ಜನತಾ ಕರ್ಫ್ಯೂ: ಎಚ್ಎಸ್ಆರ್, ಮಡಿವಾಳ, ಇ-ಸಿಟಿ, ಅನೇಕಲ್ ಖಾಲಿ ಖಾಲಿ
ಆನೇಕಲ್, ಮಾರ್ಚ್ 22: ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರು ಹಾಗೂ ಬೆಂಗಳೂರು ಹೊರವಲಯ ಆನೇಕಲ್ ಸುತ್ತಮುತ್ತ ಜನತಾ ಕರ್ಫ್ಯೂ ಯಶಸ್ವಿಯಾಗಿದೆ. ಬೆಳಿಗ್ಗೆಯಿಂದಲೂ ರಸ್ತೆಗಳು, ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳು ಖಾಲಿ ಖಾಲಿಯಾಗಿದೆ.
ಅಗತ್ಯ ವಸ್ತುಗಳ ಪೂರೈಕೆ ಬಿಟ್ಟೆ ಬೇರೆ ಯಾವ ಸ್ಥಳದಲ್ಲೂ ಜನರು ಓಡಾಟ ಕಂಡುಬಂದಿಲ್ಲ. ದೇಶದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗಿರುವ ಹಿನ್ನೆಲೆ, ಸೋಂಕು ಹರಡುವಿಕೆ ತಡೆಯಲು ಮತ್ತು ಅದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಜನತಾ ಕರ್ಫ್ಯೂ ಆರಚಣೆ ಮಾಡಲಾಗುತ್ತಿದೆ.
ಎಚ್ಎಸ್ಆರ್ ಲೇಔಟ್, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ ಮುಖ್ಯ ರಸ್ತೆ, ಜಿಗಣಿ, ಆನೇಕಲ್ ನಗರ ಮತ್ತು ಆನೇಕಲ್ ಗಡಿಭಾಗದಲ್ಲಿ ಜನತಾ ಕರ್ಫ್ಯೂಗೆ ಮೆಚ್ಚುಗೆ ವ್ಯಕ್ತವಾಗಿದೆ. ಮುಂದೆ ಓದಿ...
ಆನೇಕಲ್ ಗಡಿ ಭಾಗ
ಆನೇಕಲ್ ಗಡಿಭಾಗದಲ್ಲೂ ಜನತಾ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಬಸ್ಸುಗಳು ಯಾವುದು ರಸ್ತೆಗೆ ಇಳಿದಿಲ್ಲ. ಅಂಗಡಿ-ಮುಂಗಟ್ಟುಗಳು ಬಾಗಿಲು ತೆಗಿದಿಲ್ಲ, ಜನಸಾಮಾನ್ಯರ ಓಡಾಟ ಸಹ ಸಂಪೂರ್ಣ ವಿರಳವಾಗಿದೆ, ಆಗಾಗ ಅಲ್ಲೊ ಇಲ್ಲೊ ಒಂದು ಅಥವಾ ಎರಡು ದ್ವಿಚಕ್ರ ವಾಹನ ಸಂಚಾರ ಮಾಡುತ್ತಿದೆ, ಪ್ರಮುಖ ವೃತ್ತಗಳಲ್ಲಿ ಯಾವುದೇ ವಾಹನ ಸಂಚಾರವಿಲ್ಲದಿರುವುದು ಗಮನ ಸೆಳೆದಿದೆ.
ಜಿಗಣಿ ಬೆರಳೆಣಿಕೆಯಷ್ಟು ಮಂದಿ ಸಂಚಾರ
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಬೆರಳೆಣಿಕೆಯಷ್ಟು ಮಂದಿ ಸಂಚಾರ ಮಾಡುತ್ತಿದ್ದಾರೆ. ಎಂದಿನಂತೆ ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್ ಬಂಕ್ ಕಾರ್ಯ ನಿರ್ವಹಿಸುತ್ತಿದೆ. ಅಗತ್ಯ ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆ ಬಂದ್ ಆಗಿದೆ. ಜನತಾ ಕರ್ಫ್ಯೂ ನಡುವೆ, ಜಿಗಣಿ ಎಪಿಸಿ ವೃತ್ತದ ನಂದಿನ ಹಾಲಿನ ಕೇಂದ್ರದಲ್ಲಿ ಕೆಲವೇ ಕೆಲವು ಮಂದಿ ಮುಂಜಾನೆ ಹಾಲು ಖರೀದಿಸಿದ್ದಾರೆ. ಉಳಿದಂತೆ ವಾಹನ ಸಂಚಾರ, ಜನಜೀವನ ಸ್ತಬ್ಧವಾಗಿತ್ತು.
ಎಲೆಕ್ಟ್ರಾನಿಕ್ ಸಿಟಿ
ಪ್ರತಿನಿತ್ಯ ಲಕ್ಷಾಂತರ ವಾಹನಗಳು ಹರಿದಾಡುವ ಎಲೆಕ್ಟ್ರಾನಿಕ್ ಸಿಟಿಯ ಪ್ರಮುಖ ರಸ್ತೆ ಗಳು ಖಾಲಿ ಖಾಲಿಯಾಗಿತ್ತು. ರಾಷ್ಟ್ರೀಯ ಹೆದ್ದಾರಿ 7 ಸಹ ಎಂದು ಕಾಣದಷ್ಟು ಸ್ತಬ್ಧವಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ಯಾವುದೇ ವಾಹನ ಸಂಚಾರವಿಲ್ಲ . ಆದರೂ ಒತ್ತಡ ಹೇರಿ ಟೋಲ್ ಸಿಬ್ಬಂದಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಟೋಲ್ ನ ಸಿಬ್ಬಂದಿ ಗೆ ರಜೆ ಕೊಟ್ಟಿಲ್ಲ.
ಮಡಿವಾಳ ಸಂತೆ ಸ್ತಬ್ಧ
ಹೊಸೂರು ಮುಖ್ಯರಸ್ತೆಯಲ್ಲಿರುವ ಮಡಿವಾಳ ಸಂತೆ ಸಂಪೂರ್ಣ ಮುಚ್ಚಿದೆ. ಯಾವುದೇ ಮಳಿಗೆಗಳು ತೆರೆದಿಲ್ಲ. ಪ್ರತಿನಿತ್ಯ ಲಕ್ಷಾಂತರ ರೂಗಳ ವಹಿವಾಟು ನಡೆಯುವ ಸಂತೆ ಇದಾಗಿದ್ದು, ಇಂದು ಖಾಲಿಯಾಗಿದೆ. ಹೂಸೂರು ಮುಖ್ಯರಸ್ತೆಯಲ್ಲೂ ಯಾವುದೇ ವಾಹನಗಳಿಲ್ಲ. ಯಾವುದೇ ಬಂದ್ ಗಳಿಗೆ ಕರೆ ನೀಡಿದ್ದಾಗಲೂ ಇಷ್ಟೊಂದು ಖಾಲಿಯಾಗಿರಲಿಲ್ಲ ಈ ರಸ್ತೆ. ಇಡೀ ಸೀಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಬೆರಳೆಣಿಕೆಯಷ್ಟು ಮಾತ್ರ ವಾಹನಗಳು ಸಂಚಾರ ಮಾಡುತ್ತಿದೆ. ಕೆ.ಆರ್.ಪುರಂ ಕಡೇ ರಸ್ತೆಯು ಖಾಲಿ ಖಾಲಿಯಾಗಿದೆ. ಜಯನಗರ ಕಡೇಯಿಂದ ಬರುವ ರಸ್ತೆಯಲ್ಲೂ ಸಂಚಾರ ವಿರಳವಾಗಿದೆದ.
ಎಚ್ಎಸ್ಆರ್ ಲೇಔಟ್
ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಹೆಚ್.ಎಸ್.ಆರ್ ಲೇಔಟ್ ಖಾಲಿ ಖಾಲಿಯಾಗಿದೆ. ಇನ್ನೂರಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿರುವ ಬಿಡಿಎ ಕಾಂಪ್ಲೇಕ್ಸ್ ಬಂದ್ ಆಗಿದೆ. ಸದಾ ಒಂದಲ್ಲ ಒಂದು ಅಗತ್ಯಕ್ಕೆ ಬರುತಿದ್ದ ಜನ ಇಂದು ಇತ್ತ ತಲೆ ಹಾಕಲಿಲ್ಲ. ಎಲ್ಲಾ ವ್ಯಾಪಾರಿಗಳು ಜನತಾ ಕರ್ಪ್ಯೂಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಶಾಸಕ ಸತೀಶ್ ರೆಡ್ಡಿ ಮತ್ತು ಸಂಸದ ಎ.ನಾರಾಯಣಸ್ವಾಮಿರವರ ಕಛೇರಿಗಳಿರುವ ವಾಣಿಜ್ಯ ಸಂಕೀರ್ಣ ಬಿಕೋ ಎನ್ನುತಿತ್ತು.