ವಿಶ್ವಶಾಂತಿಗಾಗಿ ಜೈನ ಮುನಿಗಳ ನೇತೃತ್ವದಲ್ಲಿ 8 ದಿನಗಳ ಕಠಿಣ ಉಪವಾಸ
ಬೆಂಗಳೂರು ಆಗಸ್ಟ್ 1 2019: "ವಿಶ್ವದ ಎಲ್ಲಾ ಸಮಾಜದ ಮಾನವರಲ್ಲಿ ಹೆಚ್ಚಾಗುತ್ತಿರುವ ಸಂಘರ್ಷವನ್ನು ತಪ್ಪಿಸುವ ಮೂಲಕ ಸಮಾಜದ ವರ್ಗಗಳ ಮಧ್ಯೆ ಪ್ರೀತಿಯನ್ನು ಹರಡುವುದು ಇಂದಿನ ತುರ್ತು ಅಗತ್ಯವಾಗಿದೆ" ಎಂದು ಉಪಾಧ್ಯಾಯ್ ಪ್ರವೀಣ್ ಋಷಿಜಿ ಕರೆ ನೀಡಿದರು.
ನಗರದ ಅರಮನೆ ಮೈದಾನದಲ್ಲಿ ಗುರು ಆನಂದ ಚಾತುರ್ಮಾಸ ಸಮಿತಿ ಹಮ್ಮಿಕೊಂಡಿದ್ದ ಆಚಾರ್ಯ ಪೂಜ್ಯ ಆನಂದ್ ಋಷಿಜಿ ಅವರ 120 ನೇ ಜನ್ಮ ದಿನದ ಅಂಗವಾಗಿ ಆಯೋಜಿಸಲಾಗಿದ್ದ ವಿಶ್ವಶಾಂತಿಗಾಗಿ ಕಠಿಣ ಉಪವಾಸ ವ್ರತದ ಸಮಾರೋಪ ಸಮಾರಂಭದ ನೇತೃತ್ವವಹಿಸಿ ಅವರು ಮಾತನಾಡಿದರು.
ಇಂದಿನ ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜದ ಮಾನವರ ಮಧ್ಯೆ ಸಂಘರ್ಷದ ಪರಿಸ್ಥಿತಿಗಳು ಹೆಚ್ಚಾಗುತ್ತಿವೆ. ಈ ಸಂಘರ್ಷಗಳನ್ನು ತಡೆಯುವ ಮೂಲಕ ಜನರ ಮಧ್ಯೆ ಪ್ರೀತಿಯನ್ನು ಬೆಳೆಸುವುದು ನಮ್ಮ ಉದ್ದೇಶವಾಗಿದೆ. ಈ ಕಠಿಣ ಉಪವಾಸ ವೃತದಲ್ಲಿ ಕುಷ್ಠರೋಗಿಗಳು, ಮಹಿಳೆಯರು, ವೃದ್ದರು ಪಾಲ್ಗೊಂಡಿದ್ದರು. ಕೇವಲ ನೀರು ಕುಡಿದು 192 ಗಂಟೆಗಳ ಕಾಲ ಉಪವಾಸ ಮಾಡುವುದು ಸುಲಭದ ಕೆಲಸವಲ್ಲ. ಆದರೆ, ತಮ್ಮ ಭಕ್ತಿಯ ಹಾಗೂ ವಿಶ್ವಶಾಂತಿಗಾಗಿ ಈ ವೃತವನ್ನು ಹಮ್ಮಿಕೊಂಡಿದ್ದರು. ಎಲ್ಲಾ ವರ್ಗ, ಜಾತಿಯ ಜನರು ಈ ಮಹತ್ ಕಾರ್ಯದಲ್ಲಿ ಪಾಲ್ಗೊಂಡಿದ್ದು ಬಹಳ ಸಂತಸದ ವಿಷಯ ಎಂದು ಹೇಳಿದರು.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರಚಾರದ ಹಿನ್ನಲೆಯಲ್ಲಿ ಗುರುದೇವ್ ಪ್ರವೀಣ್ ಜಿ ಅವರು ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಉಪವಾಸ ನಿರತರೆಲ್ಲರೂ ವಿಶ್ವಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜೈನ ಸಮುದಾಯದ 5 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.