ಲಂಡನ್ನಿಂದ ಭಾರತಕ್ಕೆ ಮರಳಿದ ಜಯಮಾಲ ಪುತ್ರಿ ಸೌಂದರ್ಯ
ಬೆಂಗಳೂರು, ಮೇ 11: ಕನ್ನಡದ ಹಿರಿಯ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಜಯಮಾಲ ಪುತ್ರಿ ಸೌಂದರ್ಯ ಭಾರತಕ್ಕೆ ಮರಳಿದ್ದಾರೆ. ಇಂದು ಲಂಡನ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕನ್ನಡಿಗರನ್ನು ಬೆಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಕರೆ ತಂದಿದ್ದು, ಇದರಲ್ಲಿ ಸೌಂದರ್ಯ ಕೂಡ ಇದ್ದಾರೆ.
ವಿದೇಶದಲ್ಲಿ ಸಿಕ್ಕಿ ಹಾಕಿಕೊಂಡಿರುವ ಕನ್ನಡಿಗರನ್ನು ಸರ್ಕಾರ ವಾಪಸ್ ಕರೆತರುತ್ತಿದೆ. ಇಂದು ಲಂಡನ್ನಿಂದ ಏರ್ ಇಂಡಿಯಾ ವಿಮಾನದಲ್ಲಿ 200ಕ್ಕೂ ಹೆಚ್ಚು ಭಾರತೀಯರನ್ನು ತಾಯ್ನಾಡಿಗೆ ಕರೆ ತಂದಿದೆ. ಈ ವಿಮಾನದಲ್ಲಿ ನಟಿ ಸೌಂದರ್ಯ ಜಯಮಾಲ ಸಹ ಇದ್ದು, ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಲಾಕ್ ಡೌನ್ ಮುಗಿಯುವ ಮುನ್ನವೇ ವಿಮಾನಯಾನ ಸೇವೆ ಆರಂಭ?
ಜಯಮಾಲ ಪುತ್ರಿ ಸೌಂದರ್ಯ ಅನೇಕ ವರ್ಷಗಳಿಂದ ವಿದೇಶದಲ್ಲಿ ವಾಸ ಮಾಡುತ್ತಿದ್ದರು. ಲಾಕ್ಡೌನ್ ಘೋಷಣೆಯಾದಾಗ ಲಂಡನ್ನಿಂದ ಭಾರತಕ್ಕೆ ಬರಲು ಪ್ರಯತ್ನಪಟ್ಟರು. ಆದರೆ, ವಿಮಾನಗಳನ್ನು ಬಂದ್ ಮಾಡಿದ್ದ ಕಾರಣ ಅವರಿಗೆ ಭಾರತಕ್ಕೆ ಬರಲು ಸಾಧ್ಯ ಆಗಿರಲಿಲ್ಲ.
ತಾಯಿಯ ರೀತಿ ನಟಿ ಸೌಂದರ್ಯ ಜಯಮಾಲ ಸಹ ಸಿನಿಮಾಗಳನ್ನು ನಟಿಸಿದ್ದಾರೆ. 'ಗಾಡ್ ಫಾದರ್', 'ಸಿಂಹಾದ್ರಿ' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇಂದು ಲಂಡನ್ನಿಂದ 200ಕ್ಕೂ ಹೆಚ್ಚು ಕನ್ನಡಿಗರನ್ನು ಏರ್ ಇಂಡಿಯಾ ವಿಮಾನ ಕರೆ ತಂದಿದೆ. ದಿಲ್ಲಿ ಮಾರ್ಗವಾಗಿ ಬೆಂಗಳೂರು ತಲುಪಿದೆ. ವಿದೇಶದಿಂದ ಮರಳಿದವರಿಗೆ ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್ ಕಡ್ಡಾಯವಾಗಿದೆ.