್ ಅವರ ತಾಯಿ ಭವಾನಿ ಅವರು ಹರದನಹಳ್ಳಿಯಲ್ಲಿ ಸುಳಿವು ನೀಡಿದ್ದರು. ಆದರೆ, ಬೆಂಗಳೂರಿನಲ್ಲಿ ಭವಾನಿ ಹೇಳಿಕೆಗೆ ವ್ಯತಿರಿಕ್ತವಾಗಿ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.
ಪ್ರಜ್ವಲ್ ಹಾಗೂ ನಿಖಿಲ್ ಇಬ್ಬರೂ ರಾಜಕೀಯಕ್ಕೆ ಬರುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಇದು ಸಕಾಲವಲ್ಲ, ಪ್ರಜ್ವಲ್ ಅವರ ಸ್ಪರ್ಧೆ ಹಾಗೂ ಅಸೆಂಬ್ಲಿ ಚುನಾವಣೆಯಲ್ಲಿ ಅವರ ಪಾತ್ರದ ಬಗ್ಗೆ ಪಕ್ಷ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದರು.
ಪ್ರಜ್ವಲ್ ಅವರು ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಈ ಹಿಂದೆ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರಜ್ವಲ್ ಕೂಡಾ ಒಲವು ತೋರಿದ್ದರು. ಆದರೆ, ಹುಣಸೂರಿನಲ್ಲಿ ಸ್ಪರ್ಧೆ ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದಾರೆ ಎಂಬ ಮಾಹಿತಿ ಇದೆ. ಜತೆಗೆ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೂಡಾ ಕಾರ್ಯಕರ್ತರಿಂದ ಮನವಿ ಬಂದಿದೆ.