ಚುನಾವಣೆ 2018: 'ಅನುಕಂಪದ ಅಲೆ' ಎಂಬ ಥಿಯರಿ ಒಡೆದ ಮತದಾರ
ಬೆಂಗಳೂರು, ಜೂನ್ 13: ಈ ಬಾರಿಯ ಚುನಾವಣೆ ಯಾವುದೇ ಅಲೆ ಇಲ್ಲದ ಚುನಾವಣೆ ಎಂಬುದು ನಿರ್ವಿವಾದ. ಮೋದಿ ಅಲೆಗೆ ಮಲೆನಾಡು ಕರಾವಳಿಯಲ್ಲಿ ಹೆಚ್ಚಿನ ಸ್ಥಾನ ಸಿಕ್ಕರೆ, ಮಿಕ್ಕಂತೆ ಯಾವ ಅಲೆಯೂ ಕಂಡು ಬರಲಿಲ್ಲ. ಜೊತೆಗೆ ಅನುಕಂಪದ ಅಲೆಗೆ ಬೆಲೆ ಸಿಕ್ಕಿಲ್ಲ.
ಆದರೆ, ಸಚಿವ ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಮಹದೇವ ಪ್ರಸಾ ಅವರ ಪತ್ನಿ ಗೀತಾ ಮಹದೇವ ಪ್ರಸಾದ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ವಿರುದ್ಧ 10887 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಜಯನಗರದಲ್ಲಿ 'ಕಮಲ' ಮುದುಡಲು ಕಾರಣಗಳೇನು?
ಈಗ ಜಯನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಅಂತರ ದೊಡ್ಡ ಪ್ರಮಾಣದ್ದಾಗಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನಿಕಟ ಪೈಪೋಟಿ ನಡೆದಿತ್ತು. ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದು ಕಾಂಗ್ರೆಸ್ಸಿಗೆ ಲಾಭವಾಯಿತು.
ಅನುಕಂಪದ ಅಲೆ ನಡೆಯಲಿಲ್ಲ
ಜಯನಗರದ ಶಾಸಕರಾಗಿದ್ದ ಬಿಎನ್ ವಿಜಯ್ ಕುಮಾರ್ ಅವರ ಅಕಾಲಿಕ ನಿಧನದಿಂದ ಜಯನಗರ ವಿಧಾನಸಭಾ ಚುನಾವಣೆಯನ್ನು ಜೂನ್ 11ಕ್ಕೆ ಮುಂದೂಡಲಾಗಿತ್ತು. ಜೂನ್ 13ರಂದು ಮತ ಎಣಿಕೆ ನಡೆದು, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಅವರು 54,457 ಮತಗಳಿಸಿ ಜಯ ದಾಖಲಿಸಿದ್ದಾರೆ.
ದಿವಂಗತ ವಿಜಯ್ ಕುಮಾರ್ ಅವರ ಸೋದರ ಬಿಎನ್ ಪ್ರಹ್ಲಾದ್ ಅವರು ಬಿಜೆಪಿಯ ಹಿರಿಯ ನಾಯಕರು, ಆರೆಸ್ಸೆಸ್ ಮುಖಂಡರು, ಆಪ್ತರಾದ ಸಂಸದ ಅನಂತ್ ಕುಮಾರ್ ಒತ್ತಾಯಕ್ಕೆ ಮಣಿದು ಕಣಕ್ಕಿಳಿದು ಸ್ಪರ್ಧಿಸಿದ್ದ ಬಿಎನ್ ಪ್ರಹ್ಲಾದ್ ಅವರಿಗೆ ಅನುಕಂಪದ ಅಲೆಯ ಲಾಭ ಸಿಗಲಿಲ್ಲ. ಇದಕ್ಕೆ ಮುಖ್ಯಕಾರಣ, ವಿಜಯಕುಮಾರ್ ಗೆ ಹೋಲಿಸಿದರೆ ಪ್ರಹ್ಲಾದ್ ಅವರು ಜನಾನುರಾಗಿಯಾಗಿರಲಿಲ್ಲ.
ಬಿಜೆಪಿ ಪ್ರಭುತ್ವವಿದ್ದ ಕ್ಷೇತ್ರ
ಬಿಎನ್ ಪ್ರಹ್ಲಾದ್ ಅವರು ಸೋಲು ಕಂಡರೂ 51,568 ಮತಗಳನ್ನು ಗಳಿಸಿದ್ದು ದೊಡ್ಡ ಸಾಧನೆ. ಸೋತರು ಇದು ಪಕ್ಷದ ಹಿರಿಯ ಮುಖಂಡರ ತಂತ್ರಗಾರಿಕೆಯ ಸೋಲು. ಆದರೆ, ಅನುಕುಂಪದ ಅಲೆ ಎಂಬುದಿದ್ದರೆ, ಪ್ರಹ್ಲಾದ್ ಅವರು ಸುಲಭವಾಗಿ ಗೆಲುವು ಸಾಧಿಸಿ ಬಿಡಬೇಕಾಗಿತ್ತು.
2008ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಸುರೇಶ್ ಎದುರು ವಿಜಯಕುಮಾರ್ ಅವರು 20,570 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, 2013ರಲ್ಲಿ 12,312 ಮತಗಳಿಂದ ಗೆಲುವಿನ ನಗೆ ಬೀರಿದ್ದರು.
ನಾಲ್ಕು ಬಾರಿ ಇಲ್ಲಿ ಶಾಸಕರಾಗಿದ್ದ ರಾಮಲಿಂಗಾರೆಡ್ಡಿ ಅವರು ಕ್ಷೇತ್ರ ಬದಲಾಯಿಸಿದ ನಂತರ ಸತತವಾಗಿ ಅಸೆಂಬ್ಲಿ, ಸಂಸತ್ತು ಎರಡೂ ಬಿಜೆಪಿ ಪಾಲಾಗುತ್ತಾ ಬಂದಿತ್ತು.
ಅನುಕಂಪ, ನಿಷ್ಠೆ, ಪ್ರತಿಷ್ಠೆ ಕಣವಾಗಿತ್ತು
ಪ್ರಹ್ಲಾದ್ ಬಾಬು ಅವರ ಆಯ್ಕೆ ಸ್ಥಳೀಯ ರಾಜಕೀಯ ನಾಯಕರಲ್ಲಿ ಅಸಮಾಧಾನ ಮೂಡಿಸಿತ್ತು. ಪಕ್ಷದ ವಿರುದ್ಧ ಮುನಿಸಿಕೊಂಡ ಕಾರ್ಪೊರೇಟರ್ ನಾಗರಾಜ್ ಕಾಂಗ್ರೆಸ್ ಪಾಳೆಯಕ್ಕೆ ಜಿಗಿದಿದ್ದಾರೆ ಎಂಬ ಸುದ್ದಿ ಹರಡಿತ್ತು. ಪ್ರಭಾವಿ ಹಾಗೂ ಜನಪ್ರಿಯ ನಾಯಕರನ್ನು ಕಣಕ್ಕಿಳಿಸುವ ನಿರೀಕ್ಷೆ ಹುಸಿಯಾಯಿತು. ಅನುಕಂಪದ ಅಲೆ ಎಂಬ ಅಸ್ತ್ರ ಪ್ರಯೋಗಿಸಲು ಹೋಗಿ ಬಿಜೆಪಿ ಹೈಕಮಾಂಡ್ ಸೋಲು ಕಂಡಿತು. ಬಿಜೆಪಿ ನಾಯಕರ ಒಳ ಜಗಳ, ಪ್ರಚಾರದ ವೇಳೆ ಅನುಕಂಪದ ಮಾತುಗಳು, ಜನರ ಬೆಂಬಲ ಸಿಕ್ಕರೂ, ಮತಗಳಾಗಿ ಪರಿವರ್ತನೆ ಮಾಡಿಸಿಕೊಳ್ಳುವಲ್ಲಿ ಬಿಜೆಪಿ ಸೋಲು ಕಂಡಿತು.
ಬೇಲೂರಿನಲ್ಲಿ ನಡೆದಿರಲಿಲ್ಲ ಅನುಕಂಪದ ಅಲೆ
ಬೇಲೂರಿನಲ್ಲಿ ಹಾಲಿ ಶಾಸಕರಾಗಿದ್ದ ಕಾಂಗ್ರೆಸ್ಸಿನ ವೈ.ಎನ್ ರುದ್ರೇಶ್ ಗೌಡ ಅವರ ಅಕಾಲಿಕ ನಿಧನದಿಂದ ತೆರವಾದ ಅಭ್ಯರ್ಥಿ ಸ್ಥಾನಕ್ಕೆ ಅವರ ಪತ್ನಿ ಕೀರ್ತನಾ ಅವರನ್ನು ಕರೆ ತರಲಾಯಿತು. ಆದರೆ, ಅನುಕಂಪದ ಅಲೆ ವರ್ಕ್ ಔಟ್ ಆಗಲಿಲ್ಲ. ಕಳೆದ ಬಾರಿ 6 ಸಾವಿರ ಅಂತರದ ಮತಗಳಿಂದ ಸೋಲು ಕಂಡಿದ್ದ ಜೆಡಿಎಸ್ ನ ಕೆ.ಎಸ್ ಲಿಂಗೇಶ್ ಈ ಬಾರಿ ಭರ್ಜರಿ ಗೆಲುವು ದಾಖಲಿಸಿದರು.
64,268 ಮತಗಳನ್ನು ಪಡೆದು ಲಿಂಗೇಶ್ ಜಯ ದಾಖಲಿಸಿದರೆ, 44,578 ಮತಗಳನ್ನು ಪಡೆದು ಬಿಜೆಪಿಯ ಎಚ್ ಕೆ ಸುರೇಶ್ ಎರಡನೇ ಸ್ಥಾನ ಗಳಿಸಿದರು. ಕೀರ್ತನಾ ಅವರು 39,519 ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.