ಕೊನೆವರೆಗೂ ಹೆತ್ತ ಮಗಳನ್ನು 'ಮಗಳೇ' ಎಂದು ಕರೆಯದೆ ಹೋದರೇ ಜಯಲಲಿತಾ?
ತಮ್ಮನ್ನು ತಾವು ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಮಗಳೆಂದು ಹೇಳಿಕೊಂಡಿರುವ ಅಮೃತಾ. ಕನ್ನಡದ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿರುವ ಮಹಿಳೆ.
ಬೆಂಗಳೂರು, ಆಗಸ್ಟ್ 28: ಇದು ನಿಜವೇ ಆಗಿದ್ದರೆ, ಇದು ನಿಜಕ್ಕೂ ಮನ ಮಿಡಿಯುವ ಕತೆ. ಕೋಟ್ಯಾನುಕೋಟಿ ಜನರ ಆರಾಧ್ಯ ದೇವತೆಯಾಗಿದ್ದ ವ್ಯಕ್ತಿಯೊಬ್ಬರ ಮಗಳಾಗಿ ಹುಟ್ಟಿದ್ದರೂ, ಈಕೆಗೆ ತಾಯಿಯೊಂದಿಗೆ ಬದುಕುವ ಯೋಗವಿಲ್ಲ. ಅಮ್ಮ ಅರಮನೆಯಲ್ಲಿದ್ದರೂ, ಈ ಮಗಳಿಗೆ ಸುಖದ ಸುಪ್ಪೊತ್ತಿಗೆಯಿಲ್ಲ. ಅದೆಲ್ಲಾ ಬೇಡ, ಕನಿಷ್ಠ ಆಕೆಯನ್ನು ಸಾರ್ವಜನಿಕವಾಗಿ ಅಮ್ಮಾ ಎಂದು ಕರೆಯುವ ಸೌಭಾಗ್ಯವೂ ಈಕೆಗಿಲ್ಲ. ಅತ್ತ, ಆ ತಾಯಿಗೂ ಅಷ್ಟೆ. ತನ್ನ ಮಗಳನ್ನು ಎಲ್ಲರ ಮುಂದೆ 'ಮಗಳೇ' ಎಂದು ಬಾಯಿ ತುಂಬಾ ಕರೆಯಲಾರಂದಂಥ ಪ್ರಸಂಗ. ಇದೇ ಅಂತರದಲ್ಲಿಯೇ ಆ ಸಂಬಂಧ ಮುಗಿದು ಹೋದ ಕತೆಯಿದು!
ಈವರೆಗೆ ಅಜ್ಞಾತವಾಗಿದ್ದ ಸ್ಫೋಟಕ ವಿಷಯವೊಂದನ್ನು ತಾನು ಬಯಲಿಗೆಳೆದಿರುವುದಾಗಿ ಹೇಳಿಕೊಂಡಿರುವ ಕನ್ನಡದ ದಿನಪತ್ರಿಕೆಯೊಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮಗಳೆಂದು ಹೇಳಿಕೊಂಡಿರುವ ಮಹಿಳೆಯೊಬ್ಬರ ಸಂದರ್ಶನವನ್ನು ಅವರ ಫೋಟೋ ಸಹಿತ ಪ್ರಕಟಿಸಿದೆ.
Recommended Video
ವರದಿಯ ಪ್ರಕಾರ, ಈ ಮಹಿಳೆಯ ಹೆಸರು ಅಮೃತಾ. ಈಕೆ ಬೆಂಗಳೂರಿನಲ್ಲೇ ನೆಲೆಸಿರುವುದಾಗಿ ತಿಳಿಸಿರುವ ಪತ್ರಿಕೆ, ಈ ವಿಚಾರ ಗೌಪ್ಯವಾಗಿದ್ದು, ಈಗ ಹೊರಬಂದಿದೆ ಎಂದು ಹೇಳಿಕೊಂಡಿದೆ.
ಜಯಲಲಿತಾ ಮಗ ಅಂತ ಹೇಳುವವನ ಮೇಲೆ ನ್ಯಾಯಾಧೀಶರು ಸಿಟ್ಟಾಗಿದ್ಯಾಕೆ?
ಇದರಲ್ಲಿ ಆ ಮಹಿಳೆಯು, ತಾನು ಜಯಲಲಿತಾ ಅವರ ಮಗಳೆಂದು ಘೋಷಿಸಿಕೊಂಡಿದ್ದು, ಇದು ಹೊರಜಗತ್ತಿಗೆ ತಿಳಿಯದ ವಿಚಾರವೆಂದೂ, ತಮ್ಮ ವರ್ಚಸ್ಸಿಗೆ ಧಕ್ಕೆ ಬರುವ ಹಿನ್ನೆಲೆಯಲ್ಲಿ ಜಯಲಲಿತಾ ಅವರು ತನಗೆ ಈ ವಿಚಾರವನ್ನು ರಹಸ್ಯವಾಗಿಟ್ಟುಕೊಳ್ಳುವಂತೆ ಆಜ್ಞಾಪಿಸಿದ್ದರೆಂದೂ ಆ ಮಹಿಳೆ ಹೇಳಿಕೊಂಡಿದ್ದಾರೆ.
ಅಲ್ಲದೆ, ಈ ಹಿಂದೆ ತಾನು ಜಯಲಲಿತಾ ಅವರನ್ನು ಭೇಟಿಯಾಗಿ ಈ ವಿಚಾರವನ್ನು ಕೆಲವಾರು ದಾಖಲೆಗಳೊಂದಿಗೆ ಅವರ ಗಮನಕ್ಕೆ ತಂದಾಗ, ತನ್ನನ್ನು ಅಪ್ಪಿ ಮುದ್ದಾಡಿ ಕಣ್ಣೀರಿಟ್ಟ ಜಯಲಲಿತಾ, ಚೆನ್ನೈನಲ್ಲೇ ತಮ್ಮೊಂದಿಗೆ ಸುಮಾರು ತಿಂಗಳುಗಳ ಕಾಲ ಇರಿಸಿಕೊಂಡಿದ್ದರು. ಆನಂತರ, ಕೆಲವಾರು ರಾಜಕೀಯ ಕಾರಣಗಳಿಗಾಗಿ ತಮ್ಮನ್ನು ದೂರ ಹೋಗಿ, ಎಲ್ಲಾದರೂ ಚೆನ್ನಾಗಿ ಬದುಕು ಎಂದು ಹೇಳಿ ಕಳುಹಿಸಿದ್ದರು ಎಂದು ಆ ಮಹಿಳೆ ತಾವು ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
'ಅಮ್ಮನ ಮಗ'ನ ದಾಖಲೆ ನಕಲಿ, ಆತನ ಜೈಲಿಗಟ್ಟಿ ಎಂದ ಹೈಕೋರ್ಟ್
ಕೆಲ ದಿನಗಳ ಹಿಂದೆ, ಕೃಷ್ಣಮೂರ್ತಿ ಎಂಬಾತನೊಬ್ಬ ತಾನು ಜಯಲಲಿತಾ ಗೌಪ್ಯ ಮಗ ಎಂದು ಹೇಳಿಕೊಂಡು ನ್ಯಾಯಾಲಯದ ಮೆಟ್ಟಿಲೇರಿದ್ದ. ಆ ರೀತಿ, ಅಮೃತಾ ಕಾನೂನಿನ ಮೊರೆ ಹೋಗಿಲ್ಲ. ಆದರೆ, ತಾನು ನಿಜವಾಯಿಯೂ ಆ ಗಣ್ಯ ವ್ಯಕ್ತಿಯ ಮಗಳೆಂದೇ ಹೇಳಿದ್ದಾರೆ.
ಸಂದರ್ಶನದಲ್ಲಿ ಮತ್ತೇನಿದೆ? ಜಯಲಲಿತಾರ ಪುತ್ರಿ ಎಂದು ಹೇಳುವ ಈಕೆ, ತನ್ನ ಇವರೇ ತನ್ನ ತಂದೆ ಎಂದು ಬೆರಳು ಮಾಡಿ ತೋರಿಸುವ ವ್ಯಕ್ತಿ ಯಾರು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಜಯಲಲಿತಾ-ಶೋಭನ್ ಬಾಬು ಅವರೇ ತಾಯಿ-ತಂದೆಯಂತೆ!
ಸಂದರ್ಶನದಲ್ಲಿ ಅಮೃತಾ ಅವರು ತನ್ನ ತಂದೆಯೆಂದು ತೋರಿಸುವುದು ತೆಲುಗಿನ ನಟ, ದಿವಂಗತ ಶೋಭನ್ ಬಾಬು ಅವರನ್ನು. ಅವರೊಂದಿಗಿನ ಒಡನಾಟದಿಂದಲೇ ಜಯಲಲಿತಾ ಅವರು ತಮಗೆ ಜನ್ಮ ನೀಡಿದ್ದರೆಂದು ಆಕೆ ಹೇಳಿಕೊಂಡಿದ್ದಾರೆ.
ಶೋಭನ್ ಬಾಬು ಪರಿಚಯವಾಗಿದ್ದು ಆಗಲೇ!
ಎಲ್ಲರಿಗೂ ತಿಳಿದಿರುವಂತೆ, ತಾವು ಪ್ರವರ್ಧಮಾನಕ್ಕೆ ಬರುವ ಹೊತ್ತಿಗಾಗಲೇ ಜಯಲಲಿತಾ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಆಗ, ಅವರಿಗೆ ಗುರುವಾಗಿ ಬಂದಿದ್ದು ಎಂ.ಜಿ. ರಾಮಚಂದ್ರನ್. ಆದರೆ, ಅವರೊಂದಿಗೆ ಜಯಲಲಿತಾ ಅವರಿಗೆ ಹೆಚ್ಚು ಒಡನಾಟ ಇರಲಿಲ್ಲ. ಆಗಲೇ, ಪರಿಚಯವಾಗಿದ್ದು ಶೋಭನ್ ಬಾಬು.
ಆತ್ಮಿಯತೆಯಿಂದಲೇ ಬಾಂಧವ್ಯ
ಶೋಭನ್ ಬಾಬು ಅವರೊಂದಿಗೆ ತಮ್ಮ ಬದುಕಿನ ಕಷ್ಟ-ಕಾರ್ಪಣ್ಯಗಳನ್ನು ಹೇಳಿಕೊಳ್ಳುವಷ್ಟರ ಮಟ್ಟಿಗೆ ಇವರಿಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಆ ಹೊತ್ತಿನಲ್ಲಿಇಬ್ಬರೂ ಒಟ್ಟಾಗೆ ನಟಿಸಿದ ಅನೇಕ ಚಿತ್ರಗಳು ಬಂದವು. ಇದು ಮುಂದೆ ಗಾಢವಾದ ಸ್ನೇಹಕ್ಕೂ ತಿರುಗಿತು. ಇದರಿಂದಲೇ ಜಯಲಲಿತಾ ಅವರು ತಮಗೆ ಜನ್ಮ ನೀಡಲು ಕಾರಣವಾಯಿತು ಎಂದಿದ್ದಾರೆ ಅಮೃತಾ.
ಜಯಲಲಿತಾ ಸಂಬಂಧಿಕರಿಂದಲೂ ಗೌಪ್ಯತೆ
ಜಯಲಲಿತಾ ಅವರ ಅಕ್ಕ ಶೈಲಜಾ ಹಾಗೂ ಅವರ ಪತಿ ಸಾರಥಿ ಅವರ ಆಶ್ರಯದಲ್ಲಿ ತಾನು ಬೆಳೆದಿದ್ದು ಎಂದು ಹೇಳಿರುವ ಅಮೃತಾ, ಎಂದಿಗೂ ಶೈಲಜಾ ಹಾಗೂ ಅವರ ಪತಿ ತಾನು ಜಯಲಲಿತಾ ಅವರ ಮಗಳು ಎಂದು ಹೇಳಿರಲಿಲ್ಲವಂತೆ! ಆದರೆ, ಆಗಾಗ ನೀನು ದೊಡ್ಡ ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ ಹುಟ್ಟಿದ ಮಗು ಎಂದು ಹೇಳಿದ್ದರಂತೆ. ಇದಕ್ಕೆ ಕಾರಣ, ಜಯಲಲಿತಾ ಅವರು ಶೈಲಜಾ ಹಾಗೂ ಅವರ ಪತಿಯಿಂದ ಪಡೆದಿದ್ದ ಪ್ರಮಾಣ ಎಂದಿದ್ದಾರೆ ಅಮೃತಾ.
ಚೆನ್ನೈಗೆ ಹೋಗಿದ್ದ ಅಮೃತಾ
ಸುದ್ದಿ ವಾಹಿನಿಯೊಂದರಲ್ಲಿ ಅಮೃತಾ ಅವರನ್ನು ನೋಡಿದ, ಅಮೆರಿಕದಲ್ಲಿದ್ದ ರಜನಿನಾಥ್ ಎಂಬ ವ್ಯಕ್ತಿ ಇವರನ್ನು ಸಂಪರ್ಕಿಸಿ 'ನೀನು ಜಯಲಲಿತಾ ಅವರ ಮಗಳು' ಎಂದು ಹೇಳಿದಾಗಲೇ ಇವರಿಗೆ ಸತ್ಯಾಂಶ ಗೊತ್ತಾಗಿದ್ದು ಎನ್ನುತ್ತಾರೆ ಅಮೃತಾ. ಆಗ,ಸಂಬಂಧಿಕರನ್ನು ಕೇಳಿದಾಗ ಅಸಲಿ ವಿಷಯ ಗೊತ್ತಾಯ್ತು. ಆಗ, ಇವರ ನೆರವಿಗೆ ಬಂದಿದ್ದ ಜಯಲಕ್ಷ್ಮಿ ಎಂಬುವರು ಒಂದು ಪತ್ರವೊಂದನ್ನು ಕೊಟ್ಟು, ಇದನ್ನು ಜಯಲಲಿತಾ ಅವರಿಗೆ ನೀಡು ಎಂದು ಹೇಳಿ ಚೆನ್ನೈಗೆ ಕಳುಹಿಸಿದ್ದರಂತೆ.
ಎಂದಿಗೂ ಮಗಳೇ ಎಂದು ಕರೆಯಲೇ ಇಲ್ಲ!
ಚೆನ್ನೈನಲ್ಲಿ ಕೆಲವಾರು ವರ್ಷಗಳ ಹಿಂದೆ ಜಯಲಲಿತಾ ಅವರನ್ನು ಭೇಟಿಯಾದಾಗ, ಈ ಪತ್ರವನ್ನು ಅಮೃತಾ ನೀಡಿದ್ದರಂತೆ. ಆಗ, ಕಣ್ಣೀರಿಟ್ಟಿದ್ದ ಜಯಲಲಿತಾ, ತಮ್ಮೊಂದಿಗೆ ಕೆಲವಾರು ತಿಂಗಳುಗಳ ಕಾಲ ಇರಿಸಿಕೊಂಡು ಕಳುಹಿಸಿಕೊಟ್ಟಿದ್ದರಂತೆ. ಆನಂತರ, ಹೈದರಾಬಾದ್, ಊಟಿ, ಚೆನ್ನೈನ ಸಿರಿದಾವೂರ್ ನಲ್ಲಿರುವ ತಮ್ಮ ನಿವಾಸಗಳಲ್ಲಿ ಅಮೃತಾ ಅವರನ್ನು ಕರೆಯಿಸಿಕೊಂಡು ಚೆನ್ನಾಗಿ ನೋಡಿಕೊಂಡರಂತೆ. ಆದರೆ, ಎಂದಿಗೂ 'ಮಗಳೇ' ಎಂದು ಕರೆಯಲಿಲ್ಲವಂತೆ! ಆದರೆ, ಅದೊಂದು ದಿನ ಅಮೃತಾಳಿಗೆ 'ನೀನು ನನ್ನ ಜತೆ ಇರಬೇಡ. ಎಲ್ಲಾದರೂ ಹಾಯಾಗಿ ಇರು' ಎಂದು ಹೇಳಿ, ಅದಕ್ಕೊಂದು ವ್ಯವಸ್ಥೆ ಕಲ್ಪಿಸಿ ಕಳುಹಿಸಿಕೊಟ್ಟರಂತೆ. ಆಗಲೇ ಅವರು, ''ಯಾವುದೇ ಕಾರಣಕ್ಕೂ ನನ್ನ ಗೆಳತಿ ಶಶಿಕಲಾ ಸಂಪರ್ಕಕ್ಕೆ ಬರಬೇಡ. ರಾಜಕೀಯಕ್ಕೆ ಕಾಲಿಡಬೇಡ'' ಎಂದು ಕಿವಿಮಾತು ಹೇಳಿದ್ದರಂತೆ!
ಒಂದು ಲೋಟ ನೀರು ಕುಡಿದು ಹೊರಟುಹೋಗಿದ್ದರು!
ಹಿಂದೆ, ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಜಯಲಲಿತಾ ಅವರನ್ನು ಖುಲಾಸೆಗೊಳಿಸಿದ್ದಾಗ ಮೈಸೂರು ಚಾಮುಂಡಿ ಬೆಟ್ಟಕ್ಕೆ ತಾಯಿಯ ದರುಶನಕ್ಕೆ ಆಗಮಿಸಿದ್ದ ಜಯಲಲಿತಾ, ಗೌಪ್ಯವಾಗಿ ಅಮೃತಾರ ಮನೆಗೆ ಭೇಟಿ ನೀಡಿದ್ದರಂತೆ. ಆದರೆ, ಅವರ ಮನೆಯಲ್ಲಿ ಏನೂ ತಿನ್ನದ ಅವರು, ಕೇವಲ ಒಂದು ಲೋಟ ನೀರು ಕುಡಿದು, ಕೆಲ ಹೊತ್ತು ಮಾತನಾಡಿ ಹೊರಟುಹೋಗಿದ್ದರಂತೆ.