ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಜೆಡಿಎಸ್ ಬಲ ವೃದ್ಧಿ!
ಬೆಂಗಳೂರು, ಮೇ 16: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬೆಂಗಳೂರು ನಗರದ ಎರಡು ಹಾಗೂ ರಾಮನಗರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ರಂತಹ ಘಟಾನುಘಟಿ ರಾಜಕಾರಣಿಗಳಿಗೆ ಮತ್ತೊಮ್ಮೆ ಒಲಿದಿದೆ.
ಇದೇ ಮೊದಲ ಬಾರಿಗೆ ಮಾಜಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ರಾಮನಗರ ಜಿಲ್ಲೆಯ ಮೇಲೆ ಹಿಡಿತ ಮತ್ತೊಮ್ಮೆ ಸಾಧಿಸಿದ್ದಾರೆ. ಒಕ್ಕಲಿಗ ಮತಗಳೇ ಪ್ರಮುಖವಾಗಿರುವ ಇಡೀ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಬಂಡಾಯದ ಏಳು ಮಂದಿ ಶಾಸಕರ ಪೈಕಿ ಎಚ್.ಸಿ.ಬಾಲಕೃಷ್ಣ ಮಾಗಡಿಯಲ್ಲಿ ಪರಾಭವಗೊಂಡಿದ್ದಾರೆ. ಸಿನಿಮಾ ನಿರ್ಮಾಪಕ ಕಂ ಶಾಸಕ ಮುನಿರತ್ನ ಪ್ರತಿನಿಧಿಸುವ ರಾಜರಾಜೇಶ್ವರಿನಗರ ಚುನಾವಣೆ ಮುಂದಕ್ಕೆ ಹೋಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ-ಸಮ
ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಸಿನಿಮಾ ನಿರ್ಮಾಪಕ ಕಮ್ ಶಾಸಕ ಮುನಿರತ್ನ ನಾಯ್ಡು ಪ್ರತಿನಿಧಿಸುವ ಕ್ಷೇತ್ರ ರಾಜರಾಜೇಶ್ವರಿ ನಗರದ ಚುನಾವಣೆ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ.
ಎಚ್ಡಿಕ ಕುಮಾರಸ್ವಾಮಿ ವಿರುದ್ಧ ಯೋಗೀಶ್ವರ್ ಸೋಲು
ಒಮ್ಮೆ ಬಿಜೆಪಿ, ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿ ಇದೀಗ ಮತ್ತೊಮ್ಮೆ ಬಿಜೆಪಿಯಿಂದಲೇ ಚನ್ನಪಟ್ಟಣದಲ್ಲಿ ಸ್ಪರ್ಧಿಸಿದ್ದ ಸಿ.ಪಿ.ಯೋಗೀಶ್ವರ್ ಸೋಲಿನ ರುಚಿ ಕಂಡಿದ್ದಾರೆ. ರಾಮನಗರ ಜಿಲ್ಲೆಯ ರಾಜಕಾರಣದ ಮೇಲಿನ ಯೋಗೀಶ್ವರ್ ಹಿಡಿತ ತಪ್ಪಿಸಲೆಂದೇ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಯೋಗೀಶ್ವರ್ ವಿರುದ್ಧ ಸ್ಪರ್ಧಿಸಿದ್ದರು. ಸಚಿವ ಎಚ್.ಎಂ.ರೇವಣ್ಣ ಕೂಡ ಕಣದಲ್ಲಿದ್ದರೂ ಹೆಚ್ಚು ಸದ್ದು ಮಾಡಲಿಲ್ಲ.
ಬಿಜೆಪಿ ಕಾಂಗ್ರೆಸ್ ಸೋಲಿಸಿದ ಕುಮಾರಸ್ವಾಮಿ
ರಾಜ್ಯದಲ್ಲಿ ಶತಾಯಗತಾಯ ಸಾಮರ್ಥ್ಯ ಸಾಬೀತು ಮಾಡಲೆಂದೇ ಪಣ ತೊಟ್ಟಿದ್ದ ಜೆಡಿಎಸ್ನ ಸಿಎಂ ಅಭ್ಯರ್ಥಿ ಹಾಗೂ ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ರಾಮನಗರದಿಂದ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಎಚ್.ಲೀಲಾವತಿ ಹಾಗೂ ಕಾಂಗ್ರೆಸ್ನಿಂದ ಎಚ್.ಎ.ಇಕ್ಬಾಲ್ ಹುಸೇನ್ ಕಣದಲ್ಲಿದ್ದರು.
ನಂದಿನಿಗೌಡ ವಿರುದ್ಧ ಡಿಕೆಶಿ ಗೆಲುವು
ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರೂ ಆದ ಸಚಿವ ಡಿ.ಕೆ.ಶಿವಕುಮಾರ್ ಕನಕಪುರ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ವೋಟ್ ಬ್ಯಾಂಕ್ ಇಲ್ಲದ ಬಿಜೆಪಿಯಿಂದ ಒಕ್ಕಲಿಗ ಸಮುದಾಯದವರೇ ಆದ ನಂದಿನಿ ಗೌಡ ಕಣದಲ್ಲಿದ್ದರು.
ಮಾಗಡಿಯಲ್ಲಿ ಎಚ್ಸಿ ಬಾಲಕೃಷ್ಣ ಸೋಲು
ಈಚೆಗಷ್ಟೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದು, ಕಾಂಗ್ರೆಸ್ ಸೇರ್ಪಡೆಗೊಂಡ ಎಚ್.ಸಿ.ಬಾಲಕೃಷ್ಣ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಜೆಡಿಎಸ್ನ ಎ.ಮಂಜುನಾಥ್ ಗೆಲುವಿನ ನಗೆ ಬೀರಿದ್ದಾರೆ.
ಕಾಂಗ್ರೆಸ್ನ ಆರ್ಕೆ ರಮೇಶ್ ಸೋಲು
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಎಂ.ಕೃಷ್ಣಪ್ಪ ಮತ್ತೊಮ್ಮೆ ಗೆದ್ದಿದ್ದಾರೆ. 2008ರಲ್ಲಿ ಕಾಂಗ್ರೆಸ್ ವಿರುದ್ಧ, 2013ರಲ್ಲಿ ಜೆಡಿಎಸ್ ಕೃಷ್ಣಪ್ಪ ಗೆಲುವು ಸಾಧಿಸಿದ್ದರು. ಒಕ್ಕಲಿಗ ಮತಗಳೇ ಈ ಕ್ಷೇತ್ರದಲ್ಲಿ ನಿರ್ಣಾಯಕವಾಗಿದ್ದವು. ಕಾಂಗ್ರೆಸ್ನಿಂದ ಆರ್.ಕೆ.ರಮೇಶ್, ಜೆಡಿಎಸ್ನಿಂದ ಡಾ.ಆರ್.ಪ್ರಭಾಕರ್ ರೆಡ್ಡಿ ಕಣದಲ್ಲಿದ್ದರು.