ಇತಿಹಾಸ ಪುಟಕ್ಕೆ ಮಧ್ಯಮ ವರ್ಗದ ಆಪ್ತ ಜನತಾ ಬಜಾರ್
ಬೆಂಗಳೂರು, ಮಾರ್ಚ್ 09: ನಗರದಲ್ಲಿ ಮಾಲ್ ಗಳ ಸಂಖ್ಯೆ ಕಡಿಮೆ ಇದ್ದ ಸಂದರ್ಭದಲ್ಲಿ ಯಾರ ಬಾಯಲ್ಲಿ ಕೇಳಿದರೂ ಜನತಾ ಬಜಾರ್ ಹೆಸರು. ಆದರೆ ಬೆಂಗಳೂರಿನಲ್ಲಿ ಮಾಲ್ ಗಳ ಸಂಖ್ಯೆ ಹೆಚ್ಚಿದಾಗಲೂ ಕೂಡ ಜನತಾ ಬಜಾರ್ ಗೆ ಹೋಗುವವರ ಸಂಖ್ಯೆಯೇನು ಕಡಿಮೆ ಇರಲಿಲ್ಲ.
ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಜನತಾ ಬಜಾರ್ ಮಳಿಗೆ ಇತಿಹಾಸ ಪುಟ ಸೇರಲಿದೆ. ಕಟ್ಟಡವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ, ಸುಮಾರು 8 ಮಹಡಿಗಳ ವಾಣಿಜ್ಯ ಸಮುಚ್ಛಯ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ.
ದಿನಸಿ ವಸ್ತುಗಳಿಂದ ಹಿಡಿದು, ಮದ್ಯ ಸೇರಿದಂತೆ ಅನೇಕ ಸಾಮಗ್ರಿಗಳನ್ನು ಈ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಮಧ್ಯಮ ವರ್ಗದ ಆಪ್ತ ಬಜಾರ್ ಎಂದೇ ಹೆಸರಾಗಿರುವ ಈ ಮಳಿಗೆಗೆ ನಿತ್ಯ ನೂರಾರು ಗ್ರಾಹಕರು ಭೇಟಿ ನೀಡುತ್ತಾರೆ. ಸುಮಾರು 50 ವರ್ಷಗಳಿಂದ ರಾಜ್ಯಾದ್ಯಂತ ಮನೆ ಮಾತಾಗಿದ್ದ ಜನತಾ ಬಜಾರ್, ಮುಂದಿನ ದಿನಗಳಲ್ಲಿ ನೆನಪಾಗಿ ಮಾತ್ರ ಉಳಿಯಲಿದೆ.
ಕಾರಣವೇನು?: ಗಾಂಧಿ ನಗರದಲ್ಲಿರುವ ಜನತಾ ಬಜಾರ್ ಅತ್ಯಂತ ಆಯಕಟ್ಟಿನ ಜಾಗದಲ್ಲಿದ್ದು, ಇದೇ ಕಟ್ಟಡದಲ್ಲಿ ಅಪೆಕ್ಸ್ ಬ್ಯಾಂಕ್, ಸರ್ಕಾರಿ ಉದ್ಯೋಗ ವಿನಿಮಯ ಕೇಂದ್ರ, ಸರ್ಕಾರಿ ಒಡೆತನದ ರೇಷ್ಮೆ ವಸ್ತುಗಳ ಮಳಿಗೆ ಸಹ ಇದೆ. ಜತೆಗೆ ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ಉತ್ತಮ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಉತ್ತಮ ಆದಾಯ ಗಳಿಸುತ್ತಿದೆ.
ಇದೇ ಪ್ರದೇಶದಲ್ಲಿರುವ ಖಾಸಗಿ ಕಟ್ಟಡಗಳಿಗೆ ಲಕ್ಷಾಂತರ ರೂ ಮಾಸಿಕ ಬಾಡಿಗೆ ಇದೆ. ಇದಕ್ಕೆ ಹೋಲಿಸಿದರೆ ಲೋಕೋಪಯೋಗಿ ಇಲಾಖೆಗೆ ಕೆಸಿಸಿಎಫ್ ನೀಡುತ್ತಿರುವ ಬಾಡಿಗೆ ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಳದಿಂದ ಜನತಾ ಬಜಾರ್ ಕಟ್ಟಡವನ್ನು ವಾಪಸ್ ಪಡೆದು, ಹಳೇ ಕಟ್ಟಡವನ್ನು ಧ್ವಂಸಗೊಳಿಸಿ 8 ಅಂತಸ್ತುಗಳ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದೆ.