ಏನಿದು ಜನೌಷಧ? ಏನಿದರ ಮಹತ್ವ, ಎಲ್ಲೆಲ್ಲಿ ಸಿಗುತ್ತೆ?
ಆಧುನಿಕತೆಯ ಸಿರಿವಂತ ಬಡವ ಎನ್ನದೇ ಎಲ್ಲರ ಬದುಕುಗಳನ್ನು ಹಿಂಡಿ ಹಿಪ್ಪೆ ಮಾಡುವ ಮಹಾಮಾರಿ ಕಾಯಿಲೆಗಳು ಒಂದು ಕಡೆಯಾದರೆ. ಆ ಕಾಯಿಲೆ ಗುಣಪಡಿಸಲು ಸಧ್ಯ ಮಾರುಕಟ್ಟೆಯಲ್ಲಿ ಔಷದೋಪಚಾರದ ವೆಚ್ಚವೂ ಕೈಗೆಟುಕದ ಎತ್ತರದಲ್ಲಿರುವುದು ಮತ್ತೊಂದು ಕಡೆ.
ಹೀಗಿರುವಾಗ ಒಂದೊತ್ತಿನ ಊಟಕ್ಕೆ ನಸುಕಿನಿಂದ ಸಂಜೆವರೆಗೆ ಕೂಲಿ ಜೀವನ ಮಾಡುವರಿಗೆ ಕಾಯಿಲೆವೊಂದು ಬಂತೆಂದರೇ ಅವರ ಗತಿ? ಆ ದೇವರೇ ಬಲ್ಲ.
ಜನರಿಗೆ ಮಾರುಕಟ್ಟೆಯಲ್ಲಿ ದೊರಕುವ ಔಷಧಗಳ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಸುಲಭವಾಗಿ ದಕ್ಕುವಂತಾದರೆ ಅದೆಷ್ಟೋ ಜೀವಗಳು ನೆಮ್ಮದಿಯ ಬದುಕು ಕಾಣುತ್ತವೆ ಅಲ್ವೇ...
ಹೌದು.. ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆ 'ಜನೌಷಧ' ಯೋಜನೆ ಜಾರಿಗೆ ತಂದಿದೆ. ಆಸ್ಪತ್ರೆ, ಔಷಧ ವೆಚ್ಚ ಭರಿಸುವ ಸಾಮರ್ಥ್ಯವಿಲ್ಲದೇ ಅಸಹಾಯಕರಾಗಿ ಜೀವ ಕಳೆದುಕೊಳ್ಳುವ ಎಷ್ಟೋ ಜೀವಗಳಿಗೆ ಆಸರೆ ನೀಡುವ ಯೋಜನೆ ಇದಾಗಿದೆ. ಈ ಅಮೂಲ್ಯ ಯೋಜನೆಯಡಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಇನ್ಮುಂದೆ ಕಡಿಮೆ ಬೆಲೆಗೆ ಔಷಧಗಳು ಲಭ್ಯವಾಗಲಿವೆ. ಏನಿದು ಜನೌಷಧ? ಏನಿದರ ಮಹತ್ವ? ಮುಂದೆ ಓದಿ...
ಶೇ.70ರಷ್ಟು ರಿಯಾಯ್ತಿ ದರದಲ್ಲಿ ಔಷಧ
ಕಾಯಿಲೆ ಪೀಡಿತರಾದ ಜನರಿಗೆ ಕಡಿಮೆ ದರದಲ್ಲಿ ಔಷಧ ಸಿಗುವಂತೆ ನೋಡಿ ಕೊಳ್ಳುವ ಮಹತ್ವಾಕಾಂಕ್ಷಿ ಯೋಜನೆ ಇದು. ಜನೌಷಧ ಕೇಂದ್ರಗಳಲ್ಲಿ ಮಾರುಕಟ್ಟೆ ದರಕ್ಕಿಂತ ಶೇ.70ರಷ್ಟು ರಿಯಾಯ್ತಿ ದರದಲ್ಲಿ ಔಷಧ ಹಾಗೂ ವೈದ್ಯಕೀಯ ಸಲಕರಣೆಯನ್ನು ಒದಗಿಸುವ ಅತ್ಯಂತ ಅಗ್ಗದ ಯೋಜನೆಯಾಗಿದೆ.
ಜಿಲ್ಲಾವಾರು ಮತ್ತು ಗ್ರಾಮೀಣವಾರು ಜನೌಷಧ ಮಳಿಗೆ
ಮಾರುಕಟ್ಟೆಯಲ್ಲಿನ ಬ್ರ್ಯಾಂಡೆಡ್ ಔಷಧಗಳಿಗಿಂತ ಕಡಿಮೆ ಬೆಲೆಗೆ ಎಲ್ಲರಿಗೂ ಉಚಿತ ಔಷಧೋಪಚಾರ ದೊರಕಲಿದೆ. ಈ ನಿಟ್ಟಿನಲ್ಲಿ ಜನೌಷಧ ಮಳಿಗೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಜನರ ಅವಶ್ಯಕತೆಗೆ ತಕ್ಕಂತೆ ಔಷಧಿಗಳನ್ನು ಒದಗಿಸಲು ಪ್ರತೀ ಜಿಲ್ಲಾವಾರು ಮತ್ತು ಗ್ರಾಮೀಣವಾರು ಜನೌಷಧ ಮಳಿಗೆಗಳನ್ನು ತೆರೆಯಲಾಗುತ್ತಿದೆ.
16ರೂ. ಮಾತ್ರೆ ಜನೌಷಧ ಕೇಂದ್ರದಲ್ಲಿ 4.80ರೂ
ಉದಾಹರಣೆಗೆ ಒಂದು ಆಸ್ಪಿರಿನ್ ಮಾತ್ರೆಯ ಬೆಲೆ ಮಾರುಕಟ್ಟೆಯಲ್ಲಿ 16ರೂಪಾಯಿ ಎಂದಿಟ್ಟು ಕೊಳ್ಳೋಣ ಜನೌಷಧ ಕೇಂದ್ರದಲ್ಲಿ ಅದೇ ಮಾತ್ರೆ 4.80ರೂ. ದೊರೆಯ ಬಹುದು.
ವ್ಯಾಟ್ ತೆರಿಗೆ ಹಾಗೂ ಎಕ್ಸೈಸ್ ಕರ ಇಳಿಕೆ
ಇದು ಇತರೆ ಔಷಧ ಅಂಗಡಿಗಳಲ್ಲಿ ದೊರೆಯುವ ಔಷದಗಳ ಬೆಲೆಗಿಂತ ಕಡಿಮೆ. ಸರ್ಕಾರ ಅಗತ್ಯ ಔಷಧಗಳ ಮೇಲೆ ವ್ಯಾಟ್ ತೆರಿಗೆ ಹಾಗೂ ಎಕ್ಸೈಸ್ ಕರವನ್ನು ಅತ್ಯಂತ ಕಡಿಮೆ ದರಕ್ಕೆ ಇಳಿಸಿದೆ ಹೀಗಾಗಿ ಮತ್ತಷ್ಟು ಕಡಿಮೆ ಬೆಲೆಗೆ ಜನರಿಕ್ ಮಳಿಗೆಗಳಲ್ಲಿ ಔಷಧಗಳು ಮತ್ತು ವೈದ್ಯಕೀಯ ಸಲಕರಣೆಗಳು ಲಭ್ಯ. ವಿಪರ್ಯಾಸವೆಂದರೆ ಈ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ.ಇದರಿಂದ ಪ್ರಜ್ಞಾವಂತ ಜನರು ಈ ಬಗ್ಗೆ ಜನಸಾಮಾನ್ಯರಿಗೆ ಹರಿವು ಮೂಡಿಸುವ ಕಾರ್ಯ ಆಗಬೇಕಿದೆ.