ವಿಚಾರಣೆಗೆ ಹಾಜರಾಗುವಂತೆ ಜನಾರ್ದನ್ ರೆಡ್ಡಿ ಆಪ್ತನಿಗೆ ಸಿಸಿಬಿ ಬುಲಾವ್
ಬೆಂಗಳೂರು, ನವೆಂಬರ್ 09: ಆಂಬಿಡೆಂಟ್ ವಂಚನೆ ಪ್ರಕರಣ ತನಿಖೆ ಮಾಡುತ್ತಿರುವ ಸಿಸಿಬಿಯು ಇಂದು ಜನಾರ್ದನ ರೆಡ್ಡಿ ಅವರ ಆಪ್ತ ಅಲಿಖಾನ್ ಅವರನ್ನು ವಿಚಾರಣೆಗೆ ಕರೆದಿದೆ.
ಆಂಬಿಡೆಂಟ್ ಪ್ರಕರಣದಲ್ಲಿ ಅಲಿಖಾನ್ ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಇಂದು ಅಲಿಖಾನ್ ಅವರನ್ನು ವಿಚಾರಣೆಗೆ ಒಳಪಡಿಸಲಿರುವ ಸಿಸಿಬಿಯು ಲಂಚ ಪ್ರಕರಣದ ಬಗ್ಗೆ ಪ್ರಶ್ನೆಗಳನ್ನು ಕೇಳಲಿದೆ.
ಜನಾರ್ದನ ರೆಡ್ಡಿಗೆ ಶುಕ್ರವಾರ ಜಾಮೀನು ಸಿಗಬಹುದೇ?
ಆಂಬಿಡೆಂಟ್ ಸಂಸ್ಥೆಯ ಮುಖ್ಯಸ್ಥರನ್ನು ಇಡಿ ಸಂಸ್ಥೆಯ ತನಿಖೆಯಿಂದ ಬಿಡುಗಡೆಗೊಳಿಸಲು ಜನಾರ್ದನ ರೆಡ್ಡಿ ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದರು ಎಂದು ಸಿಸಿಬಿ ಆರೋಪಿಸಿದೆ.
ಈ ಪ್ರಕರಣದಲ್ಲಿ ಅಲಿಖಾನ್, ರಮೇಶ್ ಕೊಠಾರಿ, ಸೈಯದ್ ಅಹ್ಮದ್ ಫರೀದ್ ಮುಖ್ಯವಾದ ಆರೋಪಿಗಳು ಎನ್ನಲಾಗಿದೆ. ಆಂಬಿಡೆಂಟ್ ಸಂಸ್ಥೆಯಿಂದ ರೆಡ್ಡಿಗೆ ಹಣ ವರ್ಗಾವಣೆ ಆಗಿರುವುದು ಅಲಿಖಾನ್ ಮೂಲಕವೇ ಹಾಗೂ ಚಿನ್ನದ ಗಟ್ಟಿ ಸಹ ಅಲಿಖಾನ್ ಮೂಲಕವೇ ಆಗಿದೆ ಎನ್ನಲಾಗಿದೆ ಹಾಗಾಗಿ ಇಂದಿನ ವಿಚಾರಣೆ ಬಹು ಮುಖ್ಯವಾಗಿದೆ.
ರೆಡ್ಡಿಗೆ ಜಾಮೀನು ಸಿಗುತ್ತೋ ಇಲ್ವೋ: ವಕೀಲರು ಹೇಳುವುದೇನು?
ಸಿಸಿಬಿಯು ಜನಾರ್ದನ ರೆಡ್ಡಿ ಅವರಿಗಾಗಿ ಎರಡು ದಿನಗಳಿಂದ ಶೋಧ ನಡೆಸುತ್ತಿದ್ದಾರೆ. ಬಳ್ಳಾರಿ ಹಾಗೂ ಬೆಂಗಳೂರುಗಳ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಆದರೆ ರೆಡ್ಡಿ ಅವರು ದೊರಕಿಲ್ಲ. ಮೂಲಗಳ ಪ್ರಕಾರ ರೆಡ್ಡಿ ಅವರು ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.