ಜಯನಗರದಲ್ಲಿ 'ಕಮಲ' ಮುದುಡಲು ಕಾರಣಗಳೇನು?
ಬೆಂಗಳೂರು, ಜೂನ್ 13: ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಬಿಜೆಪಿಯ ಪ್ರಹ್ಲಾದ್ ಬಾಬು ಅವರ ವಿರುದ್ಧ ಸಮೀಪದ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ತನ್ನ ಭದ್ರಕೋಟೆಯಾಗಿದ್ದ ಜಯನಗರ ಕ್ಷೇತ್ರವನ್ನು ಬಿಜೆಪಿ, ಕಾಂಗ್ರೆಸ್ಗೆ 'ಹಸ್ತಾಂ'ತರಿಸಿದೆ. ಬಿಜೆಪಿ ಮತಗಳು ಇಲ್ಲಿ ಹೆಚ್ಚಿದ್ದರೂ, ಮತದಾರ ಕಾಂಗ್ರೆಸ್ ಕಡೆಗೆ ವಾಲಿರುವುದು ಸ್ಪಷ್ಟವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ತನ್ನ ಪ್ರಾಬಲ್ಯ ಕಳೆದುಕೊಂಡಿರುವ ಬಿಜೆಪಿಗೆ ಮತ್ತಷ್ಟು ಹಿನ್ನಡೆಯಾಗಿದೆ.
ಜಯನಗರದಲ್ಲಿ ಸೌಮ್ಯಾ ರೆಡ್ಡಿ ಗೆಲುವಿಗೆ 4 ಕಾರಣಗಳು
ಕಾಂಗ್ರೆಸ್ನ ಹಿಡಿತದಲ್ಲಿದ್ದ ಜಯನಗರ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿಯ ಬಿ.ಎನ್. ವಿಜಯಕುಮಾರ್ ಗೆಲುವು ಸಾಧಿಸುವ ಮೂಲಕ ಬಿಜೆಪಿಯ ಬಾವುಟ ಹಾರಿಸಿದ್ದರು.
ಈ ಬಾರಿಯ ಚುನಾವಣೆಯಲ್ಲಿಯೂ ವಿಜಯಕುಮಾರ್ ಅವರ ಗೆಲುವನ್ನು ನಿರೀಕ್ಷಿಸಲಾಗಿತ್ತು. ಆದರೆ, ವಿಜಯಕುಮಾರ್ ಅವರ ಹಠಾತ್ ನಿಧನದಿಂದ ಜಯನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು.
ಜಾಣ ಹುಡುಗಿ ಕಾಂಗ್ರೆಸ್ ಪಾಸು ಮಾಡಿಸಿದ ಲೆಕ್ಕದ ಮೇಷ್ಟ್ರು ದೇವೇಗೌಡರು
ಮೈತ್ರಿ ಸರ್ಕಾರ ರಚಿಸಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಎದುರು ನೇರ ಸ್ಪರ್ಧೆಗೆ ಇಳಿದಿದ್ದ ಬಿಜೆಪಿಗೆ ಹೋರಾಟ ನೀಡಿದರೂ ಸೋಲು ಅನುಭವಿಸಬೇಕಾಯಿತು. ಕಾಂಗ್ರೆಸ್ನ ಯುವ ಮುಖ ಸೌಮ್ಯಾ ರೆಡ್ಡಿ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ಗೆ ತಂದುಕೊಟ್ಟಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿಗೆ ಅನೇಕ ಅಂಶಗಳು ಮುಳುವಾದವು. ಅವುಗಳಲ್ಲಿ ಕೆಲವು ಇಲ್ಲಿವೆ.
ಬಿ.ಎನ್. ವಿಜಯಕುಮಾರ್ ನಿಧನ
ಸರಳತೆ ಮತ್ತು ಸಜ್ಜನಿಕೆಗೆ ಹೆಸರಾಗಿದ್ದ ಬಿಜೆಪಿಯ ಬಿ.ಎನ್. ವಿಜಯಕುಮಾರ್ ಅವರು, ಸತತವಾಗಿ ಕ್ಷೇತ್ರದಲ್ಲಿ ಗೆಲ್ಲುತ್ತಿದ್ದ ಕಾಂಗ್ರೆಸ್ನ ಗೆಲುವಿನ ಓಟಕ್ಕೆ ಲಗಾಮು ಹಾಕಿದವರು.
2008ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಸುರೇಶ್ ಎದುರು ವಿಜಯಕುಮಾರ್ ಅವರು 20,570 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, 2013ರಲ್ಲಿ 12,312 ಮತಗಳಿಂದ ಗೆಲುವಿನ ನಗೆ ಬೀರಿದ್ದರು.
ಜನರೊಂದಿಗೆ ಬೆರೆಯವ ಗುಣ ಹೊಂದಿದ್ದ ವಿಜಯಕುಮಾರ್, ವೈಯಕ್ತಿಕವಾಗಿಯೂ ಕ್ಷೇತ್ರದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಈ ಬಾರಿ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾಗ ಹೃದಾಯಘಾತಕ್ಕೆ ಒಳಗಾದ ವಿಜಯ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದರು. ವಿಜಯಕುಮಾರ್ ಅವರ ಸಾವು ಬಿಜೆಪಿಗೆ ತೀವ್ರ ಹಿನ್ನಡೆಯುಂಟುಮಾಡಿತ್ತು.
ಅಭ್ಯರ್ಥಿ ಆಯ್ಕೆಗೆ ಅಸಮಾಧಾನ
ವಿಜಯಕುಮಾರ್ ಅವರ ಸಾವಿನಿಂದ ತೆರವಾದ ಅಭ್ಯರ್ಥಿ ಸ್ಥಾನಕ್ಕೆ ನಟಿ ತಾರಾ, ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಪ್ರಮುಖರ ಹೆಸರುಗಳು ಕೇಳಿಬಂದಿದ್ದವು. ಅಲ್ಲದೆ ಸ್ಥಳೀಯ ಕಾರ್ಪೊರೇಟರ್ಗಳು ಸಹ ಟಿಕೆಟ್ ಆಕಾಂಕ್ಷಿಗಳಾಗಿದ್ದರು.
ಆದರೆ, ಪಕ್ಷದ ವರಿಷ್ಠರು ಆಕಾಂಕ್ಷಿಗಳ ಹೆಸರನ್ನು ತಿರಸ್ಕರಿಸಿ ವಿಜಯಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರಿಗೆ ಟಿಕೆಟ್ ನೀಡಿತ್ತು. ಪ್ರಹ್ಲಾದ್ ಬಾಬು ಅವರ ಆಯ್ಕೆ ಸ್ಥಳೀಯ ರಾಜಕೀಯ ನಾಯಕರಲ್ಲಿ ಅಸಮಾಧಾನ ಮೂಡಿಸಿತ್ತು.
ಪಕ್ಷದ ವಿರುದ್ಧ ಮುನಿಸಿಕೊಂಡ ಕಾರ್ಪೊರೇಟರ್ ನಾಗರಾಜ್ ಕಾಂಗ್ರೆಸ್ ಪಾಳೆಯಕ್ಕೆ ಜಿಗಿದಿದ್ದಾರೆ ಎಂಬ ಸುದ್ದಿ ಹರಡಿತ್ತು.
ಜನರಿಗೆ ಪರಿಚಿತರಲ್ಲದ ಅಭ್ಯರ್ಥಿ
ಬಿಜೆಪಿ ಟಿಕೆಟ್ ಘೋಷಣೆ ಮಾಡುವವರೆಗೂ ಪಕ್ಷದ ಕಾರ್ಯಕರ್ತರಿಗೂ ಪ್ರಹ್ಲಾದ್ ಬಾಬು ಅವರ ಪರಿಚಯ ಹೆಚ್ಚಾಗಿ ಇರಲಿಲ್ಲ.
ಈ ಹಿಂದೆ ವಿಜಯಕುಮಾರ್ ಅವರ ಚುನಾವಣಾ ಪ್ರಚಾರಗಳ ಸಂದರ್ಭದಲ್ಲಿಯೂ ಪ್ರಹ್ಲಾದ್ ಜತೆಯಲ್ಲಿ ಕಾಣಿಸಿಕೊಂಡವರಲ್ಲ. ರಾಜಕೀಯ ಚಟುವಟಿಕೆಗಳಲ್ಲಿ ಅನುಭವ ಇಲ್ಲದ, ಜನರಿಗೆ ಅಷ್ಟೇನೂ ಪರಿಚಿತರಲ್ಲದ ಪ್ರಹ್ಲಾದ್ ಬಾಬು ಅವರಿಗೆ ಟಿಕೆಟ್ ನೀಡಿದ್ದು ಪಕ್ಷಕ್ಕೆ ನಕಾರಾತ್ಮಕವಾಗಿ ಪರಿಣಮಿಸಿತು.
ಕಾಂಗ್ರೆಸ್ ಬಿರುಸಿನ ಪ್ರಚಾರ
ಚುನಾವನೆ ಘೋಷಣೆಯಾಗುವ ಸಂದರ್ಭದಲ್ಲಿಯೇ ಕಾಂಗ್ರೆಸ್ನಿಂದ ಸೌಮ್ಯಾ ರೆಡ್ಡಿ ಕಣಕ್ಕಿಳಿಯುವುದು ಬಹುತೇ ಖಚಿತವಾಗಿತ್ತು. ಆಗಲೇ ಅವರು ಜನರನ್ನು ತಲುಪಿ ಪ್ರಚಾರ ಆರಂಭಿಸಿದ್ದರು.
ವಿಜಯಕುಮಾರ್ ಅವರ ನಿಧನದ ಬಳಿಕ ಬೇರೆ ಅಭ್ಯರ್ಥಿಯ ಹೆಸರು ಘೋಷಣೆಗೆ ಬಿಜೆಪಿ ವಿಳಂಬ ಮಾಡಿತು. ಆದರೆ, ಈ ಅವಧಿಯಲ್ಲಿ ಸೌಮ್ಯಾ ರೆಡ್ಡಿ ಪರ ಕಾಂಗ್ರೆಸ್ಸಿಗರು ವ್ಯಾಪಕ ಪ್ರಚಾರ ನಡೆಸಿದ್ದರು. ಇದರಿಂದ ಹೆಚ್ಚಿನ ಮತದಾರರನ್ನು ತಲುಪಲು ಅವರಿಗೆ ಸಾಧ್ಯವಾಯಿತು. ಅಲ್ಲದೆ ಹೆಚ್ಚು ಚುರುಕಾಗಿದ್ದ, ಯುವ ಮುಖಕ್ಕೆ ಜನರು ಮನ್ನಣೆ ನೀಡಿದರು.
ಪ್ರಚಾರದಲ್ಲಿ ಕಾಣದ ಚುರುಕುತನ
ರಾಜ್ಯದಲ್ಲಿ ಸರ್ಕಾರ ರಚಿಸುವ ತಿಕ್ಕಾಟದಲ್ಲಿ ಮುಳುಗಿದ್ದ ಬಿಜೆಪಿ, ಜಯನಗರ ಕ್ಷೇತ್ರವನ್ನು ಬಹುತೇಕ ಮರೆತೇಬಿಟ್ಟಿತ್ತು.
ಅದರಲ್ಲಿಯೂ ಸರ್ಕಾರ ರಚನೆ ಸಾಧ್ಯವಾಗದೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾದ ಅನಿವಾರ್ಯತೆ ಎದುರಾದಾಗ ನಿರಾಸೆ ಅನುಭವಿಸುವಂತಾಯಿತು. ಬಳಿಕ ನಡೆದ ರಾಜರಾಜೇಶ್ವರಿ ನಗರ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿಗೆ ಸೋಲು ಎದುರಾಯಿತು.
ಹೀಗಾಗಿ ಬಿಜೆಪಿ ಜಯನಗರ ಕ್ಷೇತ್ರದತ್ತ ಆಸಕ್ತಿ ಕಳೆದುಕೊಂಡಿತ್ತು. ಕಾಂಗ್ರೆಸ್ ಅಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರೆ, ಬಿಜೆಪಿ ನಾಯಕರು ಹೆಚ್ಚಾಗಿ ಅಲ್ಲಿ ಕಾಣಿಸಿಕೊಳ್ಳಲಿಲ್ಲ. ಮತದಾರರನ್ನು ಸೆಳೆಯಬಲ್ಲ ನಾಯಕತ್ವದ ಕೊರತೆಯನ್ನು ಬಿಜೆಪಿ ಅನುಭವಿಸಿತು.
ಕೈ ಜೋಡಿಸಿದ ಕಾಂಗ್ರೆಸ್-ಜೆಡಿಎಸ್
ಕಾಂಗ್ರೆಸ್ನ ಗೆಲುವಿನ ಅಂತರ ದೊಡ್ಡ ಪ್ರಮಾಣದ್ದಾಗಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನಿಕಟ ಪೈಪೋಟಿ ನಡೆದಿದೆ.
ಬಿಜೆಪಿಯ ಸೋಲಿಗೆ ಸಮ್ಮಿಶ್ರ ಸರ್ಕಾರದ ಪಾಲುದಾರನಾದ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆದುಕೊಂಡಿದ್ದೂ ಒಂದು ಕಾರಣ. ಅಲ್ಲದೆ, ಈಗಾಗಲೇ ಎರಡೂ ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಿದ್ದು, ಜನರ ಮನಸಿನ ಮೇಲೆ ಪರಿಣಾಮ ಬೀರಿತ್ತು. ಇದರಿಂದ ಸಹಜವಾಗಿಯೇ ಆಳುವ ಸರ್ಕಾರದ ಅಭ್ಯರ್ಥಿ ಕಡೆಗೆ ಮತದಾರರು ಒಲವು ತೋರಿಸಿದ್ದರು.
ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಅವರು ಕೊನೆಯ ಕ್ಷಣದಲ್ಲಿ ಚುನಾವಣೆಗೆ ಸ್ಪರ್ಧಿಸುವುದರಿಂದ ಹಿಂದಕ್ಕೆ ಸರಿದು ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದರು. ಜೆಡಿಎಸ್ ಬೆಂಬಲ ದೊರೆತಿದ್ದರಿಂದ ಆ ಪಕ್ಷದ ಕೆಲವು ಮತಗಳು ಕಾಂಗ್ರೆಸ್ಗೆ ದೊರೆತಿವೆ. ಇದು ಬಿಜೆಪಿಗೆ ಎರವಾಗಿದೆ.
ಒಂದು ವೇಳೆ ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಇದ್ದಿದ್ದರೆ ಕಾಂಗ್ರೆಸ್ ಮತಗಳು ವಿಭಜನೆಯಾಗುತ್ತಿದ್ದರಿಂದ ಬಿಜೆಪಿಗೆ ನೆರವಾಗುವ ಸಾಧ್ಯತೆ ಇತ್ತು.
ಅನಂತಕುಮಾರ್ ವೈಫಲ್ಯ?
ಕೇಂದ್ರ ಸಚಿವ ಅನಂತಕುಮಾರ್ ಅವರ ನೇತೃತ್ವದಲ್ಲಿ ಜಯನಗರ ಚುನಾವಣೆಯನ್ನು ಬಿಜೆಪಿ ಎದುರಿಸಿತ್ತು. ಇಲ್ಲಿ ಪಕ್ಷದ ಕಾರ್ಯಕರ್ತರನ್ನು ಸಮಪರ್ಕಪವಾಗಿ ಸಂಘಟಿಸುವ ಕಾರ್ಯ ನಡೆದಿಲ್ಲ ಎನ್ನಲಾಗಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರ ನಡುವೆ ಉತ್ತಮ ಬಾಂಧವ್ಯವಿಲ್ಲ. ಈ ಕಾರಣದಿಂದ ಯಡಿಯೂರಪ್ಪ ಅವರು ಜಯನಗರ ಚುನಾವಣಾ ಪ್ರಚಾರದಲ್ಲಿ ಅಷ್ಟಾಗಿ ತೊಡಗಿಸಿಕೊಂಡಿರಲಿಲ್ಲ ಎನ್ನಲಾಗಿದೆ. ಪಕ್ಷದ ಪ್ರಮುಖ ನಾಯಕರು ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿರಲಿಲ್ಲ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಜಯನಗರ ಕ್ಷೇತ್ರದ ಉಸ್ತುವಾರಿಯನ್ನು ಅನಂತಕುಮಾರ್ ಅವರಿಗೆ ವಹಿಸಿದ್ದರು. ಶಾಸಕ ಆರ್. ಅಶೋಕ್ ಕೂಡ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದರು. ಆದರೂ ಗೆಲುವು ಸಾಧಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ.