"104 ವರ್ಷ ಆಯ್ತು, ನನಗ್ಯಾಕಪ್ಪಾ ಬೆಡ್ ಎಂದಿದ್ದರು ದೊರೆಸ್ವಾಮಿ"
ಬೆಂಗಳೂರು, ಮೇ 26: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ದೇಶ ಕಂಡ ಅಪ್ರತಿಮ ಹೋರಾಟಗಾರ, ಗಾಂಧಿವಾದಿ, ಸರಳ, ಸಜ್ಜನ ಹಾಗೂ ಸಹೃದಯಿ ಹೋರಾಟಗಾರನ ಬದುಕು ಸರ್ವರಿಗೂ ಮಾದರಿಯಾಗಿದೆ.
Recommended Video
ಹಿರಿಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಶಾಂತಸ್ವಭಾವ, ಸೂಕ್ಷ್ಮಪ್ರಜ್ಞೆ, ಸಹಾಯ ಮನೋಭಾವ ಹೊಂದಿದವರು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಕಣ್ಣೆದುರಿಗೆ ಸಿಗುತ್ತವೆ. ಇಡೀ ಜಗತ್ತು ಕೊರೊನಾವೈರಸ್ ಸೋಂಕಿನ ಭೀತಿಯಲ್ಲಿ ತತ್ತರಿಸಿದ ಸಂದರ್ಭದಲ್ಲೂ ಮಹಾಮಾರಿಯನ್ನು ದಿಟ್ಟತನದಿಂದ ಎದುರಿಸಿದವರು ಇದೇ ಹೆಚ್ ಎಸ್ ದೊರೆಸ್ವಾಮಿ.
ಸಕಲ ಸರ್ಕಾರಿ ಗೌರವಗಳೊಂದಿಗೆ ದೊರೆಸ್ವಾಮಿ ಅಂತ್ಯಕ್ರಿಯೆ ನಡೆಸಲು ಸರ್ಕಾರದ ಆದೇಶ
ಕಳೆದ ಮಾರ್ಚ್ 6ರಂದು ಮೊದಲ ಬಾರಿಗೆ ಕೊರೊನಾವೈರಸ್ ಸೋಂಕಿನಿಂದ ಹೆಚ್ ಎಸ್ ದೊರೆಸ್ವಾಮಿ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 12ರಂದು ಕೊವಿಡ್-19 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಅದಾಗಿ ಎರಡು ದಿನಕ್ಕೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಮೇ 14ರಂದು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯ ಸಿ ಎನ್ ಮಂಜುನಾಥ್ ತಿಳಿಸಿದ್ದಾರೆ. ಕೊರೊನಾವೈರಸ್ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಹೆಚ್ ಎಸ್ ದೊರೆಸ್ವಾಮಿ ತೋರಿದ ಸಹೃದಯತೆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ.
"104 ವರ್ಷ ವಯಸ್ಸಾಗಿರುವ ನನಗೇಕೆ ಬೆಡ್?":
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಕಳೆದ 8 ರಿಂದ 10 ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. 10 ವರ್ಷಗಳಲ್ಲಿ ಅದೆಷ್ಟೋ ಬಾರಿ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚಿಗೆ ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿದ್ದ ಅವರು, ದೇಶದಲ್ಲಿ ಕೊವಿಡ್-19 ರೋಗಿಗಳಿಗೆ ಹಾಸಿಗೆಗಳ ಕೊರತೆ ಸೃಷ್ಟಿಯಾಗಿರುವ ಬಗ್ಗೆ ಮಾತನಾಡಿದ್ದರು. "104 ವರ್ಷ ವಯಸ್ಸಾಗಿರುವ ನನಗೇಕೆ ಬೆಡ್ ನೀಡುತ್ತೀರಿ. ಅದೇ ಹಾಸಿಗೆಯನ್ನು ಬೇರೆಯವರಿಗೆ ನೀಡಿ. ನನ್ನನ್ನು ಮನೆಗೆ ಕಳುಹಿಸಿ ಕೊಡಿ" ಎಂದು ಹೇಳಿದ್ದರು ಎಂಬುದಾಗಿ ಆಸ್ಪತ್ರೆ ವೈದ್ಯ ಸಿ ಎನ್ ಮಂಜುನಾಥ್ ಹೇಳಿಕೊಂಡಿದ್ದಾರೆ.
ಸಾಮಾಜಿಕ ಕಳಕಳಿ ಮತ್ತು ಬದ್ಧತೆಗೆ ಸರಿಸಾಟಿಯಿಲ್ಲ:
ಗಾಂಧಿವಾದಿ ಹೆಚ್ ಎಸ್ ದೊರೆಸ್ವಾಮಿ ಸದಾ ಸಮಾಜದ ಜ್ವಲಂತ ಸಮಸ್ಯೆಗಳ ಕುರಿತು ಯೋಚಿಸುತ್ತಿದ್ದರು. ಯಾವಾಗಲೂ ಸಮಾಜದ ಬಗ್ಗೆ ಹೆಚ್ಚು ಕಳಕಳಿ ಹೊಂದಿದ್ದರು. ಪ್ರತಿ ಬಾರಿ ಅವರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲೂ ಹಲವು ಸಂಗತಿಗಳನ್ನು ತಿಳಿದುಕೊಂಡಿದ್ದೇನೆ. ಹಲವು ಬಾರಿ ಆಸ್ಪತ್ರೆಗೆ ದಾಖಲಾದ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸಲಹೆ ನೀಡುತ್ತಿದ್ದೆವು. ಆದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೂರು ಗಂಟೆಗಳಲ್ಲೇ ಪ್ರತಿಭಟನೆಯೊಂದರಲ್ಲಿ ಭಾಗವಹಿಸುತ್ತಿದ್ದರು. ಸಮಾಜದ ಬಗ್ಗೆ ಅವರಿಗಿದ್ದ ಕಳಕಳಿ ಮತ್ತು ಸಾಮಾಜಿಕ ಬದ್ಧತೆಯು ನಮ್ಮೆಲ್ಲರಿಗೂ ಪ್ರೇರಣೆಯಾಗಲಿದೆ ಎಂದು ವೈದ್ಯ ಸಿ ಎನ್ ಮಂಜುನಾಥ್ ಹೇಳಿದ್ದಾರೆ.